ವಿದ್ಯುತ್ ದರ ಹೆಚ್ಚಿಸದಂತೆ ಎಎಪಿ ಮುಖಂಡ ಭಾಸ್ಕರ್ ರಾವ್ ಆಗ್ರಹ
ಬೆಂಗಳೂರು, ಸೆಪ್ಟಂಬರ್ 28: ರಾಜ್ಯದಲ್ಲಿ ಅಕ್ಟೋಬರ್ 1ರಿಂದ ವಿದ್ಯುತ್ ದರವನ್ನು ಏರಿಕೆ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಶೀಘ್ರವೇ ಹಿಂಪಡೆಯಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಆಗ್ರಹಿಸಿದ್ದಾರೆ.
ವಿದ್ಯುತ್ ದರ ಏರಿಕೆ ಕುರಿತು ಬುಧವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಭಾಸ್ಕರ್ ರಾವ್, ಕಲ್ಲಿದ್ದಲು ಬೆಲೆಯಲ್ಲಿ ಸಣ್ಣ ಏರಿಕೆಯಾಗಿದೆ. ಅದನ್ನೇ ನೆಪ ಮಾಡಿಕೊಂಡಿರುವ ಬಿಜೆಪಿ ಸರ್ಕಾರ ಜನರಿಗೆ ವಿದ್ಯುತ್ ಶಾಕ್ ನೀಡಲು ಮುಂದಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗುವಂತಹ ಸರ್ಕಾರದ ಈ ನಿರ್ಧಾರ ಖಂಡನೀಯ ಎಂದರು.
Electricity Price Hike: ಈ ವರ್ಷದಲ್ಲಿ ಗ್ರಾಹಕರಿಗೆ 3ನೇ ಬಾರಿ 'ವಿದ್ಯುತ್ ದರ ಏರಿಕೆ' ಶಾಕ್
ಕಲಿದ್ದಲು ಬೆಲೆ ಇಳಿಕೆಯಾದಾಗ ಸರ್ಕಾರವು ವಿದ್ಯುತ್ ದರವನ್ನು ಇಳಿಕೆ ಮಾಡುವುದಿಲ್ಲ. ಹೀಗಿರುವಾಗ ಕಲ್ಲಿದ್ದಲು ಬೆಲೆ ಏರಿಕೆಯಾದಾಗ ವಿದ್ಯುತ್ ದರ ಏರಿಕೆ ಮಾಡುವುದು ಎಷ್ಟು ಸರಿ?. ಸರ್ಕಾರಿ ಕಚೇರಿಗಳು ಬಾಕಿ ಉಳಿಸಿಕೊಂಡಿರುವ ಸಾವಿರಾರು ಕೋಟಿ ರೂಪಾಯಿಯನ್ನು ವಸೂಲಿ ಮಾಡದ ಕಾರಣಕ್ಕೆ ವಿದ್ಯುತ್ ಕಂಪನಿಗಳು ನಷ್ಟ ಅನುಭವಿಸುತ್ತಿವೆ. ಆ ನಷ್ಟವನ್ನು ಜನರ ತಲೆಗೆ ಕಟ್ಟುವುದು ಸರ್ಕಾರದ ಅಸಮರ್ಥತೆಯನ್ನು ತೋರಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ಸಾಧ್ಯವಾದದ್ದು, ರಾಜ್ಯದಲ್ಲಿ ಆಗಲ್ವಾ?
ದೆಹಲಿಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಆದರೂ ದೆಹಲಿಯ ಆಮ್ ಆದ್ಮಿ ಪಕ್ಷ ನೇತೃತ್ವದ ಸರ್ಕಾರವು ಅಲ್ಲಿ ಪ್ರತಿ ಕುಟುಂಬಕ್ಕೂ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಪೂರೈಸುತ್ತಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರ ಬಂದ ನಂತರ ಅಲ್ಲಿ ವಿದ್ಯುತ್ ದರವನ್ನು ಏರಿಕೆ ಮಾಡಿಲ್ಲ. ದೆಹಲಿಯಲ್ಲಿ ಸಾಧ್ಯವಾಗಿದ್ದು ಕರ್ನಾಟಕದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ? ಎಂಬ ಬಗ್ಗೆ ನಾವೆಲ್ಲ ಗಂಭೀರವಾಗಿ ಯೋಚಿಸಬೇಕಿದೆ. ಜನರು ಪಾವತಿಸುವ ಶುಲ್ಕವು ಭ್ರಷ್ಟರ ಪಾಲಾಗುತ್ತಿದ್ದರೆ, ಎಷ್ಟೇ ಶುಲ್ಕ ಏರಿಕೆ ಮಾಡಿದರೂ ಸಂಸ್ಥೆಗಳು ನಷ್ಟದಲ್ಲೇ ಮುಂದುವರಿಯುತ್ತವೆ ಎಂದು ಅವರು ಹೇಳಿದರು.
