ಡಿಕೆ ಶಿವಕುಮಾರ್ ನಿಜ ಬಣ್ಣ ಬಯಲಾಗಿದೆ, ಸೂಕ್ತ ತನಿಖೆಯಾಗಲಿ: ಎಎಪಿ
ಬೆಂಗಳೂರು, ಅಕ್ಟೋಬರ್ 13: ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯ ವೇಳೆ ಕಾಂಗ್ರೆಸ್ಸನ ಹಿರಿಯ ನಾಯಕರಾದ ಉಗ್ರಪ್ಪ ಮತ್ತು ಸಲೀಂರವರು ಮಾತನಾಡುತ್ತಾ, ''ಡಿ. ಕೆ ಶಿವಕುಮಾರ್ ಒಬ್ಬ ದೊಡ್ಡ ಕಮಿಷನ್ ಗಿರಾಕಿ, 12% ಕಮಿಷನ್ ಹೊಡೆಯುತ್ತಿದ್ದ'' ; ''ಡಿ ಕೆ ಹುಡುಗರ ಹತ್ತಿರ 50-100 ಕೋಟಿ ಇದೆ'' ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಡಿ ಕೆ ಶಿವಕುಮಾರ್ ರವರ ನಿಜ ಬಣ್ಣವನ್ನು ಬಿಚ್ಚಿಟ್ಟಿದ್ದಾರೆ.
Recommended Video
ಇದು ಬಹಳ ಗಂಭೀರವಾದ ವಿಚಾರವಾಗಿದ್ದು, ಸಲೀಂ ಹಾಗೂ ಉಗ್ರಪ್ಪನವರನ್ನು ಮತ್ತು ಇವರಿಬ್ಬರ ಮಾತುಕತೆಯಲ್ಲಿ ಪ್ರಸ್ತಾಪಗೊಂಡ ಉಪ್ಪಾರ, ಜಿ ಶಂಕರ್ ಮತ್ತು ಹನುಮಂತಪ್ಪ ಎಂಬ ವ್ಯಕ್ತಿಗಳನ್ನೂ ಸೂಕ್ತ ತನಿಖೆಗೆ ಒಳಪಡಿಸಬೇಕಾಗಿದೆ.
ಈಗಾಗಲೇ ಡಿ. ಕೆ ಶಿವಕುಮಾರ್ ವಿರುದ್ಧ ಸಿಬಿಐ, ಇಡಿ ಸೇರಿದಂತೆ ಹಲವಾರು ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿದ್ದು, ಈ ಹಿಂದೆ ಡಿ ಕೆ ಶಿವಕುಮಾರ್ ನಿಭಾಯಿಸುತ್ತಿದ್ದ ಇಂಧನ ಇಲಾಖೆಯ ಕಾಮಗಾರಿಗಳ ಬಗ್ಗೆ ಸಮಗ್ರ ತನಿಖೆಯನ್ನು ಮಾಡಬೇಕು ಹಾಗೂ ಸಲೀಂ ಮತ್ತು ಉಗ್ರಪ್ಪ ಮಾಡಿರುವ ಆರೋಪಗಳ ಸತ್ಯಾಸತ್ಯತೆಗಾಗಿ ಡಿ ಕೆ ಶಿವಕುಮಾರ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದುಆಮ್ ಆದ್ಮಿ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಆಗ್ರಹಿಸಿದ್ದಾರೆ.

ಏನಿದು ಘಟನೆ?: ಮಂಗಳವಾರ ಸಂಜೆ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮಾಧ್ಯಮಗೋಷ್ಠಿ ಕರೆದಿದ್ದರು. ಆಗ ಮತ್ತೊಬ್ಬ ಕಾಂಗ್ರೆಸ್ ನಾಯಕ ಸಲೀಂ ಉಗ್ರಪ್ಪ ಅವರನ್ನು ಮಾತಿಗೆ ಎಳೆದಿದ್ದಾರೆ.
ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ: ಹೇಳಿದ್ನಲ್ಲ ಸರ್, ಹಿಂದೆ 6 ರಿಂದ 8 ಪರ್ಸೆಂಟ್ ಇತ್ತು. ಇವನೇ 12 ಪರ್ಸೆಂಟ್ ಮಾಡಿದ್ದು. ಅಡ್ಜಸ್ಟ್ ಮಾಡಿಸೊದ್ರಲ್ಲಿ ಡಿಕೆ (ಡಿ.ಕೆ. ಶಿವಕುಮಾರ್)ದು ಇದೆ. ಉಪ್ಪಾರು, ಜಿ. ಶಂಕರು, ಬಳ್ಳಾರಿಯ ಹನುಮಂತಪ್ಪ, ಗೊತ್ತಲ್ಲ ಸರ್ ಹೊಸಪೇಟೆ. ಇವನು ಉಪ್ಪಾರು ಬೆಂಗಳೂರು, ಜಿ. ಶಂಕರ್ ಉಡುಪಿ.
ಮಾಜಿ ಸಂಸದ ವಿ.ಎಸ್. ಉಗ್ರಪ್ಪ: ಉಪ್ಪಾರ್ ಬಿಜಾಪುರ್. ಸಲೀಂ: ಬಿಜಾಪುರಾನಾ? ಬಟ್ ಮನೆ ಇಲ್ಲಿ, ಎಸ್.ಎಂ. ಕೃಷ್ಣ ಮನೆ ಎದ್ರಿಗೆ. ಅಲ್ಲ ಸರ್. ಇದಿದೆಯಲ್ಲ? ದೊಡ್ಡ ಸ್ಕ್ಯಾಮು ಸರ್. ಕೆದಕ್ತಾ ಹೋದರೆ ಇವ್ರದ್ದು ಬರುತ್ತೆ.
