ಖಾಸಗಿ ಟ್ರಸ್ಟ್ಗೆ ಕೆಎಸ್ಆರ್ಟಿಸಿ ಆಸ್ಪತ್ರೆ: ತೇಜಸ್ವಿ ಸೂರ್ಯ ವಿರುದ್ಧ ಎಎಪಿ ಕಿಡಿ
ಬೆಂಗಳೂರು, ಸೆಪ್ಟಂಬರ್ 18: ಸಾಕಷ್ಟು ವಿರೋಧದ ನಡುವೆಯೂ ಬೆಂಗಳೂರಿನ ಜಯನಗರದ ನಾಲ್ಕನೇ ಬ್ಲಾಕ್ನಲ್ಲಿರುವ ಕೆಎಸ್ಆರ್ಟಿಸಿ ಆಸ್ಪತ್ರೆಯನ್ನು ಖಾಸಗಿ ಟ್ರಸ್ಟ್ಗೆ ನೀಡಲು ನಿರ್ಧರಿಸಿರುವ ಸಂಸದ ತೇಜಸ್ವಿ ಸೂರ್ಯ ಅವರ ನಡೆಗೆ ಆಮ್ ಆದ್ಮಿ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಭಾನುವಾರ ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಆಮ್ ಆದ್ಮಿ ಪಕ್ಷ (ಎಎಪಿ) ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ,''ಕೆಎಸ್ಆರ್ಟಿಸಿ ಕೇಂದ್ರ ವಿಭಾಗದ ಮುಖ್ಯ ಸಂಚಾರ ವ್ಯವಸ್ಥಾಪಕರು ಉನ್ನತ ದರ್ಜೆಗೇರಿಸುವ ದೃಷ್ಟಿಯಿಂದ ಆಸ್ಪತ್ರೆಯನ್ನು ಖಾಸಗಿಯವರಿಗೆ ನೀಡಲು ಕಳೆದ ಜುಲೈ25 ರಂದು ಟೆಂಡರ್ ಆಹ್ವಾನಿಸಿದ್ದರು. ಆದರೆ ಟೆಂಡರ್ ಆಹ್ವಾನದ ಜಾಹೀರಾತಿನಲ್ಲಿರುವ ಹಲವು ಅಂಶಗಳು ಕುರಿತು ಅನುಮಾನಗಳಿವೆ'' ಎಂದು ಹೇಳಿದರು.
ಸಾರಿಗೆ ನೌಕರರ ಆತ್ಮಹತ್ಯೆ: ಶ್ರೀರಾಮುಲು ವಜಾಗೆ ಎಎಪಿ ಮನವಿ
ಖಾಸಗಿಯವರಿಗೆ ಕೆಎಸ್ಆರ್ಟಿಸಿ ಆಸ್ಪತ್ರೆ ಹಸ್ತಾಂತರ ಟೆಂಡರ್ನಲ್ಲಿ ಚಾರಿಟಿ ಚಟುವಟಿಕೆಗಳಲ್ಲಿ ಕನಿಷ್ಠ 25 ವರ್ಷಗಳ ಅನುಭವ ಇರುವವರು ಹಾಗೂ ಚಾರಿಟಿ ಆಸ್ಪತ್ರೆಯನ್ನು ನಿಭಾಯಿಸಿದವರು ಮಾತ್ರ ಟೆಂಡರ್ನಲ್ಲಿ ಭಾಗವಹಿಬಹುದು ಎಂದಿದೆ. ಸಂಸದರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಆಸ್ಪತ್ರೆಗೆ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ಇದರಿಂದ ಆಸ್ಪತ್ರೆಯ ವಿಚಾರದಲ್ಲಿ ಸಂಸದ ತೇಜಸ್ವಿ ಸೂರ್ಯಗೆ ಮೂಗು ತೂರಿಸಲು ಅವಕಾಶ ನೀಡಿದಂತಾಗಿದೆ.
ಆಪ್ತರಿಗೆ ಟೆಂಡರ್ ನೀಡಲು ಆಹ್ವಾನ
ಒಂದು ನಿರ್ದಿಷ್ಟ ಟ್ರಸ್ಟ್ಗೆ ಟೆಂಡರ್ ನೀಡಲೆಂದೇ ನಾಟಕೀಯವಾಗಿ ನಿಯಮಗಳನ್ನು ರೂಪಿಸಿ ಟೆಂಡರ್ ಕರೆದಿರುವುದು ಇದರಿಂದ ಗೊತ್ತಾಗುತ್ತದೆ. ಈ ಮೂಲಕ ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ಆಪ್ತರಿಗೆ ಟೆಂಡರ್ ನೀಡಲೆಂದೇ ಎಂಪಿಎಲ್ಎಡಿ ನಿಧಿಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.
1951ರಲ್ಲಿ ಆರಂಭವಾದ ಶ್ರೀ ವಾಸವಿ ಟ್ರಸ್ಟ್ ಎಂಬ ಖಾಸಗಿ ಟ್ರಸ್ಟ್ಗೆ ಕೆಎಸ್ಆರ್ಟಿಸಿ ಆಸ್ಪತ್ರೆಯನ್ನು ಟೆಂಡರ್ನಡಿ ನೀಡಲು ತೇಜಸ್ವಿ ಸೂರ್ಯ ಉತ್ಸುಕರಾಗಿದ್ದಾರೆ ಎಂದು ವರದಿಯಾಗಿತ್ತು. ಇದಕ್ಕೆ ಆಸ್ಪತ್ರೆಯ ಸಿಬ್ಬಂದಿ ಸಾಕಷ್ಟು ವಿರೋಧ ವ್ಯಕ್ತಪಡಿಸಿದರು. ಇಷ್ಟಾದರೂ ಸಂಸದರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ ಎಂದರು.
