ಕಾಂಗ್ರೆಸ್ ಸರ್ಕಾರದ ಅಕ್ರಮ ನೇಮಕಾತಿಗಳಿಗೆ ಸಿದ್ದರಾಮಯ್ಯ ಜವಾಬ್ದಾರಿ ಹೊರುತ್ತಾರಾ? ಪಿ. ರಾಜೀವ್ ಪ್ರಶ್ನೆ
ಬೆಂಗಳೂರು, ಸೆಪ್ಟಂಬರ್ 16: ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಸಾಲು ಅಕ್ರಮಗಳು ನಡೆದಿದ್ದು, ಅವು ಈಗ ಬೆಕಿಗೆ ಬರುತ್ತಿವೆ. ಎಂದು ಬಿಜೆಪಿ ರಾಜ್ಯ ವಕ್ತಾರ ಮತ್ತು ಶಾಸಕ ಪಿ.ರಾಜೀವ್ ಅವರು ಆರೋಪಿಸಿದರು.
ಶುಕ್ರವಾರ ವಿಧಾನಸೌಧದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇಮಕಾತಿಯಲ್ಲಿ ಪಾರದರ್ಶಕತೆ ಇದೆ ಎಂದು ಯುವಜನತೆ ಮತ್ತು ವಿದ್ಯಾರ್ಥಿಗಳಲ್ಲಿ ಭರವಸೆ ಮೂಡಿಸಲು ರಾಜ್ಯದ ಬಿಜೆಪಿ ಸರಕಾರ ಮುಂದಾಗಿದೆ. ಆದರೆ, ಕಾಂಗ್ರೆಸ್ ಅವಧಿಯಲ್ಲಿ ನಡೆದ ಅಕ್ರಮ ನೇಮಕಾತಿಯಡಿ ಶಿಕ್ಷಕರ ಹುದ್ದೆ ನಿರ್ವಹಿಸುತ್ತಿದ್ದ 30 ಮಂದಿಯನ್ನು ದಸ್ತಗಿರಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಅವಧಿಯಲ್ಲಿ ಸಾಲು ಸಾಲಾಗಿ ಅಕ್ರಮಗಳು ನಡೆದಿದ್ದು, ಅವು ಈಗ ಬೆಳಕಿಗೆ ಬರುತ್ತಿವೆ. 2013ರಲ್ಲಿ ಶಿಕ್ಷಕರ ನೇಮಕಾತಿ ಅಧಿಸೂಚನೆ ಹೊರಡಿಸಿತ್ತು. ಪರೀಕ್ಷೆಯನ್ನೇ ಬರೆಯದವರಿಗೆ ನೇಮಕಾತಿ ಆದೇಶ ಕೊಡಲಾಗಿದೆ. ಅಂಥವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇದರ ಸುಳಿವು ಕುರಿತು ಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ವಿವರವಾದ ಮಾಹಿತಿ ಪಡೆದಿದ್ದಾರೆ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಿಕ್ಷಕರ ಹುದ್ದೆ ನಿರ್ವಹಿಸುತ್ತಿದ್ದ ಸುಮಾರು 30 ಜನರನ್ನು ದಸ್ತಗಿರಿ ಮಾಡಲಾಗಿದೆ ಎಂದರು.
ಈ ರೀತಿಯ ಅಕ್ರಮ ನೇಮಕಾತಿಗೆ ಕಾರಣ ಯಾರು?. ಹೀಗೆ ಎಷ್ಟು ಜನ ಕಾಂಗ್ರೆಸ್ಸಿಗರನ್ನು ಅವರ ಅವಧಿಯಲ್ಲಿ ನೇಮಕ ಮಾಡಿರಬಹುದು?. ಹಾಗಿದ್ದರೆ ರಾಜ್ಯದ ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳಿಗೆ ಇವರು ಯಾವ ರೀತಿ ನ್ಯಾಯ ಕೊಟ್ಟಿದ್ದಾರೆ? ಎಂದು ಅವರು ಪ್ರಶ್ನಿಸಿದರು.
