ಪುನರ್ವಸು ಕಟ್ಟಡಕ್ಕೂ ನಮಗೂ ಆತ್ಮಬಂಧವಿದೆ, ರಾಘವೇಶ್ವರ ಶ್ರೀ
ಬೆಂಗಳೂರು, ಆ 1: ದೊಡ್ಡ ಗುರುಗಳು ನಮ್ಮನ್ನು ವಿವಿಧ ರೀತಿಯಲ್ಲಿ ಪರೀಕ್ಷಿಸಿ, ಉತ್ತರಾಧಿಕಾರಿಯಾಗಿ ಘೋಷಿಸಿದ್ದು ಇದೇ ಪುನರ್ವಸು ಕಟ್ಟಡದ ಜಾಗದಲ್ಲಾಗಿದೆ. ಸನ್ಯಾಸ ಸ್ವೀಕಾರ, ಮಹಾವಾಕ್ಯೋಪದೇಶ, ದೊಡ್ದ ಗುರುಗಳ ಮಾರ್ಗದರ್ಶನ ಎಲ್ಲವೂ ಇದೇ ಜಾಗದಲ್ಲಾಗಿದ್ದು, ಈ ಜಾಗಕ್ಕೂ ನಮಗೂ ಆತ್ಮಬಂಧವಿದೆ.
ದೊಡ್ದ ಗುರುಗಳು ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಹೆಚ್ಚಿನ ಸಮಯ ಇದೇ ಜಾಗದಲ್ಲಿ ವಸತಿ ಮಾಡಿದ್ದರು. ಈ ಜಾಗದಲ್ಲಿ ಇಂದು 25ನೇ ಚಾತುರ್ಮಾಸ್ಯ ವ್ರತ ಸ್ವೀಕಾರ ಮಾಡಿರುವುದು ಸಂತಸಮೂಡಿಸಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಹೇಳಿದ್ದಾರೆ.
ಬುಧವಾರ (ಆ 1) ಬೆಂಗಳೂರಿನ ಶಾಖಾಮಠವಾದ ಗಿರಿನಗರದ ಶ್ರೀರಾಮಾಶ್ರಮದಲ್ಲಿ "ಗೋಸ್ವರ್ಗ ಚಾತುರ್ಮಾಸ್ಯ"ದ ಧರ್ಮ ಸಭೆಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ನಾವು ಸನ್ಯಾಸ ಸ್ವೀಕರಿಸಿದ್ದ ಸ್ಥಳದಲ್ಲೇ 25ನೇ ಚಾತುರ್ಮಾಸ್ಯ ವ್ರತ ಸ್ವೀಕಾರ ಮಾಡುತ್ತಿರುವುದು ಸಂತಸದ ವಿಚಾರ.
ಭಾರತೀಯ ಪರಂಪರೆಯಲ್ಲಿ ಇಪ್ಪತ್ತೈದು - ಐವತ್ತು ವರ್ಷಗಳಿಗೆ ಮಹತ್ವವಿಲ್ಲ, ಬದಲಾಗಿ 48 ವರ್ಷಕ್ಕೆ ಪೂರ್ಣ ಮಂಡಲ, 24 ವರ್ಷಕ್ಕೆ ಅರ್ಧಮಂಡಲವಾಗಿ ಆಚರಿಸುತ್ತಾರೆ. 24ವರ್ಷಗಳ ಅರ್ಧಮಂಡಲವನ್ನು ಪೂರೈಸಿ, ಉತ್ತರಾರ್ಧವನ್ನು ಇಲ್ಲಿಂದಲೇ ಆರಂಭಿಸುವಂತೆ ಆಗಿರುವುದು ದೈವೀ ಸಂಕಲ್ಪ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಯಾವ ಇಚ್ಛೆಗೆ ಬಲವಾದ ದಾಢ್ಯ ಇರುವುದೋ ಅದಕ್ಕೆ ಸಂಕಲ್ಪ ಎಂದು ಹೆಸರು. ಇಚ್ಛೆ ಸಂಕಲ್ಪವಾದಾಗ ಕಾರ್ಯ ಸಾಧ್ಯವಾಗುತ್ತದೆ. ಯಾವ ಇಚ್ಛೆ ದೃಢವಾದದ್ದು, ಯಾವ ಇಚ್ಛೆ ಜೊಳ್ಳು ಎಂದು ಭಗವಂತನೂ ನೋಡುತ್ತಾನೆ. ಇಚ್ಚೆ ಬಲವಾಗಿದ್ದಾಗ ದೇವರೂ ಅದಕ್ಕೆ ತಥಾಸ್ತು ಎಂದು ಹೇಳುತ್ತಾನೆ ಎಂದು ರಾಘವೇಶ್ವರ ಶ್ರೀಗಳು ಹೇಳಿದರು.

