ಬೆಂಗಳೂರು: ಕಪ್ಪು-ಬಿಳಿ ದಂಧೆ, ಐವರ ಬಂಧನ, 2.5 ಕೋಟಿ ಹಳೆ ನೋಟು ವಶ
ಬೆಂಗಳೂರು, ಜೂನ್ 06 : ನಿಷೇಧಿತ ನೋಟುಗಳ ಬದಲಾವಣೆ ದಂಧೆಯಲ್ಲಿ ತೊಡಗಿದ್ದ 5 ಮಂದಿಯನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ಚೆನ್ನೈನ ಕಿಶೋರ್, ಸತ್ಯ, ಡೈಮಂಡ್ ರಾಜ್, ಶರವಣ ಪ್ರಿಯನ್ ಹಾಗೂ ಬೆಂಗಳೂರಿನ ರಾಜಗೋಪಾಲ್ ಎಂಬುವರನ್ನು ಬಂಧಿಸಿ, 2.5 ಕೋಟಿ ಮೊತ್ತದ ನಿಷೇಧಿತ ನೋಟುಗಳು ಹಾಗೂ ಒಂದು ಕಾರನ್ನು ಜಪ್ತಿ ಮಾಡಿದ್ದಾರೆ.[ಬೆಂಗಳೂರು : 1.28 ಕೋಟಿ ಮೌಲ್ಯದ ಹಳೆ ನೋಟುಗಳು ವಶ]
ಸೋಮವಾರ ಮಧ್ಯಾಹ್ನ 3.30ರ ಸುಮಾರಿಗೆ ಆರೋಪಿಗಳು ಐ-20 ಕಾರಿನಲ್ಲಿ ಚರ್ಚ್ಸ್ಟ್ರೀಟ್ ಗೆ ಬಂದಿದ್ದರು. ಈ ವೇಳೆ ಕಾರ್ಯಾಚರಣೆ ನಡೆಸಿ ಅವರನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ಹೇಳಿದರು.
'ನಿವೃತ್ತ ಸಿವಿಲ್ ಎಂಜಿನಿಯರ್ ಮುರಳಿ ಎಂಬುವರು ಕಮಿಷನ್ ಆಧಾರದ ಮೇಲೆ ನೋಟುಗಳನ್ನು ಬದಲಾಯಿಸಿಕೊಡುವುದಾಗಿ ಹೇಳಿದ್ದರು.
ಹೀಗಾಗಿ, ನಮ್ಮ ಬಳಿ ಇದ್ದ 1,000 ಮುಖಬೆಲೆಯ ರದ್ದಾದ ನೋಟುಗಳನ್ನು ತೆಗೆದುಕೊಂಡು ನಗರಕ್ಕೆ ಬಂದಿದ್ದೆವು' ಎಂದು ಬಂಧಿತರು ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.
ಇದೀಗ ಮುರಳಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದೇವೆ. ಮಂಗಳವಾರ ಬೆಳಿಗ್ಗೆ ಠಾಣೆಗೆ ಹಾಜರಾಗುವುದಾಗಿ ಅವರು ಹೇಳಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.