ಅನೈತಿಕ ಸಂಬಂಧಕ್ಕೆ ಅಡ್ಡಿ: ಮಗನನ್ನೇ ಕೊಲೆ ಮಾಡಿ ಬಿಸಾಡಿದ ತಾಯಿ ಸಮೇತ ಮೂವರು ಸೆರೆ
ಬೆಂಗಳೂರು, ಸೆ. 10: ಮಕ್ಕಳಿಗಾಗಿ ಬದುಕನ್ನೇ ಮುಡುಪಾಗಿಡುವುದು ಸಹಜ. ಇಲ್ಲೊಬ್ಬ ಮಹಾತಾಯಿ ರೌಡಿ ಶೀಟರ್ ಜತೆ ಇಟ್ಟುಕೊಂಡಿದ್ದ ಅನೈತಿಕ ಸಂಬಂಧಕ್ಕೆ ಅಡ್ಡಿ ಪಡಿಸಿದ ಮಗನನ್ನೆ ಕೊಲೆ ಮಾಡಿದ್ದಾಳೆ. ಮಾತ್ರವಲ್ಲ ದೇಹವನ್ನು ತಮಿಳುನಾಡಿನ ಕಾಡಿನಲ್ಲಿ ಬಿಸಾಡಿದ್ದಾಳೆ. ಹೆತ್ತ ಮಗ ಕಾಣೆಯಾಗಿದ್ದಾನೆ ಎಂದು ಆರು ತಿಂಗಳ ಬಳಿಕ ದೂರು ಕೊಟ್ಟು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಮುಗ್ಧ ಬಾಲಕನ ಜೀವ ತೆಗೆದ ತಾಯಿ ಆಕೆಯ ರೌಡಿ ಗಂಡ ಸೇರಿ ಮೂವರು ಜೈಲು ಪಾಲಾಗಿದ್ದಾರೆ.
ಕರುಣಾ ಜನಕ ಕಥೆಯಿದು: ಎದೆ ಎತ್ತರಕ್ಕೆ ಬೆಳೆದು ನಿಂತಿದ್ದ ಹತ್ತು ವರ್ಷದ ಮಗನಿದ್ದರೂ ಆ ಮಹಾ ತಾಯಿಗೆ ಅಕ್ರಮ ಸಂಬಂಧವೇ ಮುಖ್ಯವಾಗಿತ್ತು. ರೌಡಿ ಶೀಟರ್ ಜತೆಗಿನ ಅಕ್ರಮ ಸಂಬಂಧದ ಬಗ್ಗೆ ಆಕ್ಷೇಪಿಸಿದ್ದಕ್ಕೆ ಹೆತ್ತ ಮಗನಿಗೆ ಮುಹೂರ್ತ ಇಟ್ಟಳು. 2021 ಫೆ. 07 ರಂದು ಪ್ಲಾಸ್ಟಿಕ್ ಪೈಪ್ನಿಂದ ಮಗನನ್ನು ಅಕ್ರಮ ಸಂಬಂಧ ಹೊಂದಿದ್ದ ರೌಡಿ ಶೀಟರ್ ಜತೆ ಸೇರಿ ಹತ್ಯೆ ಮಾಡಿದಳು. ವಿಪರ್ಯಾಸವೆಂದರೆ ರೌಡಿ ಶೀಟರ್ನ ಇನ್ನೊಬ್ಬ ಸಂಗಾತಿ ಕೂಡ ಈ ಬಾಲಕನ ಕೊಲೆಗೆ ಕೈ ಜೋಡಿಸಿದ್ದರು. ಹೀಗೆ ಕೊಲೆ ಮಾಡಿದ ಹತ್ತು ವರ್ಷದ ಬಾಲಕನ ಮೃತ ದೇಹವನ್ನು ತಮಿಳುನಾಡಿನ ನಿರ್ಜನ ಪ್ರದೇಶದಲ್ಲಿ ಬಿಸಾಡಿದ್ದರು. ತಮಿಳುನಾಡಿನಲ್ಲಿ ಬಾಲಕನ ಮೃತ ದೇಹ ಸಿಕ್ಕಿದರೂ ಅದರ ಗುರುತು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.