ಎರಡು ತಿಂಗಳುಗಳ ಕಾಲ ಬೆಂಗಳೂರಿನಲ್ಲಿ ರಾಘವೇಶ್ವರ ಶ್ರೀಗಳ ಚಾತುರ್ಮಾಸ
ಗೋಸ್ವರ್ಗ ಗೋವುಗಳಿಗೆ ಸಮರ್ಪಿತವಾದಂತೆ, ಈ ಚಾತುರ್ಮಾಸ್ಯ ಗೋಸ್ವರ್ಗಕ್ಕೆ ಸಮರ್ಪಿತ. ಎರಡು ತಿಂಗಳುಗಳ ಕಾಲ ಬೆಂಗಳೂರಿನಲ್ಲಿ ಇದ್ದುಕೊಂಡು ಗೋಸ್ವರ್ಗಕ್ಕೆ ಚೈತನ್ಯ ತುಂಬುವ ಕೆಲಸವಾಗಲಿದೆ. ಗೋಸ್ವರ್ಗವನ್ನು ಸರ್ವ ಸುಸಜ್ಜಿತವಾಗಿಸಿ ಜಗತ್ತಿಗೆ ಮಾದರಿಯಾಗಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ - ರಾಘವೇಶ್ವರ ಶ್ರೀಗಳು.

ಬ್ರಾಹ್ಮಣರು ವೇದದ ಜೊತೆ ಗೋವುಗಳನ್ನು ಸಂರಕ್ಷಿಸಿಕೊಂಡು ಬಂದವರು
ಬ್ರಾಹ್ಮಣರು ವೇದದ ಜೊತೆ ಗೋವುಗಳನ್ನು ಸಂರಕ್ಷಿಸಿಕೊಂಡು ಬಂದವರಾಗಿದ್ದು, ಇತ್ತೀಚೆಗೆ ವೇದಗಳ ಜೊತೆ ಗೋವುಗಳನ್ನು ಮರೆಯುತ್ತಿದ್ದೇವೆ. ಆದರೆ ರಾಘವೇಶ್ವರ ಶ್ರೀಗಳು ಗೋವುಗಳ ಸಂರಕ್ಷಣೆಯನ್ನು ನೆನಪಿಸುವ ಕಾರ್ಯಮಾಡುತ್ತಿದ್ದಾರೆ. ಗುರುವನ್ನು ಚಂದನಕ್ಕೆ ಹೋಲಿಸಬಹುದಾಗಿದ್ದು, ಚಂದನ ಸುಗಂಧವನ್ನೇ ಹೊರಸೂಸುವಂತೆ ಗುರುಗಳು ಜ್ಞಾನವನ್ನು, ಉತ್ತಮ ವಿಚಾರಗಳನ್ನು ಸಮಾಜಕ್ಕೆ ನೀಡುತ್ತಾರೆ - ವಿದ್ವಾನ್ ಸೂರ್ಯನಾರಾಯಣ ಹಿತ್ಲಳ್ಳಿ

