ಲೋಕಾಯುಕ್ತ ಕಚೇರಿಗೆ ಚೂರಿ ತಂದಿದ್ದ ಮಹಿಳೆಯ ಬಂಧನ
ಬೆಂಗಳೂರು, ಮೇ 03: ಲೋಕಾಯುಕ್ತ ವಿಶ್ವನಾಥ ಶೆಟ್ಟಿ ಅವರ ಮೇಲೆ ಲೋಕಾಯುಕ್ತ ಕಚೇರಿಯಲ್ಲಿ ಚಾಕುಯಿಂದ ದಾಳಿ ನಡೆದ ಘಟನೆ ನೆನಪಿನಿಂದ ಮಾಸುವ ಮುನ್ನವೇ ಅಂತಹದ್ದೇ ಒಂದು ಘಟನೆ ಸ್ವಲ್ಪದರಲ್ಲಿ ತಪ್ಪಿದೆ.
ಮಹಿಳೆಯೊಬ್ಬರು ಚಾಕು ತೆಗೆದುಕೊಂಡು ಲೋಕಾಯುಕ್ತ ಕಚೇರಿ ಪ್ರವೇಶಿಸಿದ್ದಾರೆ ಆದರೆ ಭದ್ರತಾ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದಿದ್ದಾರೆ ಇದರಿಂದಾಗಿ ಆಗಬಹುದಾಗಿದ್ದ ಅನಾಹುತ ತಡೆದಂತಾಗಿದೆ.
ಲೋಕಾಯುಕ್ತರಿಗೆ ಚೂರಿ ಇರಿತ: ಆರೋಪಿ ತೇಜ್ ರಾಜ್ ವಿರುದ್ಧ FIR
ಆ ಮಹಿಳೆಯು ಚಾಕುವನ್ನು ಫೈಲ್ ನಡುವೆ ಅಡಗಿಸಿಟ್ಟುಕೊಂಡು ಲೋಕಾಯುಕ್ತ ಕಚೇರಿ ಪ್ರವೇಶಿಸಲು ಹೊಂಚು ಹಾಕಿದ್ದರು, ಆದರೆ ಮೆಟಲ್ ಡಿಟೆಕ್ಟರ್ ಈ ಬಾರಿ ಕೆಲಸ ನಿರ್ವಹಿಸುತ್ತಿದ್ದ ಕಾರಣ ಚಾಕು ಇರಿಸಿಕೊಂಡಿರುವುದು ಪತ್ತೆಯಾಗಿ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಾಕು ಇರಿಸಿಕೊಂಡು ಬಂದಿದ್ದ ಮಹಿಳೆಯನ್ನು ಸೋನಿಯಾ ರಾಣಿ ಎಂದು ಗುರುತಿಸಲಾಗಿದ್ದು, ಚಾಕು ತಂದಿದ್ದ ಉದ್ದೇಶ ಯಾರ ಮೇಲೆ ಹಲ್ಲೆ ಮಾಡಲು ಚಾಕು ತರಲಾಗಿತ್ತು ಎಂಬುದು ಇನ್ನೂ ತಿಳಿದುಬಂದಿಲ್ಲ.
ಎರಡು ತಿಂಗಳ ಹಿಂದೆಯಷ್ಟೆ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಮೇಲೆ ತುಮಕೂರಿನ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಗಾಯಗೊಳಿಸಿದ್ದ ಆದರೆ ಅದೃಷ್ಟವಶಾತ್ ನ್ಯಾಯಮೂರ್ತಿಗಳ ಜೀವಕ್ಕೆ ಯಾವುದೇ ಹಾನಿಯಾಗಲಿಲ್ಲ.