ಬೆಂಗಳೂರಲ್ಲಿ ದಿನಸಿ ಅಭಾವ ಕಾಡಲಿದೆ, ಎಎಪಿ ರಿಯಾಲಿಟಿ ಚೆಕ್
ಬೆಂಗಳೂರು, ಏಪ್ರಿಲ್ 6: ಬೆಂಗಳೂರಿನಲ್ಲಿರುವ ಸ್ಥಳೀಯ ದಿನಸಿ ಅಂಗಡಿಗಳಲ್ಲಿ ಇದುವರೆವಿಗೂ ದೊರಕುತ್ತಿರುವ ದಿನಸಿ ವಸ್ತುಗಳು ಮುಗಿಯುತ್ತಾ ಬಂದಿದ್ದು , ಇನ್ನೆರಡು ದಿವಸಗಳಲ್ಲಿ ಈ ಎಲ್ಲ ವಸ್ತುಗಳಿಗೆ ಅಭಾವ ತರುವ ಸಂಭವವಿದೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
ಇಂದು ಬೆಳಗ್ಗಿನಿಂದ ಆಮ್ ಆದ್ಮಿ ಪಕ್ಷದ ಎಲ್ಲ ವಿಧಾನಸಭಾ ಕಾರ್ಯಕರ್ತರುಗಳು ತಮ್ಮತಮ್ಮ ವ್ಯಾಪ್ತಿಯಲ್ಲಿನ ಅಂಗಡಿಗಳಿಗೆ ಭೇಟಿ ನೀಡಿ ಅಲ್ಲಿನ ವ್ಯಾಪಾರಸ್ಥರ ಬಳಿ ಮಾತನಾಡಿಸಿದಾಗ ಈ ಅಂಶವು ಬೆಳಕಿಗೆ ಬಂದಿದೆ. ಎರಡು ದಿನಗಳಿಗಾಗುವಷ್ಟು ದಿನಸಿಗಳು ಮಾತ್ರ ನಮ್ಮಲ್ಲಿ ಲಭ್ಯವಿದ್ದು ಮುಂದಿನ ದಿನಗಳಲ್ಲಿ ದಿನಸಿ ವಸ್ತುಗಳ ಅಭಾವವಾಗುವ ಸಂಭವವಿದೆ ಎಂದು ತಮ್ಮ ಆತಂಕವನ್ನು ವ್ಯಾಪಾರಸ್ಥರು ವ್ಯಕ್ತಪಡಿಸಿದ್ದಾರೆ.
ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸಾಕಷ್ಟು ದಿವಸಗಾಗುವಷ್ಟು ದಿನಸಿಗಳು ಲಭ್ಯವಿದ್ದರೂ ಸಹ ಅಲ್ಲಿಂದ ನಗರದ ಸ್ಥಳೀಯ ಪ್ರದೇಶದ ಅಂಗಡಿಗಳಿಗೆ ತಲುಪಿಸುವ ವ್ಯವಸ್ಥೆಯು ತುಂಡಾಗಿರುವುದು ಇದಕ್ಕೆಲ್ಲಾ ಕಾರಣವೆಂದು ಹೇಳುತ್ತಾರೆ. ಇದಕ್ಕೆ ಮೂಲ ಕಾರಣ ಕೂಲಿ ಕಾರ್ಮಿಕರ ಅಭಾವ . ಹೀಗಾಗಿ, ವ್ಯಾಪಾರಸ್ಥರು, ದಾಸ್ತಾನು, ಆಹಾರ ಧಾನ್ಯಗಳ ಪೂರೈಕೆ, ಕೂಲಿ ಕಾರ್ಮಿಕರ ಬಗ್ಗೆ ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ.

ಕೂಲಿ ಕಾರ್ಮಿಕರಿಗೆ ತುಂಬಾ ಸಮಸ್ಯೆಯಾಗಿದೆ
ಪ್ರತಿ ದಿವಸವೂ ಸ್ಥಳೀಯ ಅಂಗಡಿಗಳಿಗೆ ಹಾಗೂ ಎಪಿಎಂಸಿ ಮಾರುಕಟ್ಟೆಗಳಿಗೆ ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿದ್ದ ಕೂಲಿ ಕಾರ್ಮಿಕರುಗಳು ಏಕಾಏಕಿ ಲಾಕ್ ಡೌನ್ ನಿಂದಾಗಿ ಕೆಲಸಕ್ಕೆ ಹಾಜರಾಗುತ್ತಿಲ್ಲ.

