ಆಧಾರ್ ನಿಲೇಕಣಿ ಬೆಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ?
ನವದೆಹಲಿ, ಸೆಪ್ಟೆಂಬರ್ 18: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿಗೆ ಸಡ್ಡು ಹೊಡೆಯಲು ಕಾಂಗ್ರೆಸ್ ಪಕ್ಷ ಸಾಧ್ಯವಿರುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುವಂತಿದೆ.
ಮಹತ್ವದ 'ಆಧಾರ್' ಗುರುತಿನ ಸಂಖ್ಯೆ ಮೂಲಕ ದೇಶದ ಸಮಸ್ತ ನಾಗರಿಕರಿಗೆ ಐಡೆಂಟಿಟಿ ಕಲ್ಪಿಸುತ್ತಿರುವ Unique Identification Authority of India (UIDAI) ಅಧ್ಯಕ್ಷ ನಂದನ್ ನಿಲೇಕಣಿ ಅವರು ಈಗ ಕಾಂಗ್ರೆಸ್ ಪಕ್ಷಕ್ಕೂ ಆಧಾರವಾಗಲು ಮುಂದಾಗಿರುವಂತಿದೆ.
ಏನಪ್ಪಾ ಅಂದರೆ ಇನ್ಫೋಸಿಸ್ ಕಂಪನಿ ಸಂಸ್ಥಾಪಕರಲ್ಲಿ ಒಬ್ಬರಾದ, ಕನ್ನಡದವರೇ ಆದ ನಿಲೇಕಣಿ ಅವರು ರಾಜಕೀಯ ಪ್ರವೇಶಿಸಲು ಮುಂದಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ನಿಲೇಕಣಿ ಮಿನಿಸ್ಟರ್ ಮೆಟೀರಿಯಲ್ ... ಮುಂದೆ ಓದಿ.

ಕಾಂಗ್ರೆಸ್ ಹೈಕಮಾಂಡ್ ಹಂತದಲ್ಲಿ ಮಾತುಕತೆ
ಈ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಸ್ವತಃ ನಂದನ್ ನಿಲೇಕಣಿ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ತಾವು ಕಾಂಗ್ರೆಸ್ ಸೇರುವ ಬಗೆಗಾಗಲಿ, ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿರುವ ಬಗ್ಗೆಯಾಗಲಿ ನಿಲೇಕಣಿ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ. ಈ ನಡುವೆ ನಿಲೇಕಣಿ ಹಾಗೂ ಕಾಂಗ್ರೆಸ್ ಮಧ್ಯೆ ಇಂತಹದೊಂದು ಚಿಂತನೆ ನಡೆಯುತ್ತಿರುವ ಬಗ್ಗೆ ಮೂಲಗಳು ಸ್ಪಷ್ಟಪಡಿಸಿವೆ ಎಂದ ದೆಹಲಿಯ ಆಂಗ್ಲ ಪತ್ರಿಕೆಗಳು ವರದಿ ಮಾಡಿವೆ.

ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರ
ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಐಟಿ ಉದ್ಯೋಗಿಗಳು ಹಾಗೂ ವಿದ್ಯಾವಂತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಈ ಲೆಕ್ಕಾಚಾರದಲ್ಲಿ ನಂದನ್ ನಿಲೇಕಣಿ ಈ ಕ್ಷೇತ್ರದ ಮೂಲಕ ರಾಜಕೀಯ ಪ್ರವೇಶಿಸಲು ಲೆಕ್ಕಾಚಾರ ಹಾಕುತ್ತಿದ್ದಾರೆ. ಜತೆಗೆ ಜಾತಿ ಲೆಕ್ಕಾಚಾರದಲ್ಲೂ ಬಿಜೆಪಿಗೆ ಸಮ ಸ್ಪರ್ಧೆಯೊಡ್ಡಲು ಕಾಂಗ್ರೆಸ್ ನಿರ್ಧರಿಸಿರುವಂತಿದೆ ಎಂದು ಮೂಲಗಳು ಹೇಳಿವೆ.

