ಎಸಿಬಿ ದಾಳಿ : 30 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಅಧಿಕಾರಿ
ಬೆಂಗಳೂರು, ಜೂನ್ 24 : ಕೃಷಿ ಉತ್ಪನ್ನಗಳನ್ನು ಸರಬರಾಜು ಮಾಡುವ ಪರವಾನಿಗೆ ನೀಡಲು ಲಂಚ ಪಡೆಯುತ್ತಿದ್ದ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಬೆಂಗಳೂರಿನ ಯಶವಂತಪುರದಲ್ಲಿ ಶುಕ್ರವಾರ ಈ ದಾಳಿ ನಡೆದಿದೆ.
ಸರ್ಕಾರದ ಕೃಷಿ ಮಳಿಗೆಗಳಿಗೆ ಮತ್ತು ಅಂಗನವಾಡಿಗಳಿಗೆ ಕೃಷಿ ಉತ್ಪನ್ನಗಳನ್ನು ಸರಬರಾಜು ಮಾಡುವವರು ನಿಯಮಾನುಸಾರ ಅನುಮತಿ ಪಡೆಯಬೇಕು. ಅನುಮತಿ ಪಡೆಯಲು ಸಾರ್ವಜನಿಕರು ಸಲ್ಲಿಸಿದ್ದ ಅರ್ಜಿಗೆ ಸಹಿ ಹಾಕಲು ಕೃಷಿ ಮಾರುಕಟ್ಟೆ ಇಲಾಖೆಯ ಉಪ ನಿರ್ದೇಶಕಿ 30 ಸಾವಿರ ರೂ. ಲಂಚ ಕೇಳಿದ್ದರು. [ಶಿವಮೊಗ್ಗದಲ್ಲಿ ಎಸಿಬಿ ಪೊಲೀಸ್ ಠಾಣೆ ಆರಂಭ]

ಈ ಕುರಿತು ಅರ್ಜಿದಾರರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಗೆ ದೂರು ನೀಡಿದ್ದರು. ಶುಕ್ರವಾರ ಯಶವಂತಪುರದ ಎಪಿಎಂಸಿ ಯಾರ್ಡ್ನಲ್ಲಿರುವ ಕೃಷಿ ಮಾರುಕಟ್ಟೆ ಇಲಾಖೆ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಉಪನಿರ್ದೇಶಕಿ ಟಿ.ಪಿ.ಗಾಯತ್ರಿ ಅವರು 30 ಸಾವಿರ ಲಂಚ ಸ್ವೀಕರಿಸುವಾಗ ಬಂಧಿಸಿದರು. [ಭ್ರಷ್ಟಾಚಾರ ನಿಗ್ರಹ ದಳದ ಯಾವ ಕಚೇರಿ ಎಲ್ಲಿರುತ್ತದೆ?]
ಆರೋಪಿಯಾದ ಟಿ.ಪಿ.ಗಾಯತ್ರಿ ಅವರನ್ನು ಬಂಧಿಸಿರುವ ಪೊಲೀಸರು, ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ-1988 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. [ಎಸಿಬಿ ರಚನೆ : ಸಿದ್ದರಾಮಯ್ಯ ಸ್ಪಷ್ಟನೆಗಳು]
ಸರ್ಕಾರಿ ಕಚೇರಿಗಳಲ್ಲಿ ಲಂಚ ಕೇಳಿದರೆ ಸಿಬ್ಬಂದಿಗಳ ವಿವರಗಳನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿ ಅಥವ ದೂರು ನೀಡಿ ಎಂದು ಎಸಿಬಿ ಪ್ರಕಟಣೆಯಲ್ಲಿ ಮನವಿ ಮಾಡಿದೆ.
ವಿಳಾಸ : ಭ್ರಷ್ಟಾಚಾರ ನಿಗ್ರಹ ದಳ,
ನೆಲಮಹಡಿ, ಖನಿಜ ಭವನ,
ರೇಸ್ ಕೋರ್ಸ್ ರಸ್ತೆ, ಬೆಂಗಳೂರು-560001.
ಭ್ರಷ್ಟಾಚಾರ ನಿಗ್ರಹ ದಳ ಸಹಾಯವಾಣಿ : 080-22342100.












Click it and Unblock the Notifications