ಆನೆಕಲ್ನಲ್ಲಿ ಭರ್ಜರಿ ಭೇಟೆ: ಒಂದು ಸಾವಿರ ಕೆ.ಜಿ ಗಾಂಜಾ ವಶ
ಆನೆಕಲ್, ಸೆಪ್ಟೆಂಬರ್ 24: ಒಂದು ಕೆ.ಜಿ, ಎರಡು ಕೆ.ಜಿ ಹೆಚ್ಚೆಂದರೆ 50-100 ಕೆ.ಜಿ ಗಾಂಜಾ ದೊರಕುವುದು ಸಾಮಾನ್ಯವಾಗಿ ಕೇಳಿರುತ್ತೇವೆ, ಆದರೆ ನಿನ್ನೆ ಪೊಲೀಸರು ಒಬ್ಬನ ಬಳಿಯೇ ಬರೋಬ್ಬರಿ 1000 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಹೌದು, ಆನೆಕಲ್ನಲ್ಲಿ ನಿನ್ನೆ ಪೊಲೀಸರು ಡೇವಿಡ್ ಎಂಬ ವ್ಯಕ್ತಿಯಿಂದ ಬರೋಬ್ಬರಿ 1000 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆ ವೇಳೆ ಡೇವಿಡ್ನಿಗೆ ಗುಂಡು ಹಾರಿಸಿ ಗಾಯಗೊಳಿಸಲಾಗಿದೆ.
ಧರ್ಮಸ್ಥಳದಲ್ಲಿ ಗಾಂಜಾ ವ್ಯವಹಾರ ನಡೆಸುತ್ತಿದ್ದ ಯುವಕನಿಗೆ ಬಿತ್ತು ಧರ್ಮದೇಟು
ಸೂರ್ಯಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಮರಸೂರು ಬಳಿ ಘಟನೆ ನಡೆದಿದ್ದು, ಆರೋಪಿ ಡೇವಿಡ್ ಅನ್ನು ಬಂಧಿಸುವ ಕಾರ್ಯದಲ್ಲಿ ಒಬ್ಬ ಪೊಲೀಸ್ ಪೇದೆಗೂ ಗಾಯವಾಗಿದೆ.
ಮರಸೂರು ಬಳಿ ಸ್ಕಾರ್ಪಿಯೋ ವಾಹನದಲ್ಲಿ ಆರೋಪಿ ಡೇವಿಡ್ ತೆರಳುತ್ತಿದ್ದ ಈ ವೇಳೆ ವೃತ್ತ ನಿರೀಕ್ಷಕ ವಿಕ್ಟರ್ ಸೈಮನ್, ಎಸ್ಐ ಜಗದೀಶ್, ಕಾನ್ಸ್ಟೇಬಲ್ ಹನುಂತಯ್ಯ ಸ್ಕಾರ್ಪಿಯೋ ವಾಹನವನ್ನು ಅಡ್ಡಗಟ್ಟಿದ್ದಾರೆ.
ಡೇವಿಡ್ನನ್ನು ವಿಚಾರಣೆ ನಡೆಸಬೇಕಾದರೆ ಆತ ಚಾಕುವಿನಿಂದ ಕಾನ್ಸ್ಟೇಬಲ್ ಹನುಮಂತಯ್ಯನಿಗೆ ಚುಚ್ಚಿ ರಸ್ತೆ ಪಕ್ಕದ ನೀಲಗಿರಿ ತೋಪಿನಲ್ಲಿ ಪರಾರಿ ಆಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಡೇವಿಡ್ನ ಕಾಲಿಗೆ ಗುಂಡು ಹೊಡೆದು ಗಾಯಗೊಳಿಸಿ ಆತನನ್ನು ಬಂಧಿಸಿದ್ದಾರೆ.
ಸ್ಕಾರ್ಪಿಯೋ ವಾಹನದಲ್ಲಿದ್ದ ಹಾಗೂ ಆರೋಪಿಯ ಮನೆಯಲ್ಲಿದ್ದ ಬರೋಬ್ಬರಿ 1000 ಕೆ.ಜಿ ಗಾಂಜಾ ವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರ ಅಂದಾಜು ಮೌಲ್ಯ 3.6 ಕೋಟಿ ರೂಪಾಯಿಗಳಾಗುತ್ತದೆ.
ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಚನ್ನಣ್ಣನವರ್, ಡಿವೈಎಸ್ಪಿ ನಂಜುಂಡೇಗೌಡ ಭೇಟಿ ನೀಡಿದ್ದರು. ಆನೆಕಲ್ ಮತ್ತು ಸುತ್ತ-ಮುತ್ತ ಗಾಂಜಾ ಹಾವಳಿ ಹೆಚ್ಚಾಗಿದೆಯೆಂದು ಇತ್ತೀಚೆಗೆ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ದೂರು ನೀಡಿದ್ದರು. ಹಾಗಾಗಿ ಗಾಂಜಾ ದಂಧೆ ತಡೆ ಬಗ್ಗೆ ಪೊಲೀಸರು ಹೆಚ್ಚಿನ ಕಾಳಜಿ ವಹಿಸಿದ್ದಾರೆ.