ಅನಂತ ಕುಮಾರ್ ವಿರುದ್ಧ ನಿಲೇಕಣಿ ?
ಅಂದರೆ ಬೆಂಗಳೂರು ದಕ್ಷಿಣ ಕ್ಷೇತ್ರದ ಹಾಲಿ ಸಂಸದ ಬಿಜೆಪಿಯ ಅನಂತ ಕುಮಾರ್ ವಿರುದ್ಧ ನಿಲೇಕಣಿ ಕಣಕ್ಕಿಳಿಯಲಿದ್ದಾರೆ. ಅನಂತ ಕುಮಾರ್ ಸಹ ಇದೇ ಕ್ಷೇತ್ರದಿಂದ ಮತ್ತೆ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ಅನಿಲ್ ಕುಂಬ್ಳೆ v/s ನಿಲೇಕಣಿ
ಕುತೂಹಲದ ಸಂಗತಿಯೆಂದರೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅನಂತ ಕುಮಾರ್ ಬದಲಿಗೆ ಖ್ಯಾತ ಕ್ರಿಕೆಟ್ಟಿಗ ಅನಿಲ್ ಕುಂಬ್ಳೆ ಅವರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತಿಸುತ್ತಿದೆ ಎಂದೂ ಹೇಳಲಾಗಿದೆ. ಕ್ಷೇತ್ರದ ಹಾಲಿ ಸಂಸದ ಅನಂತ ಕುಮಾರ್ ಅವರು ಪಕ್ಷದ ಚುನಾವಣೆ ಪ್ರಚಾರ ಸಮಿತಿಯಲ್ಲಿರುವುದರಿಂದ ರಾಷ್ಟ್ರಮಟ್ಟದಲ್ಲಿ ಅವರು ಹೆಚ್ಚು ಕಾರ್ಯಭಾರ ನಿಭಾಯಿಸಬೇಕಿರುವುದರಿಂದ ಈ ಬಾರಿ ಅವರು ಚುನಾವಣೆಯಲ್ಲಿ ಸ್ಪರ್ಧಿಸದೆ ಪಕ್ಷದ ಗೆಲುವುಗಾಗಿ ಶ್ರಮಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಲೆಕ್ಕಾಚಾರಗಳೆಲ್ಲಾ ಸರಿಹೋದರೆ ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಟೆಕ್ಕಿ ನಂದನ್ ನಿಲೇಕಣಿ ವರ್ಸಸ್ ಕ್ರಿಕೆಟ್ಟಿಗ ಅನಿಲ್ ಕುಂಬ್ಳೆ ಕಣ ರಂಗೇರಲಿದೆ.

ನಿಲೇಕಣಿ ಮಿನಿಸ್ಟರ್ ಮೆಟೀರಿಯಲ್
ಯಾಕಾಗಬಾರದು? ಈಗಾಗಲೇ UIDAI ಅಧ್ಯಕ್ಷರಾಗಿ ನಂದನ್ ನಿಲೇಕಣಿ ಅವರು ಮಂತ್ರಿ ಸ್ಥಾನದ ಅನುಭವ ಪಡೆದಿದ್ದಾರೆ. ಮುಂದೆ UPA-3 ಅಧಿಕಾರಕ್ಕೆ ಬಂದರೆ ನಿಲೇಕಣಿ ಮಿನಿಸ್ಟರ್ ಮೆಟೀರಿಯಲ್. ಅವರು ಅಧಿಕೃತವಾಗಿ ಮಂತ್ರಿಯೂ ಆಗಬಹುದು. ಹಾಗಾಗಿ ನಿಲೇಕಣಿ ಅವರನ್ನು ಬೆಂ. ದಕ್ಷಿಣದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವುದು ಅತ್ಯಂತ ಸೂಕ್ತ ನಿರ್ಧಾರ ಎಂದು ಬಸವನಗುಡಿಯ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications