ರಕ್ತರಹಿತ ಕ್ರಾಂತಿಯಾಗುತ್ತಿರುವ ಅಭಯಾಕ್ಷರ ಜನಾಂದೋಲನ
ಬೆಂಗಳೂರ, ಡಿ 16: ದೇಶದಲ್ಲಿ ಗೋಹತ್ಯೆಯನ್ನು ಸಂಪೂರ್ಣ ನಿಷೇಧಿಸಬೇಕು ಎಂದು ನಾಡಿನ ಪ್ರತಿಯೊಬ್ಬ ಪ್ರಜೆಯೂ ದೇಶದ ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿಗೆ ವೈಯಕ್ತಿಕ ಮನವಿ ಕೊಡುವ ಅಭಯಾಕ್ಷರ ಅಭಿಯಾನ ರಾಜ್ಯದಲ್ಲಿ ರಕ್ತರಹಿತ ಕ್ರಾಂತಿಯಾಗಿ ಮಾರ್ಪಡುತ್ತಿದೆ.
ಅಭಯಾಕ್ಷರ ಅಭಿಯಾನ ರಾಜ್ಯದ ಮೂಲೆ ಮೂಲೆಗಳಲ್ಲಿ ಸಂಚಲನ ಮೂಡಿಸಿದ್ದು, ಜನಸಾಮಾನ್ಯರು, ಗಣ್ಯರು, ವಿದ್ಯಾರ್ಥಿಗಳು ಕೂಡಾ ಸ್ವಯಂಪ್ರೇರಿತರಾಗಿ ಹಕ್ಕೊತ್ತಾಯ ಪತ್ರಕ್ಕೆ ಸಹಿ ಮಾಡುತ್ತಿದ್ದಾರೆ. ಅಭಯಾಕ್ಷರ ಯಾವುದೇ ಜಾತಿ, ಧರ್ಮ ಅಥವಾ ಮಠಕ್ಕೆ ಸೀಮಿತವಾದ ಆಂದೋಲನವಲ್ಲ. ಜಾತಿ ಧರ್ಮಗಳ ಎಲ್ಲೆಯನ್ನು ಮೀರಿ ಜನ ಇದಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಯಾರೂ ಒತ್ತಾಯಪೂರ್ವಕವಾಗಿ ಸಹಿ ಮಾಡಿಸುತ್ತಿಲ್ಲ.
ಗೋವು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ. ಇಸ್ಲಾಂ, ಕ್ರೈಸ್ತ ಧರ್ಮ ಸೇರಿದಂತೆ ಪ್ರತಿಯೊಂದು ಧರ್ಮ ಕೂಡಾ ಗೋಪ್ರೇಮವನ್ನು ಸಾರುತ್ತದೆ. ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲಾ ಧರ್ಮೀಯರು ಸ್ವಪ್ರೇರಣೆಯಿಂದ ಅಭಯಾಕ್ಷರ ಅಭಿಯಾನದಲ್ಲಿ ಪಾಲ್ಗೊಂಡು ಹಸ್ತಾಕ್ಷರ ಸಂಗ್ರಹಿಸುತ್ತಿದ್ದಾರೆ.
ಅಭಯಾಕ್ಷರ ಆಂದೋಲನ ಸಂವಿಧಾನದತ್ತವಾದ ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿ ಬರುವ ಪೂಜನೀಯ ಭಾರತೀಯ ಗೋ ಸಂತತಿಯ ರಕ್ಷಣೆ ಹಾಗೂ ಅಭಿವೃದ್ಧಿಗಾಗಿ ನಡೆಸುತ್ತಿರುವ ಆಂದೋಲನ ಮತ್ತು ಹೋರಾಟ. ಈ ಕಾರ್ಯದಲ್ಲಿ ಈಗಾಗಲೇ 25ಲಕ್ಷ ಹಸ್ತಾಕ್ಷರ ಸಂಗ್ರಹ ಆಗಿದ್ದು, ಇದನ್ನು 5ಕೋಟಿಗೆ ಮುಟ್ಟಿಸುವ ಯೋಜನೆಯನ್ನು ರೂಪಿಸಲಾಗಿದೆ.
ಈ ಪುಣ್ಯ ಕಾರ್ಯದಲ್ಲಿ ಗೋಪ್ರೇಮಿಗಳು ಜಾತಿ, ಮತ, ಧರ್ಮ, ಪಕ್ಷ, ಲಿಂಗ ಬೇಧ ಮರೆತು ಸ್ವಯಂಪ್ರೇರಿತರಾಗಿ ಬಹುಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಆಂದೋಲನದಲ್ಲಿ ಸಜ್ಜನ ಸಮಾಜ ಬಾಂಧವರಿಗೆ ಯಾವುದೇ ರೀತಿಯ ಒತ್ತಡ, ಆಮಿಷ, ಪ್ರಭಾವವನ್ನು ಬಳಸಲಾಗುತ್ತಿಲ್ಲ.
ಕಾರ್ಯಕರ್ತರು ತಮ್ಮ ಬಳಿ ಬಂದಾಗ ತಾವು ಮುಕ್ತ ಮನಸ್ಸಿನಿಂದ ಸ್ವ ವಿವೇಚನೆಯಿಂದ ಸ್ಪಂದಿಸಲು ವಿನಂತಿಸಲಾಗಿದೆ. ಯಾರಿಂದಲೂ ಒತ್ತಾಯ ಪೂರಕವಾಗಿ ಸಹಿಯನ್ನು ಪಡೆಯಲಾಗಿಲ್ಲ, ಪಡಯುವುದೂ ಇಲ್ಲ. ಕಾರ್ಯಕರ್ತರು ಪಡೆಯಲು ಮುಂದಾಗಬಾರದು. ಗೋರಕ್ಷಣೆಯ ಪುಣ್ಯ ಕಾರ್ಯವು ಸದುದ್ದೇಶದಿಂದ ಕೂಡಿದ್ದು ಸಾರ್ವಜನಿಕರು ಮುಕ್ತ ಮನಸ್ಸಿನಿಂದ ಸ್ಪಂದಿಸಲು ಕೋರಲಾಗಿದೆ.