ಅಕ್ರಮ: ಬಿಜೆಪಿಯಿಂದ ರಾಜಿ ಇಲ್ಲ
ಅಕ್ರಮಗಳ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಸಾಬೀತುಪಡಿಸಿದೆ. ಪಿಎಸ್ಐ ನೇಮಕಾತಿ ಅಕ್ರಮದ ಕುರಿತಂತೆ ಪಾರದರ್ಶಕ ತನಿಖೆ ನಡೆಸಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಎಡಿಜಿಪಿ ಹುದ್ದೆಯ ಅಧಿಕಾರಿಯನ್ನು ಬಂಧಿಸಿದ ಸರ್ಕಾರ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅವಧಿಯಲ್ಲಿ ನಡೆದಿದ್ದ ಅಕ್ರಮ ನೇಮಕಾತಿಗಳನ್ನು ಬಿಜೆಪಿಯು ಜನತೆ ಮುಂದಿಡಲಿದೆ. ಇದರಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಬಿಜೆಪಿ ಸರ್ಕಾರವು ಈ ರಾಜ್ಯದ ಯುವಜನತೆ, ವಿದ್ಯಾರ್ಥಿಗಳು ಮತ್ತು ಪ್ರತಿಭಾವಂತರಿಗೆ ಸ್ಪಷ್ಟ ಸಂದೇಶ ನೀಡಲಿದೆ. ಹಿಂದೆ ಇದ್ದಂತೆ ಅನ್ಯಾಯ ಮತ್ತು ಅಕ್ರಮಕ್ಕೆ ಅವಕಾಶ ಈಗಿಲ್ಲ. ಕಾಂಗ್ರೆಸ್ ಅವಧಿಯಲ್ಲಿನ ಅಕ್ರಮಗಳ ಕುರಿತು ತನಿಖೆ ಮಾಡಿ ತಪ್ಪಿತಸ್ಥರನ್ನು ಕಾನೂನಿನ ಕುಣಿಕೆಗೆ ತರಲಿದ್ದೇವೆ ಎಂದು ಪಿ.ರಾಜೀವ್ ತಿಳಿಸಿದರು.
ಆಳವಾಗಿ ತನಿಖೆ ನಡೆಯಲಿಲ್ಲ
ಕಬ್ಬನ್ ಉದ್ಯಾನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ದೂರಿನಲ್ಲಿ, ಮಂಜುನಾಥ ಎಂಬುವರು 2013ರಿಂದ 2017ರವರೆಗೆ ಡಿವೈಎಸ್ಪಿ, ಪಿಎಸ್ಐ, ಎಫ್ಡಿಸಿ, ಎಸ್ಡಿಸಿ ಮತ್ತಿತರ ಹುದ್ದೆಗಳನ್ನು ಕೊಡಿಸುವುದಾಗಿ 18 ಕೋಟಿ ಹಣ ವಸೂಲಿ ಮಾಡಲಾಗಿದೆ. ಅಕ್ರಮ ನೇಮಕಾತಿ ಹಿನ್ನೆಲೆಯಲ್ಲಿ ಲಕ್ಷ್ಮೀಕಾಂತ್ ಮತ್ತು ಲೋಕೇಶ್ ಎಂಬುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೋರಲಾಗಿತ್ತು.ಆದರೆ ಆಗಿನ ಸರ್ಕಾರ ಆಳವಾಗಿ ತನಿಖೆ ಮಾಡಿದ್ದರೆ ಮುಂದಿನ ಹಗರಣಗಳನ್ನು ತಡೆಯಬಹುದಿತ್ತು. ಆದರೆ ಈ ಪ್ರಕರಣವನ್ನು ಕಾಟಾಚಾರದಲ್ಲಿ ಇತ್ಯರ್ಥ ಮಾಡಿದ್ದರು ಎಂದು ಮಂಜುನಾಥ ಆರೋಪಿಸಿದ್ದಾರೆ ಎಂದು ತಿಳಿಸಿದರು.
