ನೂರು ಮಂದಿ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ
ಬೆಂಗಳೂರು,ಜೂ.25: ಖ್ಯಾತ ಚಿತ್ರನಟರಾದ ರಮೇಶ್ ಭಟ್, ಶ್ರೀನಿವಾಸ ಮೂರ್ತಿ, ಸಾಹಿತಿ ಕೊ.ವೆಂ.ರಾಮಕೃಷ್ಣಗೌಡ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 100 ಮಂದಿ ಕೆಂಪೇಗೌಡ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಶಸ್ತಿ ಪುರಸ್ಕೃತರ ಸಂಖ್ಯೆ 125ಕ್ಕೆ ತಲುಪುವ ಸಾಧ್ಯತೆ ಇದೆ. ಸಾಹಿತಿಗಳಾದ ಕೊ.ವೆಂ.ರಾಮಕೃಷ್ಣ ಗೌಡ, ಪಾಲನೇತ್ರ, ಸಂಗೀತ ವಿದೂಷಿ ಈರಾಬಾಯಿ, ಹವ್ಯಾಸಿ ಛಾಯಾಚಿತ್ರಗಾರ ರಾಜಣ್ಣ, ನಾದಸ್ವರ ಕಲಾವಿದ ರಾಮಕೃಷ್ಣಪ್ಪ, ಅಂತಾರಾಷ್ಟ್ರೀಯ ಈಜುಪಟು ಋಷಿ ದಿನೇಶ್, ಜನಪದ ಕಲಾವಿದ ಗೊ.ನಾ.ಸ್ವಾಮಿ, ಅಂತಾರಾಷ್ಟ್ರೀಯ ಕ್ರೀಡಾಪಟು ಚಿರಂತ್ ಭಾರದ್ವಾಜ್, ವಾಲಿಬಾಲ್ ಪಟು ನಾಗೇಶ್ ಪಟ್ಟಿಯಲ್ಲಿದ್ದಾರೆ.

ಸಮಾಜ ಸೇವಕ ಡಾ.ಸತೀಶ್, ಖ್ಯಾತ ವೈದ್ಯರಾದ ಶ್ರೀಕಾಂತ್ ಶೆಟ್ಟಿ, ಡಾ.ಮೃತ್ಯುಂಜಯ, ಕೃಷಿ ಚಿಂತಕ ಕೆಂಪಸಿದ್ದೇಗೌಡ ಸೇರಿದಂತೆ ನೂರು ಮಂದಿ ಪುರಸ್ಕೃತರ ಪಟ್ಟಿ ಸಿದ್ಧವಾಗಿದೆ.
ಶಾಸಕರು, ಪ್ರಭಾವಿಗಳ ಒತ್ತಡದ ಹಿನ್ನೆಲೆಯಲ್ಲಿ ಇದು 125ಕ್ಕೆ ಏರುವ ಸಾಧ್ಯತೆ ಇದೆ. ಇದೇ 27ರ ಸಂಜೆ ಬಿಬಿಎಂಪಿ ಕೇಂದ್ರ ಕಚೇರಿಯ ಡಾ.ರಾಜ್ಕುಮಾರ್ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಸಕ್ತ ಸಾಲಿನ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.[16 ಮಂದಿಗೆ ಡಿಎಸ್ ಮ್ಯಾಕ್ಸ್ ಕಲಾಶ್ರೀ ಪ್ರಶಸ್ತಿ ಪ್ರದಾನ]
ಪ್ರಶಸ್ತಿ ಪುರಸ್ಕೃತರಿಗೆ ಕೆಂಪೇಗೌಡ ಸ್ಮರಣಿಕೆ, ಪ್ರಶಸ್ತಿ ಪತ್ರ, ನಗದು ಬಹುಮಾನ ನೀಡಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಮೇಯರ್ ಕಟ್ಟೆ ಸತ್ಯನಾರಾಯಣ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.












Click it and Unblock the Notifications