ಕೆ.ಎಸ್.ಲೇಔಟ್ ಠಾಣೆಯ 71 ಸಿಬ್ಬಂದಿ ವರ್ಗಾವಣೆ ಮಾಡಿದ ಅಣ್ಣಾಮಲೈ!
ಬೆಂಗಳೂರು, ಫೆಬ್ರವರಿ 01 : ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ 71 ಸಿಬ್ಬಂದಿಗಳನ್ನು ಏಕಕಾಲಕ್ಕೆ ವರ್ಗಾವಣೆ ಮಾಡಲಾಗಿದೆ. ಠಾಣೆಯಲ್ಲಿ 78 ಸಿಬ್ಬಂದಿಗಳಿದ್ದು ಪಿಎಸ್ಐ ಹೊರತು ಪಡಿಸಿ ಎಲ್ಲರನ್ನೂ ವರ್ಗಾವಣೆ ಮಾಡಲಾಗಿದೆ.
ಶುಕ್ರವಾರ ದಕ್ಷಿಣ ವಲಯ ಡಿಸಿಪಿ ಕೆ.ಅಣ್ಣಾಮಲೈ ಈ ಕುರಿತು ಆದೇಶ ಹೊರಡಿಸಿದ್ದಾರೆ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ 78 ಸಿಬ್ಬಂದಿಗಳಿದ್ದರು. ಇವರಲ್ಲಿ 71 ಜನರನ್ನು ವರ್ಗಾವಣೆ ಮಾಡಲಾಗಿದೆ. ಇದನ್ನು ಅವರು ಸಹ ಖಚಿತಪಡಿಸಿದ್ದಾರೆ.
ದೂರು ನೀಡಲು ಬಂದ ಮಹಿಳೆ ಮೇಲೆ ಹಲ್ಲೆ: ಎಎಸ್ಐ ರೇಣುಕಯ್ಯ ಅಮಾನತು
ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಲು ಬಂದ ಮಹಿಳೆ ಮೇಲೆ ಸಬ್ ಇನ್ಸ್ಪೆಕ್ಟರ್ ರೇಣುಕಯ್ಯ ದರ್ಪದಿಂದ ವರ್ತಿಸಿದ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಎರಡು ದಿನಗಳ ಹಿಂದೆ ಈ ವಿಡಿಯೋ ವೈರಲ್ ಆಗಿತ್ತು.
ಎಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆ, ತಪ್ಪೊಪ್ಪಿಕೊಂಡ ಆರೋಪಿ
ಅಣ್ಣಾಮಲೈ ಹೇಳಿದ್ದೇನು ? : ವರ್ಗಾವಣೆ ಬಗ್ಗೆ ಮಾತನಾಡಿರುವ ಡಿಸಿಪಿ ಅಣ್ಣಾಮಲೈ ಅವರು, 'ತಪ್ಪು ಮಾಡಿದ್ದಾರೆ ಸರಿ ಮಾಡಿದ್ದಾರೆ ಎಂಬುದು ವಿಷಯವಲ್ಲ. ಠಾಣೆಯಲ್ಲಿ ಹೊಸ ವಾತಾವರಣ ಬರಬೇಕು. ಹೊಸ ಸಂಸ್ಕೃತಿ ಬರಬೇಕು. ಜನಪರವಾದ ಕಾಳಜಿ ಇರಬೇಕು. ಠಾಣೆಯಲ್ಲಿ ಗುಂಪುಗಾರಿಕೆ ಇರಬಾರದು. ಕರ್ನಾಟಕ ರಾಜ್ಯ ಪೊಲೀಸ್ ಹೆಸರು ಮಾತ್ರ ಮುಂದೆ ಇರಬೇಕು ಎಂದು ವರ್ಗಾವಣೆ ಮಾಡಲಾಗಿದೆ' ಎಂದರು.
ಆಂಬಿಡೆಂಟ್ ಕೇಸ್: ತನಿಖಾಧಿಕಾರಿಗಳ ವಿರುದ್ಧವೇ ಆರೋಪ
'ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಈ ವಿಚಾರವನ್ನು ತಿಳಿಸಲಾಗಿತ್ತು. ಖುದ್ದಾಗಿ ಅವರನ್ನು ಭೇಟಿ ಮಾಡಿ ವಿವರಣೆ ನೀಡಿದಾಗ ಅವರು ಒಪ್ಪಿಕೊಂಡರು. ವರ್ಗಾವಣೆ ಯಾರಿಗೂ ಶಿಕ್ಷೆ ಎಂಬುದಲ್ಲ. ಎಲ್ಲರೂ ನಮ್ಮ ಸಿಬ್ಬಂದಿಗಳೇ. ಹೊಸ ವ್ಯವಸ್ಥೆ ಬರಲಿ ಎಂದು ಎಲ್ಲರನ್ನೂ ವರ್ಗಾವಣೆ ಮಾಡಲಾಗಿದೆ' ಎಂದು ಸ್ಪಷ್ಟಪಡಿಸಿದರು.
ಗುಂಪುಗಾರಿಕೆ : ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗಳ ನಡುವೆ ಗುಂಪುಗಾರಿಕೆ ಹೆಚ್ಚಾಗಿತ್ತು. ಎಎಸ್ಐ ರೇಣುಕಯ್ಯ ಮೇಲೆ ಬೇಸರಗೊಂಡಿದ್ದ ಪೊಲೀಸ್ ಪೇದೆಯೊಬ್ಬರು ದಾಂಧಲೆ ನಡೆದ ದಿನ ವಿಡಿಯೋವನ್ನು ಎಡಿಟ್ ಮಾಡಿ ಮಾಧ್ಯಮಗಳಿಗೆ ನೀಡಿದ್ದಾರೆ ಎಂಬ ಮಾಹಿತಿಯೂ ಇದೆ.
ಠಾಣೆಯಲ್ಲಿರುವ ಉತ್ತರ ಕರ್ನಾಟಕದ ಸಿಬ್ಬಂದಿ (ಎನ್ಕೆ - ನಾರ್ಥ್ ಕರ್ನಾಟಕ), ದಕ್ಷಿಣ ಕರ್ನಾಟಕದ ಸಿಬ್ಬಂದಿ (ಎಸ್ಕೆ -ಸೌತ್ ಕರ್ನಾಟಕ) ಎಂದು ಗುಂಪು ಮಾಡಿಕೊಂಡಿದ್ದರು. ಕೆಲಸ ಹಂಚಿಕೆ, ಗಸ್ತು ನಿಯೋಜನೆ, ರಜೆ ಮಂಜೂರು ಎಲ್ಲಾ ವಿಚಾರದಲ್ಲೂ ಉಭಯ ಗುಂಪಿನ ನಡುವೆ ಕಿತ್ತಾಟ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ಆದ್ದರಿಂದ, ಶುಕ್ರವಾರ ಠಾಣೆಯ 71 ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ. ಬೆಂಗಳೂರಿನ ಇತಿಹಾಸದಲ್ಲಿಯೇ ಒಂದೇ ಠಾಣೆಯ ಸಿಬ್ಬಂದಿಗಳನ್ನು ಏಕಕಾಲದಲ್ಲೇ ಹೀಗೆ ವರ್ಗಾವಣೆ ಮಾಡಿದ್ದು, ಇದೇ ಮೊದಲು.