ಕಲುಷಿತ ನೀರು ಸೇವಿಸಿ ಕಾರ್ಮಿಕರು ಅಸ್ವಸ್ಥ: ಕಾರ್ಖಾನೆಗೆ ನೋಟಿಸ್
ಬೆಂಗಳೂರು, ಮೇ 29: ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕಲುಷಿತ ನೀರು ಸೇವಿಸಿ 150ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ಆನೇಕಲ್ ತಾಲೂಕಿನ ಬೂರಗುಂಟೆ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕಾರ್ಮಿಕರನ್ನು ಸಮೀಪದ ಅತ್ತಿಬೆಲೆ ಹಾಗೂ ಸರ್ಜಾಪುರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಘಟನೆ ವರದಿಯಾದ ಕೂಡಲೇ ಜಿಲ್ಲಾಧಿಕಾರಿ ಕೆ.ಎ. ದಯಾನಂದ ರವರ ಸೂಚನೆ ಮೇರೆಗೆ ತಹಶೀಲ್ದಾರ್ ಲಕ್ಷ್ಮೀಸಾಗರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಕಾರ್ಖಾನೆಗೆ ಭೇಟಿ ನೀಡಿ, ಅಸ್ವಸ್ಥರನ್ನು ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಲು ನೆರವಾಗಿದ್ದಾರೆ.
ಕಳೆದ ಶನಿವಾರವೇ ಅವಘಡ ಸಂಭವಿಸಿ 50 ರಿಂದ 70 ಕಾರ್ಮಿಕರು ಅಸ್ವಸ್ಥರಾಗಿದ್ದರೂ ಸಹ ಮಾಹಿತಿಯನ್ನು ಗೌಪ್ಯವಾಗಿಟ್ಟಿದ್ದರ ಪರಿಣಾಮ ಸೋಮವಾರ ಪುನ: 100 ಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥರಾಗಲು ಕಾರಣವಾಗಿದೆ. ಕಾರ್ಖಾನೆಯಲ್ಲಿ 2500 ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಕಾರ್ಖಾನೆ ಆವರಣದಲ್ಲಿ ಎರಡು ಕೊಳವೆ ಬಾವಿಗಳಿದ್ದು, ಈ ಕೊಳವೆ ಬಾವಿಗಳಿಂದ ನೀರನ್ನು ಕುಡಿಯಲು ಸರಬರಾಜು ಮಾಡಲಾಗುತ್ತಿದೆ.

ಕಳೆದ ಶನಿವಾರವೇ ಘಟನೆ ನಡೆದಿದ್ದರೂ ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಗಳಿಗೆ ಮಾಹಿತಿ ನೀಡದೇ ಗೌಪ್ಯವಾಗಿಟ್ಟಿದ್ದರ ಪರಿಣಾಮ ಘಟನೆ ಪುನರಾವರ್ತನೆಯಾಗಲು ಕಾರಣವಾಗಿರುವ ಹಿನ್ನೆಲೆಯಲ್ಲಿ ಕಾರ್ಖಾನೆ ಮಾಲೀಕರಿಗೆ ನೋಟೀಸ್ ಜಾರಿ ಮಾಡಲಾಗಿದೆ ಅಲ್ಲದೇ ತಕ್ಷಣವೇ ಮುಂದಿನ ಆದೇಶದವರೆಗೆ ಕಾರ್ಖಾನೆಯನ್ನು ಮುಚ್ಚಲು ಸೂಚಿಸಲಾಗಿದೆ.
ಈ ಅವಘಡದ ಬಗ್ಗೆ ವಾಸ್ತವಾಂಶ ಹಾಗೂ ಸಕಾರಣಗಳನ್ನು ತಿಳಿದುಕೊಳ್ಳಲು ಪರಿಸರ ಮಾಲಿನ್ಯ ಇಲಾಖೆ, ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ತಪಾಸಣೆ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಕೆ.ಎ. ದಯಾನಂದ ರವರು ಸೂಚಿಸಿದ್ದಾರೆ.












Click it and Unblock the Notifications