ಶಾಸಕರ ಪುತ್ರ ಎಂದು ಹೇಳಿ ಫೇಸ್ಬುಕ್ ಪ್ರಿಯತಮೆಯಿಂದ 90ಲಕ್ಷ ದೋಚಿದ
ಬೆಂಗಳೂರು, ಡಿಸೆಂಬರ್ 14: ಶಾಸಕರ ಪುತ್ರ ಎಂದು ಹೇಳಿಕೊಂಡು ವಿಚ್ಛೇದಿತ ಮಹಿಳೆಗೆ ಮದುವೆ ಆಮಿಷವೊಡ್ಡಿ 90 ಲಕ್ಷ ರೂ ವಂಚನೆ ಮಾಡಿರುವ ವ್ಯಕ್ತಿಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ವಾದಿರಾಜ್ ಗೌಡ ಬಂಧಿತ ಆರೋಪಿ, ಆತ ಕಡಿಮೆ ಬೆಲೆಗೆ ಸರ್ಕಾರ ಸೈಟು ಕೊಡುವುದಾಗಿ ಹೇಳಿ 20 ಮಂದಿಗೆ 90 ಲಕ್ಷ ರೂ ವಂಚನೆ ಮಾಡಿದ್ದಾನೆ. ಈತನಿಂದ ಮೂರು ಲಕ್ಷ ರೂ ನಗದು ಮತ್ತು 45 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಈತ ವಿಚ್ಛೇದಿತ ಮಹಿಳೆಯೊಬ್ಬರನ್ನು ನಂಬಿಸಿ ಅವರ ಜೊತೆ ಸುಮಾರು 2 ವರ್ಷ ಸಂಸಾರ ಮಾಡಿ ಹಣ, ನಗದು ದೋಚಿದ್ದ ಎಂದು ತಿಳಿದುಬಂದಿದೆ.
ವಂಚನೆ ಬಳಿಕ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ, 10ನೇ ತರಗತಿ ಕಲಿತಿರುವ ಆರೋಪಿ, ದುಶ್ಚಟಗಳ ದಾಸನಾಗಿದ್ದ, ಮೇಕಪ್ ಮಾಡಿ ಹೊಸ ಬಟ್ಟೆ ಹಾಕಿದ ಫೋಟೊಗಳನ್ನು ಹಾಗೂ ವಿಡಿಯೋಗಳನ್ನು ತೆಗೆದು ಫೇಸ್ಬುಕ್ನಲ್ಲಿ ಹಾಕಿ ಶ್ರೀಮಂತ ಎಂದು ತೋರಿಸಿಕೊಳ್ಳುತ್ತಿದ್ದ, ಬಳಿಕ ಮಹಿಳೆಯರಿಗೆ ಸಿನಿಮಾ, ಧಾರವಾಹಿಗಳಲ್ಲಿ ಚಾನ್ಸ್ ನೀಡುವುದಾಗಿ ಪುಸಲಾಯಿಸಿ ಬಳಿಕ ಲಕ್ಷಗಟ್ಟಲೆ ಹಣ ಲೂಟಿ ಮಾಡುತ್ತಿದ್ದ.

ಮಹಿಳೆ ವಿಚ್ಛೇದನಕ್ಕೆ ಅರ್ಜಿ ಹಾಕಿರುವ ವಿಷಯ ತಿಳಿದ ಆರೋಪಿ ನೀವು ಒಪ್ಪಿದರೆ ಮರು ಮದುವೆ ಮಾಡಿಕೊಳ್ಳುವೆ ಎಂದಿದ್ದ, ಅದನ್ನು ಮಹಿಳೆ ನಂಬಿದಾಗ ಊಟಿ, ಮಡಿಕೇರಿ ಎಂದೆಲ್ಲಾ ನಾಲ್ಕೈದು ದಿನ ಸುತ್ತಾಡಿಸಿದ್ದ, ಸಂಸಾರದ ಕಲಹದಿಂದ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಸಂತ್ರಸ್ತೆ ಪರವಾಗಿ ಆರೋಪಿ ವಾದಿರಾಜು ಮೈಸೂರಿನ ನ್ಯಾಯಾಲಯಕ್ಕೆ ಓಡಾಡಿ ಆರು ತಿಂಗಳಲ್ಲಿ ವಿಚ್ಛೇದನ ಕೊಡಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.












Click it and Unblock the Notifications