ಕೊಲೆಯಾದ ಆರು ತಿಂಗಳ ಬಳಿಕ ದೂರು: ಇನ್ನು ಹತ್ತು ವರ್ಷದ ಮಗ ಕೊಲೆಯಾದ ಬಳಿಕ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯ ಜತೆ ತಾಯಿ ಮೋಜು ಜೀವನ ಮಾಡುತ್ತಿದ್ದಳು. ಯಾವಾಗ ಸಂಬಂಧಿಕರು ಮಗನನ್ನು ಕೇಳಲು ಪ್ರಶ್ನಿಸಿದರೂ, ಸಂಬಂಧಿಕರ ಮುಂದೆ ತಾನು ಒಳ್ಳೆಯವಳು ಎಂದು ಬಿಂಬಿಸಿಕೊಳ್ಳಲು ಮೈಕೋ ಲೇಔಟ್ ಪೊಲೀಸರಿಗೆ ತನ್ನ ಮಗ ಆರು ತಿಂಗಳ ಹಿಂದೆ ಕಾಣೆಯಾಗಿದ್ದಾನೆ ಎಂದು ದೂರು ನೀಡಿದ್ದಳು. ದೂರು ನೀಡಲು ಹೋದಾಗ ಈಕೆಯ ಜತೆಗೆ ಹೊಗಿದ್ದ ರೌಡಿ ಶೀಟರ್ ಮತ್ತು ಆತನ ಪ್ರೇಯಸಿ ನಡೆ ಬಗ್ಗೆ ಪೊಲೀಸರು ಅನುಮಾನಗೊಂಡಿದ್ದರು. ಇವರ ಅನುಮಾನಸ್ಪದ ನಡೆ ನೋಡಿದ ಮೈಕೋ ಲೇಔಟ್ ಪೊಲೀಸರು ಮೃತ ಬಾಲಕನ ತಾಯಿಯನ್ನು ಕರೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ. ಈಕೆ ನೀಡಿದ ಮಾಹಿತಿ ಮೇರೆಗೆ ರೌಡಿ ಶೀಟರ್ ಹಾಗೂ ಆತನ ಪ್ರೇಯಸಿ ಸೇರಿ ಮೂವರನ್ನು ಸಹ ಪೊಲೀಸರು ಬಂಧಿಸಿದ್ದಾರೆ.

Recommended Video
ದೂರು ಕೊಟ್ಟಿಲ್ಲ ಅಂದ್ರೆ ಬೆಳಕಿಗೆ ಬರುತ್ತಿರಲಿಲ್ಲ: ಇನ್ನು ಮೃತ ಬಾಲಕನ ತಾಯಿ ತಾನು ಸಮಾಜದ ಮುಂದೆ ಒಳ್ಳೆಯವಳು ಎಂದು ಬಿಂಬಿಸಿಕೊಳ್ಳಲು ಹೋಗಿ ಸಿಕ್ಕಿಬಿದ್ದಿದ್ದಾರೆ. ಆದರೆ, ಅಕ್ರಮ ಸಂಬಂಧಕ್ಕಾಗಿ ಕರುಳ ಬಳ್ಳಿಯನ್ನೇ ಕತ್ತರಿಸಿದ ಈ ಮಹಾ ತಾಯಿಯ ನಡೆ ನೋಡಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಮಗನನ್ನು ಹೊಡೆದು ತಾಯಿಯೇ ಸಾಯಿಸಿದರೆ, ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿ ಮತ್ತು ಆತನ ಪ್ರಿಯಕರ ದೇಹವನ್ನು ತಮಿಳುನಾಡಿನ ನಿರ್ಜನ ಪ್ರದೇಶದಲ್ಲಿ ಬಿಸಾಡಿರುವುದನ್ನು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ತಮಿಳುನಾಡು ಪೊಲೀಸರು ದಾಖಲಿಸಿರುವ ಕೊಲೆ ಪ್ರಕರಣ ವರ್ಗಾಯಿಸಿಕೊಂಡು ಪೊಲೀಸರೇ ತನಿಖೆ ನಡೆಸಿ ಮೂವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ. ದೂರುದಾರ ನಡೆಯಿಂದಲೇ ಕೊಲೆ ಪ್ರಕರಣ ಪತ್ತೆ ಮಾಡಿದ ಮೈಕೋ ಲೇಔಟ್ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.












Click it and Unblock the Notifications