ಅಮಿತ್ ಶಾ ಆಣತಿಯಂತೆ ಬಿಜೆಪಿ ವಿಧಾನಸಭೆ ಟಿಕೆಟ್: ಯಡಿಯೂರಪ್ಪ
ಮುಂದಿನ ವರ್ಷ ನಡೆಯುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬೆಳಗಾವಿ, ಮೇ 9: ಕರ್ನಾಟಕ ವಿಧಾನಸಭೆಗಾಗಿ ಮುಂದಿನ ವರ್ಷ ನಡೆಯುವ ಚುನಾವಣೆಯ ಅಭ್ಯರ್ಥಿಗಳನ್ನು ಕೇಂದ್ರ ನಾಯಕರೇ ಆಯ್ಕೆ ಮಾಡಲಿದ್ದಾರೆ. ಅದಕ್ಕಾಗಿ ಈಗಾಗಲೇ ಸಮೀಕ್ಷೆ ಆರಂಭಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬೆಳಗಾವಿಗೆ ಸಮೀಪದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಇತರ ಕೇಂದ್ರ ನಾಯಕರಿಗೆ ಬಿಟ್ಟಿದ್ದು ಎಂದು ಅವರು ಹೇಳಿದರು. ರಾಜ್ಯದಲ್ಲಿ ಒಂದಲ್ಲ ಎರಡು ಬಾರಿ ಸಮೀಕ್ಷೆ ನಡೆಸಿ, ಅಳೆದು-ತೂಗಿ ಆ ಬಳಿಕವೇ ಟಿಕೆಟ್ ಅಂತಿಮ ಮಾಡಲಾಗುವುದು ಎಂದು ಬಿಎಸ್ ವೈ ತಿಳಿಸಿದ್ದಾರೆ.[ಬಿಎಸ್ ವೈ ಕಟ್ಟಿಹಾಕಲು ಸೃಷ್ಟಿಯಾಗಿದ್ದೇ ಬಿಜೆಪಿ ಬಿಕ್ಕಟ್ಟು!]
ಮೇ 18ರಿಂದ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳುತ್ತೇನೆ ಎಂದು ತಿಳಿಸಿದ ಯಡಿಯೂರಪ್ಪ, ಜೆಡಿಎಸ್ ನಲ್ಲೇ ಸಾಕಷ್ಟು ಗೊಂದಲ, ಭಿನ್ನಾಭಿಪ್ರಾಯಗಳಿವೆ. ಮೊದಲು ಅದನ್ನು ಸರಿ ಮಾಡಿಕೊಳ್ಳಲಿ. ಆಮೇಲೆ ಬೇರೆ ಪಕ್ಷದ ಬಗ್ಗೆ ಮಾತನಾಡಲಿ ಎಂದು ಎಚ್ ಡಿ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದರು.
ಚುನಾವಣೆ ಹೊತ್ತಿಗೆ ಬಿಜೆಪಿ ಆರು ಹೋಳಾಗಲಿದೆ ಎಂದು ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಬಿಎಸ್ ವೈ ತಿರುಗೇಟು ನೀಡಿದರು. ರಾಜ್ಯ ಸರಕಾರದ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಬಾರಿಯ ವಿಚಿತ್ರ ಏನೆಂದರೆ, ಕಾಂಗ್ರೆಸ್ ನಲ್ಲಿ ಸ್ಥಳೀಯ ನಾಯಕರ ನಿರ್ಧಾರಕ್ಕೆ ಮಣೆ ಹಾಕಲು ಕೈಕಮಾಂಡ್ ನಿರ್ಧರಿಸಿದರೆ, ಬಿಜೆಪಿಯಲ್ಲಿ ರಾಷ್ಟ್ರೀಯ ನಾಯಕರೇ ಎಲ್ಲ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಎಂಬ ಸುದ್ದಿ ಬಂದಿದೆ.[ಯೋಗಿಯಾಗಲು ಬಿಎಲ್ ಸಂತೋಷ್ ಗೆ ಏಕೆ ಸಾಧ್ಯವಿಲ್ಲ?]
ಬಿಜೆಪಿ ಕಾರ್ಯಕಾರಿಣಿ ನಂತರ ಟಿಕೆಟ್ ವಿಚಾರವಾಗಿ ಬಿಎಸ್ ವೈ ನೀಡಿದ ವಿಧಾನಸಭೆ ಟಿಕೆಟ್ ಕುರಿತಾದ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ.