ಆಸಿಡ್ ನಾಗನ ಪತ್ತೆಗೆ 15 ಸಾವಿರಕ್ಕೂ ಹೆಚ್ಚು ಲಾಡ್ಜ್ನಲ್ಲಿ ಹುಡುಕಿದ ಪೊಲೀಸರು
ಬೆಂಗಳೂರು, ಮೇ11:ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಯುವತಿ ಮೇಲೆ ಆಸಿಡ್ ಎರಚಿ ಪೈಶಾಚಿಕ ಕೃತ್ಯ ಮೆರೆದಿದ್ದ ನಾಗೇಶ ಪೊಲೀಸರಿಗೆ ಇನ್ನೂ ಸಿಗದೇ ತಲೆಮರೆಸಿಕೊಂಡಿದ್ದಾನೆ. ಸೂಪರ್ ಕಾಪ್ಗಳು ಎಂದು ಕರೆಸಿಕೊಳ್ಳುವ ಕರ್ನಾಟಕ ಪೊಲೀಸರಿಗೆ ಚಳ್ಳೆಹಣ್ಣು ತಿನಿಸುತ್ತಿರುವ ನಾಗೇಶ ಯಾವುದೇ ಸುಳಿವನ್ನು ಬಿಟ್ಟುಕೊಟ್ಟಿಲ್ಲ ಎಂದು ಪೊಲೀಸರೇ ಒಪ್ಪಿಕೊಳ್ಳುತ್ತಿದ್ದಾರೆ. ಇದರ ನಡುವೆ ಆಸಿಡ್ ನಾಗೇಶನ ಮತ್ತಷ್ಟು ವಿಕೃತ ಮನೋಭಾವದ ವಿಚಾರಗಳು ತಿಳಿದು ಬಂದಿದೆ.
ಏಪ್ರಿಲ್ 28 ರ ಬೆಳಗ್ಗೆ 8.30 ರ ಸಮಯ. ಬೆಂಗಳೂರಿನ ಸುಂಕದಕಟ್ಟೆಯ ಮುತ್ತೂಟ್ ಮಿನಿ ಫೈನಾನ್ಸ್ ಕಚೇರಿ ಎದುರು ಹೀನಾತಿ ಹೀನ ಕೃತ್ಯವೊಂದು ನಡೆದುಹೋಗಿತ್ತು. ಯುವತಿಯೊಬ್ಬಳ ಮೇಲೆ ಆಸಿಡ್ ಎರಚಿದ ಪರಮ ಪಾಪಿ ನಾಗೇಶ ಪರಾರಿಯಾಗಿದ್ದು,ಪೊಲೀಸರು ಇನ್ನಿಲ್ಲದಂತೆ ಆತನ ಹುಡುಕಾಟ ನಡೆಸ್ತಿದ್ದಾರೆ.ಮತ್ತೊಂದು ಕಡೆ ಅದೇ ಆಸಿಡ್ ನಾಗೇಶ ಈ ಹಿಂದೆ ಕೂಡ ಮತ್ತೊಂದು ಯುವತಿಗೆ ಕಾಟ ಕೊಟ್ಟಿದ್ದ ಅನ್ನೊ ಸಂಗತಿ ತನಿಖೆಯಲ್ಲಿ ಬಹಿರಂಗಗೊಂಡಿದೆ.
ಮತ್ತೋರ್ವ ಯುವತಿಗೆ ಕಾಡಿದ್ದ ಆ್ಯಸಿಡ್ ನಾಗ:
ಆಸಿಡ್ ಎರಚಿದ್ದ ನಾಗನದ್ದು ನಿಜವಾದ ಲವ್ ಅಂತೂ ಅಲ್ವೇ ಅಲ್ಲ. ಚಂದದ ಹುಡುಗಿಯರನ್ನೇ ಟಾರ್ಗೆಟ್ ಮಾಡಿ ಹಿಂದೆ ಬೀಳುತ್ತಿದ್ದ. ಹುಟ್ಟೂರು ಕೊಡಿಯಾಲಂನಲ್ಲಿ ಎರಡು ವರ್ಷದ ಹಿಂದೆ ಯುವತಿಯೋರ್ವಳಿಗೆ ಕಾಟ ಕೊಟ್ಟಿದ್ದ ಆಸಿಡ್ ನಾಗ. ಆಕೆಯನ್ನ ಪ್ರೀತ್ಸೆ..ಪ್ರೀತ್ಸೆ..ಪ್ರೀತ್ಸೆ ಅಂತಾ ಕಾಟ ಕೊಟ್ಟಿದ್ದ. ಆತನ ಕಾಟ ತಾಳಲಾರದೇ ಯುವತಿ ಪೋಷಕರಿಗೆ ವಿಚಾರ ತಿಳಿಸಿದ್ದಳು.ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗ್ತಿದ್ದಂತೆ ಬೆಂಗಳೂರಿಗೆ ಬಂದುಬಿಟ್ಟಿದ್ದ. ಮತ್ತೆ ಚಾಳಿ ಮುಂದುವರೆಸಿದ ಕಿರಾತಕ ಬೆಂಗಳೂರಲ್ಲೂ ಯುವತಿಗೆ ಟಾರ್ಚರ್ ಕೊಟ್ಟಿದ್ದ ಯವತಿ ಒಪ್ಪದೇ ಇದ್ದಾಗ ಆಸಿಡ್ ಹಾಕಿ ಪರಾರಿಯಾಗಿದ್ದಾನೆ.
15 ಸಾವಿರಕ್ಕೂ ಹೆಚ್ಚು ಲಾಡ್ಜ್ನಲ್ಲಿ ಹುಡುಕಾಟ
ಆಸಿಡ್ ನಾಗನ ಪತ್ತೆಗೆ ಪೊಲೀಸರು ಹರಸಾಹಸ ಪಡ್ತಿದ್ದು, ರಾಜ್ಯ ಹೊರ ರಾಜ್ಯಗಳಲ್ಲಿ ತೀವ್ರ ಹುಡುಕಾಟ ನಡೆಸ್ತಿದ್ದಾರೆ. ಅತೀವ ದೈವ ಭಕ್ತನಾಗಿದ್ದ ಪರಮ ಪಾಪಿ ನಾಗೇಶ. ಧರ್ಮಸ್ಥಳ ಮತ್ತು ತಿರುಪತಿಗೆ ನಿರಂತರವಾಗಿ ಹೋಗಿ ಬರ್ತಿದ್ದ. ಅಲ್ಲೇ ಅಡಗಿ ಕುಳಿತಿರಬಹುದು ಎಂದು ಶಂಕಿಸಿದ್ದ ಪೊಲೀಸರು. ತಿರುಪತಿ ಸುತ್ತಮುತ್ತಲಿದ್ದ 4 ಸಾವಿರ ಲಾಡ್ಜ್ ಗಳ ಶೋಧ ನಡೆಸಿದ್ದಾರೆ. ಧರ್ಮಸ್ಥಳದಲ್ಲಿ ಒಂದೇ ಒಂದು ಲಾಡ್ಜ್ ಕೂಡ ಬಿಡದೆ ಹುಡುಕಾಟ ನಡೆಸಿದ್ದಾರೆ. ಕೊಯಮುತ್ತೂರಿನ ಈಶಾ ಫೌಂಡೇಶನ್ನಲ್ಲಿಯೂ ತಡಕಾಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.ಆತನ ಒಂದೇ ಒಂದು ಸುಳಿವು ಕೂಡ ಸಿಗ್ತಾ ಇಲ್ಲ. ಕೇದಾರನಾಥ ಸೇರಿದಂತೆ ಪವಿತ್ರ ಕ್ಷೇತ್ರಗಳತ್ತ ಕಣ್ಣು ಹಾಯಿಸಿರುವ ಖಾಕಿ ಅಲ್ಲಿಯು ತಂಡ ಕಳುಹಿಸಿ ಹುಡುಕಾಟ ನಡೆಸ್ತಿದ್ದಾರೆ.
ನಾಗೇಶ್ ಪತ್ತೆ ಮಾಡೋದು ಖಾಕಿಗೆ ಸಾಧ್ಯವಾಗ್ತಿಲ್ಲ
ಕುಟುಂಬ ಅನ್ನೋ ಸೆಂಟಿಮೆಂಟ್ ಇಲ್ಲದ ನಾಗೇಶ ಮೊಬೈಲ್, ಎಟಿಎಂ, ಯಾವುದನ್ನು ಬಳಸ್ತಿಲ್ಲ. ಸ್ನೇಹಿತರು ಕುಟುಂಬಸ್ಥರು ಯಾರ ಸಂಪರ್ಕ ಕೂಡ ಮಾಡ್ತಿಲ್ಲ. ಯಾರಾದರು ಒಬ್ಬರ ಸಂಪರ್ಕಕ್ಕೆ ಬರುವರೆಗೂ ಆತನ ಪತ್ತೆ ಕಷ್ಟವಾಗಿದ್ದು. ಶಂಕೆ ಮೇಲಷ್ಟೇ ಶೋಧ ನಡೆಸಲಾಗ್ತಿದೆ. ಇನ್ನೂ ಕೇಸ್ ಸಂಬಂಧ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ""ಆರೋಪಿ ಪತ್ತೆಗೆ ಬಹಳ ಪ್ರಯತ್ನ ನಡೀತಿದೆ.ಆರೋಪಿ ಪ್ಲಾನ್ ಮಾಡಿಕೊಂಡು ಕೃತ್ಯ ಎಸಗಿದ್ದರಿಂದ ಪತ್ತೆ ಮಾಡೋದು ಕಷ್ಟವಾಗ್ತಿದೆ. ಆದರೆ ಆತ ಬಹಳ ಸಮಯ ತಪ್ಪಿಸಿಕೊಳ್ಳಲು ಆಗಲ್ಲ, ಸಿಕ್ಕೇ ಸಿಗುತ್ತಾನೆ'' ಎಂದರು.
ಇನ್ನು ಆಸಿಡ್ ದಾಳಿಯಲ್ಲಿ ಗಾಯಗೊಂಡಿರುವ ಯುವತಿಗೆ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು ಚೇತರಿಸಿಕೊಳ್ತಿದ್ದಾಳೆ. ಮತ್ತೊಂದೆಡೆ ಸೈಕೊ ನಾಗನ ಹುಡುಕಾಟವನ್ನು ಕೂಡ ಪೊಲೀಸರು ಹೆಚ್ಚಿಸಿದ್ದಾರೆ. ಅದೇನಾದರು ಸೂಪರ್ ಕಾಪ್ಗಳೆನಿಸಿಕೊಂಡಿರು ಬೆಂಗಳೂರು ಪೊಲೀಸರು ಆಸಿಡ್ ದಾಳಿಕೋರನನ್ನು ಹಿಡಿಯಲು ಇಷ್ಟೊಂದು ಸಮಯ ತೆಗೆದುಕೊಳ್ಳುತ್ತಿರೋದು ತಮಗಿರುವ ಹೆಗ್ಗಳಿಗೆಗೆ ಶೇಮ್ ಶೇಮ್ ಎನಿಸುವಂತಾಗಿದೆ.