ಎಎಪಿಯಿಂದ ಚಾಮರಾಜನಗರದಲ್ಲಿ ಗ್ರಾಮಸಂಪರ್ಕ ಅಭಿಯಾನ
ಬೆಂಗಳೂರು, ಜುಲೈ, 20: ಆಮ್ ಆದ್ಮಿ ಪಕ್ಷ ಚಾಮರಾಜನಗರ ಜಿಲ್ಲಾ ಕಾರ್ಯಕರ್ತರ ಸಮಾವೇಶ ಹಾಗೂ ಗ್ರಾಮಸಂಪರ್ಕ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ವಿಜಯ್ ಶರ್ಮಾ, ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಅವರು ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ, ಗ್ರಾಮಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ವಿಜಯ್ ಶರ್ಮಾ ಅವರು ಮಾತನಾಡಿ, "ಇಂದು ದೇಶದಲ್ಲಿ ಬೆಲೆ ಏರಿಕೆ, ಮಿತಿಮೀರಿದ ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ಜನರು ತತ್ತರಿಸುತ್ತಿದ್ದಾರೆ. ಅಲ್ಲದೇ ಅಗತ್ಯವಸ್ತುಗಳನ್ನು ಖರೀದಿಸಲು ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ," ಎಂದು ಹೇಳಿದರು.
ಇಂತಹ ಪರಿಸ್ಥಿತಿಯಲ್ಲಿ ಜನರ ತೆರಿಗೆಯನ್ನು ಸದುಪಯೋಗ ಪಡಿಸಿಕೊಂಡು ಅತ್ಯುತ್ತಮ ಹಾಗೂ ಮಾದರಿ ಆಡಳಿತ ನೀಡುತ್ತಿರುವ ಆಮ್ ಆದ್ಮಿ ಪಕ್ಷವು ಜನರಿಗೆ ಆಶಾಕಿರಣವಾಗಿ ಗೋಚರಿಸಿದೆ. ಪಕ್ಷದ ಸಾಧನೆಗಳು ಹಾಗೂ ವಿಚಾರಧಾರೆಯನ್ನು ಮನೆಮನೆಗೂ ಮುಟ್ಟಿಸುವ ಕೆಲಸ ಆಗಬೇಕಿದೆ. ಜನರಿಗೆ ಸಹಾಯವಾಗುವಂತೆ ಬೆಲೆ ಏರಿಕೆ ಖಂಡಿಸಿ ಹೋರಾಟ ಮಾಡಬೇಕಿದೆ ಎಂದು ವಿಜಯ್ ಶರ್ಮಾ ಹೇಳಿದ್ದಾರೆ.

ತದನಂತರ ರಾಜ್ಯ ಕಾರ್ಯದರ್ಶಿ ದರ್ಶನ್ ಜೈನ್ ಅವರು ಮಾತನಾಡಿ, ಗ್ರಾಮ ಪಂಚಾಯತಿ ಅಭಿಯಾನದ ರೂಪುರೇಷೆ ಮತ್ತು ಅಭಿಯಾನವನ್ನು ಅನುಷ್ಠಾನಗೊಳಿಸುವ ಬಗ್ಗೆ ತಿಳಿಸಿದರು. ಚಾಮರಾಜನಗರದಲ್ಲಿ ಈ ಹಿಂದೆ ನಡೆದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಇದುವರೆಗೂ ಸರಿಯಾದ ಪರಿಹಾರ ದೊರತಿಲ್ಲ. ಈ ಬಗ್ಗೆ ಜಿಲ್ಲೆಯಲ್ಲಿ ಹೋರಾಟ ಮಾಡಲು ಮುಂದಾಗಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಮಾಧ್ಯಮ ಸಂಯೋಜಕರಾದ ಜ್ಯೋತಿಷ್, ಸ್ಥಳೀಯ ಮುಖಂಡರಾದ ಕಂದಹಳ್ಳಿ ಮಹೇಶ್ ಸೇರಿದಂತೆ ಮತ್ತಿತರು ಭಾಗವಹಿಸಿದ್ದರು. ದೇಶದಲ್ಲಿ ಒಂದು ಕಡೆ ಬೆಲೆ ಏರಿಕೆ, ಮತ್ತೊಂದೆಡೆ ಜಿಎಸ್ಟಿ ಹೆಚ್ಚಳ ಮಾಡಿರುವುದು ಜನರ ಹೊಟ್ಟೆ ಮೇಲೆ ಹೊಡೆದಂತಾಗಿದೆ. ಚಾಮರಾಜನಗರದಲ್ಲಿ ಗ್ರಾಮ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿದ್ದು, ಜನರ ಸಮಸ್ಯೆಗಳನ್ನು ಆಲಿಸುವಂತೆ ತಮ್ಮ ಕಾರ್ಯಕರ್ತರಿಗೆ ಆಮ್ ಆದ್ಮಿ ಪಕ್ಷ ಸೂಚಿಸಿದೆ.












Click it and Unblock the Notifications