ಕಾರ್ಮಿಕರ ಕಷ್ಟ ಕೇಳುವವರಿಲ್ಲ
ಈ ಕೂಲಿ ಕಾರ್ಮಿಕರು ಗಳ ದಿನನಿತ್ಯದ ಕಷ್ಟ ಸುಖಗಳನ್ನು ಸರ್ಕಾರದ ಯಾವುದೇ ಅಧಿಕಾರಿಗಳು ಅಥವಾ ಶಾಸಕ- ಮಂತ್ರಿ ಮಹೋದಯರುಗಳು ಇದುವರೆಗೂ ಕೇಳಿಲ್ಲ. ದೈನಂದಿನ ಕೂಲಿ ಮಾಡಿಕೊಂಡು ತಮ್ಮ ಹೊಟ್ಟೆಯನ್ನು ಹೊರೆದುಕೊಳ್ಳುತ್ತಿದ್ದ ಈ ಅಸಂಘಟಿತ ಕೂಲಿ ಕಾರ್ಮಿಕರುಗಳು ಇಂದು ತಮ್ಮ ದೈನಂದಿನ ಕಾರ್ಯ ನಿರ್ವಹಣೆಯನ್ನು ಮಾಡಲು ಮನಸ್ಸನ್ನು ತೋರುತ್ತಿಲ್ಲ.

ಎಪಿಎಂಸಿಯಿಂದ ಅಂಗಡಿಗೆ ಸಂಪರ್ಕ ಸಾಧ್ಯವಾಗುತ್ತಿಲ್ಲ
ಇದರಿಂದಾಗಿ ಎಪಿಎಂಸಿ ಮಾರುಕಟ್ಟೆಯಿಂದ ಸ್ಥಳೀಯ ಅಂಗಡಿಗಳಿಗೆ ತಲುಪಿಸುವ ಸಂಪರ್ಕ ಕೊಂಡಿ ಸಂಪೂರ್ಣ ಕಳಚಿದಂತಾಗಿದೆ. ಇದರಿಂದಾಗಿ ಇನ್ನೆರಡು ದಿವಸಗಳಲ್ಲಿ ದಿನಸಿ ವಸ್ತುಗಳ ಕೃತಕ ಅಭಾವ ಸೃಷ್ಟಿಯಾಗಿ ಬೆಂಗಳೂರಿನ ನಾಗರಿಕರು ಹಾಹಾಕಾರವನ್ನು ಅನುಭವಿಸುವ ಸಂಭವ ಅತಿ ಹೆಚ್ಚಾಗಿದೆ.

ಕೂಲಿ ಕಾರ್ಮಿಕರಿಗೆ ಸೌಲಭ್ಯ ಒದಗಿಸಿ
ಆದುದರಿಂದ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಹಾಗೂ ಕಾರ್ಮಿಕ ಮಂತ್ರಿಗಳು, ಅಧಿಕಾರಿಗಳು ಈ ಕೂಡಲೇ ಈ ಕೂಲಿ ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚಿಸಿ ಅವರುಗಳ ಸಮಸ್ಯೆಯನ್ನು ಆಲಿಸಿ ಪರಿಹರಿಸುವ ಮೂಲಕ ಬೆಂಗಳೂರಿನ ಪ್ರತಿಯೊಂದು ಪ್ರದೇಶಗಳಲ್ಲಿಯೂ ದಿನಸಿ ವಸ್ತುಗಳು ಸುಲಲಿತವಾಗಿ ದೊರಕುವಂತೆ ಮಾಡಬೇಕೆಂಬುದು ಆಮ್ ಆದ್ಮಿ ಪಕ್ಷದ ಆಗ್ರಹವಾಗಿದೆ.












Click it and Unblock the Notifications