ಗಾಲಿ ರೆಡ್ಡಿಗೆ ಐಟಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳೇನು?
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಪುತ್ರಿ ಬ್ರಹ್ಮಿಣಿ ಮದುವೆ ಖರ್ಚು ವೆಚ್ಚದ ಬಗ್ಗೆ ಸುಮಾರು 16 ಪ್ರಶ್ನೆಗಳನ್ನು ಕೇಳಲಾಗಿದೆ. ನವೆಂಬರ್ 24ರೊಳಗೆ ಈ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ
ಬಳ್ಳಾರಿ, ನವೆಂಬರ್ 21 : ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಎಎಂಸಿ ಕಚೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದು, ಬ್ರಹ್ಮಿಣಿ ಮದುವೆ ಖರ್ಚು ವೆಚ್ಚದ ಬಗ್ಗೆ ಸುಮಾರು 16 ಪ್ರಶ್ನೆಗಳನ್ನು ಕೇಳಲಾಗಿದೆ. ನವೆಂಬರ್ 24ರೊಳಗೆ ಈ ಪ್ರಶ್ನೆಗಳಿಗೆ ಉತ್ತರಿಸುವಂತೆ ಗಾಲಿ ರೆಡ್ಡಿಗೆ ಸೂಚಿಸಲಾಗಿದೆ.
ಬಳ್ಳಾರಿಯಲ್ಲಿರುವ ಎಎಂಸಿ, ಒಎಂಸಿ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಹಲವಾರು ದಾಖಲೆಗಳನ್ನು ಪರಿಶೀಲಿಸಿದರು. ಗಾಲಿ ಜನಾರ್ದನ ರೆಡ್ಡಿ ಅವರು ಈಗಷ್ಟೇ ಮಗಳು ಬ್ರಹ್ಮಣಿ ಮದುವೆ ಸಂಭ್ರಮ ಮುಗಿಸಿಕೊಂಡು ಬಳ್ಳಾರಿಗೆ ತೆರಳಿದ್ದರು. ನವೆಂಬರ್ 22ರಂದು ಸುಪ್ರೀಂಕೋರ್ಟ್ ಆದೇಶದಂತೆ ಬಳ್ಳಾರಿ ಬಿಟ್ಟು ಬೆಂಗಳೂರಿಗೆ ಬರಬೇಕಿತ್ತು. ಈ ಸಂದರ್ಭದಲ್ಲೇ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.[ಐಟಿ ಶಾಕ್ : ಹೈದರಾಬಾದಿನಿಂದ ಬಳ್ಳಾರಿಗೆ ಬಂದಿಳಿದ ರೆಡ್ಡಿ]

200 ಕೋಟಿ ರು ವೆಚ್ಚದ ಅದ್ದೂರಿ ಮದುವೆಗೆ ಖರ್ಚು ಮಾಡಿದ ಹಣದ ಬಗ್ಗೆ ಸ್ಪಷ್ಟನೆ ಕೋರಿರುವ ಆದಾಯ ತೆರಿಗೆ ಇಲಾಖೆ. ಆದಾಯ ತೆರಿಗೆ 133 (ಎ) ಅನ್ವಯ ನೋಟಿಸ್ ನೀಡಿದ್ದಾರೆ. ಮೂರು ಪುಟಗಳ ನೋಟಿಸ್ ನಲ್ಲಿ 16 ಪ್ರಶ್ನೆಗಳಿವೆ.

ನವೆಂಬರ್ 8ರಂದು ಕೇಂದ್ರ ಸರ್ಕಾರ 500, 1000 ರೂಪಾಯಿ ನೋಟುಗಳ ಬಳಕೆಯನ್ನು ನಿಷೇಧಿಸಿತ್ತು. ಹೀಗಾಗಿ ಗಾಲಿ ರೆಡ್ಡಿ ಬಳಸಿದ ನೋಟುಗಳ ಬಗ್ಗೆ ಪ್ರಶ್ನೆ. ಅಕ್ರಮ ಗಣಿಗಾರಿಕೆ, ಅಕ್ರಮ ಆಸ್ತಿ ಸಂಪಾದನೆಗೆ ಸೇರಿದಂತೆ 8ಕ್ಕೂ ಅಧಿಕ ಕೇಸುಗಳು ಗಾಲಿ ರೆಡ್ಡಿ ಅವರ ಮೇಲಿದೆ.

ಏನೇನು ಪ್ರಶ್ನೆಗಳು: ಮದುವೆಗೆ ಎಷ್ಟು ಖರ್ಚು ತಗುಲಿದೆ?ಮದುವೆಗೆ ಎಷ್ಟು ಅತಿಥಿಗಳು ಆಗಮಿಸಿದ್ರು? ಮದುವೆಯ ಇವೆಂಟ್ ಮ್ಯಾನೇಜರ್ ಯಾರು? ಕ್ಯಾಟರಿಂಗ್, ಪೌರೋಹಿತ್ಯ, ವಿಡಿಯೋಗ್ರಫಿ, ಭದ್ರತೆ, ಮನರಂಜನೆಗೆ ತಗುಲಿದ ವೆಚ್ಚ ಹಣ ಸಂದಾಯದ ಬಗೆಗಳ ವಿವರ ಆಮಂತ್ರಣ ಪತ್ರಿಕೆಗಳ ಸಂಖ್ಯೆ, ಮುದ್ರಕರ ವಿಳಾಸ,ಆಭರಣ ಖರೀದಿ ವಿವರಗಳು, ಅತಿಥಿಗಳಿಗೆ ನೀಡಲಾದ ಗಿಫ್ಟ್ಗಳ ವಿವರ, ಅತಿಥಿಗಳು ನೆಲೆಸಿದ್ದ ಹೋಟೆಲ್ ಖರ್ಚು ವೆಚ್ಚ, ಎಲ್ಲ ಖರ್ಚು ಹೇಗೆ ಸಂದಾಯ ಮಾಡಿದ್ದೀರಿ? ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕ ಸಂದಾಯ ಮಾಡಿದ್ದೀರಾ? ನಗದು ರೂಪದಲ್ಲಿ ಸಂದಾಯವಾಗಿದ್ದರೆ ಮೂಲ ಯಾವುದು? ಯಾವ ನೋಟು ಬಳಕೆ ಮಾಡಿದ್ದೀರಿ? ಹೀಗೆ ಒಟ್ಟು 16 ಪ್ರಶ್ನೆಗಳನ್ನು ನೋಟಿಸ್ನಲ್ಲಿ ಕೇಳಲಾಗಿದೆ.












Click it and Unblock the Notifications