ಅಕ್ರಮ ಮುಚ್ಚಲು ಲೋಕಾಯುಕ್ತಕ್ಕೆ ಬೀಗ
ಅಂದು ಇದ್ದ ಸರ್ಕಾರ ಕಾಂಗ್ರೆಸ್, ಅಕ್ರಮ ಮಾಡಿದವರನ್ನು ಯಾಕೆ ಬಚ್ಚಿಟ್ಟರು?. ಪರೀಕ್ಷೆ ಬರೆಯದೆ ಶಿಕ್ಷಕರಾಗಿ ಹೇಗೆ ನೇಮಕಾತಿ ಹೊಂದಿದರು? ಎಂಬ ಪ್ರಶ್ನೆಗಳನ್ನು ಮುಂದಿಟ್ಟರು. ಇಂಥ ಎಲ್ಲ ಅಕ್ರಮಗಳನ್ನು ಮುಚ್ಚಿಟ್ಟುಕೊಳ್ಳಲು ಲೋಕಾಯುಕ್ತ ಬಾಗಿಲು ಮುಚ್ಚಿ, ಎಸಿಬಿ ತೆರೆದು ತಮ್ಮ ಅಕ್ರಮಗಳನ್ನು ಅಧಿಕೃತಗೊಳಿಸಿದರು. ಅಕ್ರಮಗಳನ್ನು ಸಕ್ರಮ ಮಾಡಿದ ಅಪಕೀರ್ತಿ ಸಿದ್ದರಾಮಯ್ಯರ ನೇತೃತ್ವದ ಸರ್ಕಾರಕ್ಕಿದೆ ಎಂದು ಟೀಕಿಸಿದರು.
ಇಂತಹ ಅಕ್ರಮಗಳಿಗೆ ಇನ್ನು ಮುಂದೆ ಬಿಜೆಪಿ ಸರ್ಕಾರ ಅವಕಾಶ ಕೊಡುವುದಿಲ್ಲ. ಪ್ರಕರಣದಲ್ಲಿ ಭಾಗಿಯಾಗಿದ್ದ ಲಕ್ಷ್ಮೀಕಾಂತ್ ಮತ್ತು ಲೋಕೇಶ್ ಅವರು ಸಿದ್ದರಾಮಯ್ಯನವರ ಏಜೆಂಟರೆಂದು ಎಫ್ಐಆರ್ನಲ್ಲಿ ದಾಖಲಾಗಿದೆ ಎಂದು ಸುದ್ದಿಗಾರರ ಕೆಲವು ಪ್ರಶ್ನೆಗಳಿಗೆ ಪಿ.ರಾಜೀವ್ ಉತ್ತರಿಸಿದರು.
ಪರೀಕ್ಷೆ ಬರೆಯದವರೂ ನೇಮಕ
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, 2012-13ನೇ ಸಾಲಿನಲ್ಲಿ ಪ್ರೌಢಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಕರು ಸೇರಿ 3,407 ಹುದ್ದೆಗಳಿಗೆ ಹಾಗೂ 2014-15ರಲ್ಲಿ 1,689 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ನೇಮಕಾತಿ ಸಂದರ್ಭದಲ್ಲಿ ಎಲ್ಲ ಪ್ರತಿಭಾವಂತರನ್ನು ಆಯ್ಕೆ ಮಾಡದೆ ಹೆಚ್ಚು ಅಂಕ ಪಡೆಯದ ಕೆಲವು ಅಭ್ಯರ್ಥಿಗಳಿಗೂ ಹುದ್ದೆ ಲಭಿಸಿದೆ. ಪರೀಕ್ಷೆ ಬರೆಯದವರಿಗೂ ನೇಮಕಾತಿ ಮಾಡಲಾಗಿದೆ ಎಂದು ಆರೋಪಿಸಿದರು.