ಬೆಂಗಳೂರು: ಇಂಧನ ಹೊಂದಾಣಿಕೆ ಶುಲ್ಕ ಪರಿಷ್ಕರಿಸಿ ಕೆಇಆರ್ಸಿ ಆದೇಶ
1 ವರ್ಷದಲ್ಲಿ 3 ಬಾರಿ ವಿದ್ಯುತ್ ದರ ಏರಿಕೆ
ಮುಖ್ಯಮಂತ್ರಿ ಬೊಮ್ಮಾಯಿ ಅವರ ಬಿಜೆಪಿ ಸರ್ಕಾರವು ಕಳೆದ ಒಂದು ವರ್ಷದಲ್ಲಿ ಮೂರನೇ ಸಲ ವಿದ್ಯುತ್ ದರ ಏರಿಕೆ ಮಾಡುತ್ತಿದೆ. ಪದೇ ಪದೆ ವಿದ್ಯುತ್ ದರ ಏರಿಕೆ ಮಾಡಿ ಜನಸಾಮಾನ್ಯರ ಜೊತೆ ಚೆಲ್ಲಾಟವಾಡುತ್ತಿರುವ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಬೇಕು. ಅಗತ್ಯ ವಸ್ತುಗಳು ಹಾಗೂ ಅಗತ್ಯ ಸೌಲಭ್ಯಗಳ ಬೆಲೆ ಏರಿಕೆಯು ಮುಂದಿನ ಚುನಾವಣೆಗಳಲ್ಲಿ ಪ್ರಮುಖ ವಿಷಯವಾಗಬೇಕು ಎಂದು ಭಾಸ್ಕರ್ ರಾವ್ ಅಭಿಪ್ರಾಯಪಟ್ಟರು.
ಕೆಇಆರ್ಸಿಯಿಂದ ದರ ಏರಿಸಿ ಆದೇಶ
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ)ವು ಇತ್ತೀಚೆಗೆ ವಿದ್ಯುತ್ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿತ್ತು. ಅದರನ್ವಯ ಅಕ್ಟೋಬರ್ 1 ರಿಂದ ಮುಂದಿನ ಆರು ತಿಂಗಳು ಅಂದರೆ 2023ರ ಮಾರ್ಚ್ವರೆಗೆ ಪ್ರತಿ ಯೂನಿಟ್ ಮೇಲೆ ಜನರು ಅಧಿಕ ದರ ಪಾವತಿಸಬೇಕಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ಗೆ 43ಪೈಸೆ ಹೆಚ್ಚುವರಿಯಾಗಿ ಕಟ್ಟಬೇಕಿದೆ. ಸರ್ಕಾರದ ಈ ನಿರ್ಧಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.
ಹೋಟೆಲ್ ಸಂಘದಿಂದ ವಿರೋಧ
ವಿದ್ಯತ್ ದರ ಪರಿಷ್ಕರಣೆ ಕುರಿತು ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಅವರು ಸಹ ವಿರೋಧಿಸಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದರು. ಹೋಟೆಲ್ ಹಾಗೂ ಮತ್ತಿತರ ಉದ್ಯಮಗಳು ಕೋವಿಡ್ ನಷ್ಟ ಅನುಭವಿಸಿ ಇದೀಗ ಸಣ್ಣಮಟ್ಟಿಗೆ ಚೇತರಿಸಿಕೊಳ್ಳುತ್ತಿವೆ. ಅಷ್ಟರಲ್ಲಾಗಲೇ ವಿದ್ಯುತ್ ದರ ಹೆಚ್ಚಳ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಇದರಿಂದ ಸಾಕಷ್ಟು ಆರ್ಥಿಕ ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ 2023ರ ಮಾರ್ಚ್ ಅಂತ್ಯದವರೆಗೆ ಅನ್ವಯವಾಗುವಂತೆ ವಿದ್ಯುತ್ ದರ ಪರಿಷ್ಕರಣೆ ಮಾಡಿ ಹೊರಡಿಸಿದ ಆದೇಶವನ್ನು ಸರ್ಕಾರ 2023ರ ಏಪ್ರೀಲ್ ವರೆಗೆ ಮುಂದೂಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.