ಮಾಜಿ ಸಂಸದ ವಿ.ಎಸ್. ಉಗ್ರಪ್ಪ: ಅದು ನಿಮ್ಗೆ ಗೊತ್ತಿಲ್ಲ. ನಾವೆಲ್ಲ ಪಟ್ ಹಿಡಿದು ಅಧ್ಯಕ್ಷನ್ನ ಮಾಡಿಸಿದ್ವಿ. ಆದ್ರೆ ತಕ್ಕಡಿ ಏಳ್ತಿಲ್ಲ. ಇವೆಲ್ಲ ಕಾರಣದಿಂದ.
ಸಲೀಂ: ಇವೆಲ್ಲ ಕಾರಣದಿಂದ. ಮತ್ತೆ ನೀವು ನೋಡುದ್ರಲ್ಲಾ? ಮಾತಾಡೋವಾಗ ತೊದಲ್ಸಿ ಬಿಡ್ತಾರೆ. ಏನು ಲೋ ಬಿಪಿನಾ? ಏನೊ. ನೋಡಿ ನೀವು ಕುಡುಕ್ರು ಉ..
ಮಾಜಿ ಸಂಸದ ವಿ.ಎಸ್. ಉಗ್ರಪ್ಪ: ಅದನ್ನೇ ಹೇಳಿದ್ದು ಈಗ! ಸಲೀಂ: ಹ್ಞುಂ ಅದನ್ನೇ ಅವರಿಗೆ ಅಂಡರ್ ಅಷ್ಟು ಅರ್ಥ ಆಗಿಲ್ಲ. ಎಲ್ಲ ಮಿಡಿಯಾದವರು ಏನ್ ಡ್ರಿಂಕ್ಸ್ ಮಾಡಿದ್ರಾ ಅಂತಾರೆ. ಡ್ರಿಂಕ್ಸ್ ಮಾಡಿರಲಿಲ್ಲ. (ನಗು) ಅದು ಆ್ಯಕ್ಚುವಲಿ.. ಹ್ಹ ಹ್ಹ ಹ್ಹ..!
ಮಾಜಿ ಸಂಸದ ವಿ.ಎಸ್. ಉಗ್ರಪ್ಪ: ಆಹ್ಹಹ್ಹಹ್ಹ....!
ಸಲೀಂ: ಲೋ ಬಿಪಿ.. ಇಲ್ಲ ಮಾತನಾಡಬೇಕಾದ್ರ ಬಾರಿ ಎಮೋಶನಲಿ ಹೋಗ್ತಾರೆ. ಬಾಡಿ ಲಾಂಗ್ವೇಜ್ ಹೆಂಗಿದೆ ಸರ್? ಸಿದ್ರಾಮಯ್ಯನೋರದ್ದು? ಖಡಕ್ ಅಂದ್ರೆ ಖಡಕ್. ಇವ್ರದ್ದಿಲ್ಲ!
ವಿಎಸ್ ಉಗ್ರಪ್ಪ ಹಾಗೂ ಸಲೀಂ ಅವರು ಮಾತನಾಡಿಕೊಂಡಿರುವ ಈ ಎಲ್ಲ ಚರ್ಚೆಯು ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದೆ.(ಸಂಭಾಷಣೆಯ ಪೂರ್ಣ ಪಾಠ ಇಲ್ಲಿದೆ)
ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ಕ್ರಮ ಜರುಗಿಸಿದ ಕಾಂಗ್ರೆಸ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕುರಿತು ಅವಹೇಳನಕಾರಿ ಮಾತುಗಳನ್ನು ಆಡಿದ್ದ ಕೆಪಿಸಿಸಿ ಮಾಧ್ಯಮ ಸಂಯೋಜಕ ಎಂ.ಎ. ಸಲೀಂರನ್ನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿದೆ, ವಿಎಸ್ ಉಗ್ರಪ್ಪ ಅವರಿಗೆ ಶೋಕಾಸ್ ನೋಟಿಸ್ ನೀಡಿ ಈ ಬಗ್ಗೆ ಸ್ಪಷ್ಟನೆ ಕೋರಲಾಗಿದೆ ಎಂದು ಕೆಪಿಸಿಸಿ ಶಿಸ್ತು ಪಾಲನಾ ಅಧ್ಯಕ್ಷ ಕೆ. ರೆಹಮಾನ್ ಖಾನ್ ಆದೇಶದಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ನ ಭ್ರಷ್ಟಾಚಾರ, ಕರ್ಮಕಾಂಡ ಇವತ್ತು ಬಯಲಿಗೆ ಬಂದಿದೆ. ಡಿ. ಕೆ. ಶಿವಕುಮಾರ್ ಕಲೆಕ್ಷನ್ ಗಿರಾಕಿಗಳು ಅಂತ ನಾವು ಹೇಳಿಲ್ಲ, ಕಾಂಗ್ರೆಸ್ ನಾಯಕರೇ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರ ಬಗ್ಗೆ ಬಹಳ ಕೀಳಾಗಿ ಕಲೆಕ್ಷನ್ ಗಿರಾಕಿ, ಹಫ್ತಾ ವಸೂಲಿ, ಭ್ರಷ್ಟಾಚಾರ ಎಲ್ಲಾ ಹೊರಗೆ ಹಾಕಿದ್ದಾರೆ. ಅವರ ಹುಡುಗರಲ್ಲೇ 500 ಕೋಟಿ ಇದೆ ಅಂತ ಹೇಳಿದ್ದಾರೆ. ಈ ಬಗ್ಗೆ ಅಗತ್ಯವಾಗಿ ಸಿಬಿಐ ಮತ್ತು ಐಟಿ ತನಿಖೆ ಆಗಬೇಕು" ಎಂದು ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.












Click it and Unblock the Notifications