ಈ ಪ್ರಕರಣ 2022ರ ಜುಲೈ 5ರಂದು ಬೆಳಕಿಗೆ ಬಂತು. ಈ ಸಂಬಂಧ ಶಿಕ್ಷಣ ಇಲಾಖೆಯ ಒಬ್ಬರನ್ನು ಬಂಧಿಸಲಾಗಿದೆ. 12 ಜನ ಸಹ ಶಿಕ್ಷಕರನ್ನೂ ಬಂಧಿಸಲಾಗಿದೆ ಎಂದು ವಿವರಿಸಿದರು. 2014-15ರ ಆಯ್ಕೆಗೆ ಸಂಬಂಧಿಸಿ 2017-18, 2018-19ರ ನೇಮಕಾತಿ ಸಂದರ್ಭದಲ್ಲಿ ಮುಖ್ಯ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿ ಕರ್ತವ್ಯಕ್ಕೆ ಹಾಜರಾಗದ ಹುದ್ದೆಗಳಿಗೆ ಆಯ್ಕೆ ಪಟ್ಟಿಯಲ್ಲಿ ಇಲ್ಲದವರನ್ನು ಆಯ್ಕೆ ಮಾಡಲಾಗಿದೆ. ಮೆರಿಟ್ ಲಿಸ್ಟ್ ಬಿಟ್ಟು ನಾನ್ ಮೆರಿಟ್ ಇರುವವರು, ಕನಿಷ್ಠ ಅಂಕ ಪಡೆಯದವರಿಗೂ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಸಿದ್ದರಾಮಯ್ಯ ಅಕ್ರಮದ ಜವಾಬ್ದಾರಿ ಹೊರುತ್ತಾರಾ?
2012-13ನೇ ಸಾಲಿನಲ್ಲಿ ಒಬ್ಬರು ಮತ್ತು 2014-15ರಲ್ಲಿ 11 ಜನರು ಅಕ್ರಮವಾಗಿ ನೇಮಕವಾಗಿದ್ದಾರೆ. ಎಫ್ಐಆರ್ ಪ್ರತಿಗಳನ್ನು ಅವರು ಒದಗಿಸಿದರು. ಕಾಂಗ್ರೆಸ್ ಪಕ್ಷದ ಅಳಿವು ಉಳಿವಿನ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಬಗ್ಗೆ ಆರೋಪ ಮಾಡುತ್ತಾರೆ. ತಮ್ಮ ಕಾಲದಲ್ಲಿ ಭ್ರಷ್ಟಾಚಾರ ಆಗಿಲ್ಲ ಎನ್ನುವ ಸಿದ್ದರಾಮಯ್ಯ ಈ ಅಕ್ರಮಕ್ಕೆ ನೈತಿಕ ಜವಾಬ್ದಾರಿಯನ್ನು ಹೊರುತ್ತಾರಾ?. ನಾವೇನೂ ಅವರ ರಾಜೀನಾಮೆ ಕೇಳುವುದಿಲ್ಲ. ಏನು ಕ್ರಮ ತೆಗೆದುಕೊಳ್ಳುತ್ತೀರಿ? ಏನು ಪ್ರಾಯಶ್ಚಿತ್ತ ಮಾಡುತ್ತೀರಿ ಎಂದು ಪ್ರಶ್ನಿಸಿದರು. ಅಲ್ಲದೇ ಕಾಂಗ್ರೆಸ್ ಮುಖಂಡರು 40ಪರ್ಸೆಂಟ್ ಭ್ರಷ್ಟಾಚಾರ ಆರೋಪಕ್ಕೆ ದಾಖಲೆ ಬಿಡುಗಡೆಗೊಳಿಸಲಿ ಎಂದು ಆಗ್ರಹಿಸಿದರು.