ಕಾಂಗ್ರೆಸ್ ಕಳುಹಿಸಿದ ದೋಸೆ ಇನ್ನೂ ನನಗೆ ತಲುಪಿಲ್ಲ: ತೇಜಸ್ವಿ ಸೂರ್ಯ
ಆಸ್ಪತ್ರೆ ಖಾಸಗಿ ಪಾಲಾಗದಂತೆ ಸಿಎಂಗೆ ಪತ್ರ
ಕೆಎಸ್ಆರ್ಟಿಸಿ ಸಿಬ್ಬಂದಿ ಹಾಗೂ ನೌಕರರ ಒಕ್ಕೂಟವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಸೆಪ್ಟೆಂಬರ್ 16ರಂದು ಪತ್ರ ಬರೆದಿದೆ. ತಾವು ಮಧ್ಯ ಪ್ರವೇಶಿಸಿ ಆಸ್ಪತ್ರೆ ಖಾಸಗಿಯವರ ಪಾಲಾಗುವುದನ್ನು ತಡೆಯಬೇಕು ಎಂದು ಮನವಿ ಮಾಡಲಾಗಿದೆ. ಮುಖ್ಯಮಂತ್ರಿಗಳು ಆಸ್ಪತ್ರೆ ಹಸ್ತಾಂತರ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅದು ಖಾಸಗಿಯವರ ಪಾಲಾಗುವುದನ್ನು ತಪ್ಪಿಸಬೇಕು. ಆಸ್ಪತ್ರೆಯ ಸಿಬ್ಬಂದಿ ಹಾಗೂ ಕೆಎಸ್ಆರ್ಟಿಸಿ ನೌಕರರ ಜೊತೆ ಚರ್ಚಿಸಿ ಆಸ್ಪತ್ರೆಯನ್ನು ಆಧುನೀಕರಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮೋಹನ್ ದಾಸರಿ ಆಗ್ರಹಿಸಿದ್ದಾರೆ.
ಏನಿದು ಕೆಎಸ್ಆರ್ಟಿಸಿ ಹಸ್ತಾಂತರ ವಿಚಾರ?
ಕೆಎಸ್ಆರ್ಟಿಸಿ ಆಸ್ಪತ್ರೆ ಸಾರಿಗೆ ನಿಗಮದ ಸಿಬ್ಬಂದಿಗೆ ಹಾಗೂ ಕುಟುಂಬಕ್ಕೆ ಸೇವೆ ನೀಡುತ್ತಿದೆ. ಇದನ್ನು ಉನ್ನತ ದರ್ಜೆಗೆ ಏರಿಸಲು ಕೆಎಸ್ಆರ್ಟಿಸಿ ಸ್ಟಾಫ್ ಆಂಡ್ ವರ್ಕಸ್ ಫೆಡರೇಷನ್ ಸರ್ಕಾರಕ್ಕೆ ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸದ ಸರ್ಕಾರ ಸಂಸದ ತೇಜಸ್ವಿ ಸೂರ್ಯ ಅವರ ಒತ್ತಡದಿಂದಾಗಿ ಶ್ರೀ ವಾಸವಿ ಚಾರಿಟಬಲ್ ಟ್ರಸ್ಟಗೆ ನೀಡಲು ತುದಿಗಾಲಲ್ಲಿ ನಿಂತಿದೆ. ಆಸ್ಪತ್ರೆ ಹಸ್ತಾಂತರಕ್ಕೆ ನಾನು ಒತ್ತಡ ಹಾಕಿಲ್ಲ ಎಂದಿದ್ದ ಸಂಸದರು ಇನ್ನೂ ಆಸ್ಪತ್ರೆ ಹಸ್ತಾಂತರ ನಿರ್ಧಾರದಿಂದ ಹಿಂದೆ ಸರಿದಿಲ್ಲ ಎಂದು ಈ ಹಿಂದೆ ಫೆಡರೇಷನ್ ಆರೋಪಿಸಿತ್ತು.
ಹೋರಾಟದ ಎಚ್ಚರಿಕೆ ನೀಡಿದ ಫೆಡರೇಷನ್
ಸರ್ಕಾರ ನಿಗಮದ ಸಿಬ್ಬಂದಿಗಾಗಿ ಇರುವ 48 ಹಾಸಿಗೆ ಸೇರಿ ಅಗತ್ಯ ಸೌಲಭ್ಯವುಳ್ಳ ಕೆಎಸ್ಆರ್ಟಿಸಿ ಆಸ್ಪತ್ರೆಯನ್ನು ಖಾಸಗಿಯವರಿಗೆ ನೀಡುವುದರಿಂದ ನಿಗಮಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ. ಇದು ಖಾಸಗಿಯವರ ಸೇವೆಗಾಗಿ ಕಟ್ಟಿರುವುದಲ್ಲ. ಇದರನ್ನು ಮನಗಂಡು ಸರ್ಕಾರ ನಮ್ಮ ಮನವಿಗೆ ಸ್ಪಂದಿಸಬೇಕು. ಇಲ್ಲವಾದರೆ ಸಾರಿಗೆ ನಿಗಮದ ಸಿಬ್ಬಂದಿ ವಿರುದ್ಧದ ಕ್ರಮ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರ ಅನೈತಿಕ ಒತ್ತಡದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಈಗಾಗಲೇ ಫೆಡರೇಷನ್ ಎಚ್ಚರಿಕೆ ನೀಡಿದೆ.