ಗೋವಿನಲ್ಲೇ ಸ್ವರ್ಗವಿದೆ ಎಂಬ ಸತ್ಯವನ್ನು ಜಗತ್ತಿಗೆ ತಿಳಿಸುತ್ತಿದ್ದಾರೆ
ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ್ ಕಜೆ ಮಾತನಾಡಿ, ಶ್ರೀಗಳು ಗೋಸ್ವರ್ಗವನ್ನು ಮಾತ್ರ ನಿರ್ಮಿಸಿಲ್ಲ, ಗೋವಿನಲ್ಲೇ ಸ್ವರ್ಗವಿದೆ ಎಂಬ ಸತ್ಯವನ್ನು ಜಗತ್ತಿಗೆ ತಿಳಿಸುತ್ತಿದ್ದಾರೆ. 'ಸ್ವರ್ಗಕ್ಕೆ ಮೂರೇ ಗೇಣು' ಎಂಬ ಮಾತು ಇದ್ದು, ಇಲ್ಲಿ ಮೂರು ಗೇಣುಗಳ ಕೊರತೆ ಸದಾ ಇರುತ್ತದೆ. ಆದರೆ ಗೋಸ್ವರ್ಗದ ಮೂಲಕ ಆ ಕೊರತೆಯನ್ನು ನೀಗಿಸಿ, ಗೋಸ್ವರ್ಗವನ್ನು ಭುವಿಗಿಳಿಸಿದ್ದಾರೆ ಎಂದು ಗಿರಿಧರ್ ಕಜೆ ಅಭಿಪ್ರಾಯಪಟ್ಟರು.

ಚಾತುರ್ಮಾಸ್ಯಕ್ಕೆ ವಿಶಿಷ್ಟ ರೂಪ ನೀಡಿದವರು ಶ್ರೀಗಳು
ಪ್ರಾಸ್ತಾವಿಕ ಮಾತನಾಡಿದ ವಿದ್ವಾನ್ ಜಗದೀಶ ಶರ್ಮರು, ಪ್ರತಿ ಚಾತುರ್ಮಾಸ್ಯಕ್ಕೆ ಒಂದು ಉದ್ದೇಶವನ್ನು ಇಟ್ಟುಕೊಂಡು, ಸಮಗ್ರ ಸಮಾಜವನ್ನು ತೊಡಗಿಸಿಕೊಳ್ಳುವಂತೆ ಮಾಡಿ, ಚಾತುರ್ಮಾಸ್ಯಕ್ಕೆ ವಿಶಿಷ್ಟ ರೂಪ ನೀಡಿದವರು ಶ್ರೀಗಳು. ವಿಶಿಷ್ಟ ಕಲ್ಪನೆಯ ಗೋಧಾಮ "ಗೋಸ್ವರ್ಗ" ವನ್ನು ಸಮಾಜಕ್ಕೆ ಪರಿಚಯಿಸಲು ಈ ಚಾತುರ್ಮಾಸ್ಯ ನಡೆಯಲಿದೆ. ಭಾನ್ಕುಳಿಯಲ್ಲಿರು ವಿಶ್ವದ ಏಕೈಕ ಗೋಸ್ವರ್ಗವನ್ನು ಅಂತಾರಾಷ್ಟ್ರೀಯ ಮಟ್ಟದ ಕೇಂದ್ರವಾಗಿಸಬೇಕಿದೆ ಎಂದರು.

ಶಂಕರ ಪರಂಪರೆಯ ಮಠೀಯ ಪದ್ಧತಿ
ಇದಕ್ಕೂ ಮೊದಲು ಬೆಳಗ್ಗೆ, ಶ್ರೀಗಳು ತಮ್ಮ 25ನೇ ಚಾತುರ್ಮಾಸ್ಯ ವ್ರತವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ವ್ಯಾಸಪೂಜೆಯನ್ನು ಕೈಗೊಳ್ಳುವ ಮೂಲಕ ವಿದ್ಯುಕ್ತವಾಗಿ ಆರಂಭಿಸಿದರು. ಶ್ರೀರಾಮಾದಿ ದೇವರ ಪೂಜೆಯನ್ನು ಮಾಡಿ, ನಿಂಬೆಹಣ್ಣಿನಲ್ಲಿ ಕೃಷ್ಣಾದಿ ದೇವತೆಗಳು ಹಾಗೂ ವ್ಯಾಸಾದಿ ಋಷಿಗಳನ್ನು ಆವಾಹನೆಮಾಡಿ, ಶಂಕರ ಪರಂಪರೆಯ ಮಠೀಯ ಪದ್ಧತಿಯಂತೆ ಪೂಜಿಸುವುದರ ಮೂಲಕ ವ್ಯಾಸಪೂಜೆ ಸಂಪನ್ನವಾಯಿತು.












Click it and Unblock the Notifications