ಬೆಳಗಾವಿಯಲ್ಲಿ 'ಯುವ ಚೈತನ್ಯ ಯಾತ್ರೆ'ಗೆ ಚಾಲನೆ
ಬೆಳಗಾವಿ, ಜ.7 : ಸ್ವಾಮಿ ವಿವೇಕಾನಂದರ 152ನೇ ಜಯಂತಿ ಅಂಗವಾಗಿ ಬಿಜೆಪಿ ಯುವ ಮೋರ್ಚಾ ಬೆಳಗಾವಿಯಿಂದ ಮೈಸೂರಿನವರೆಗೆ ಹಮ್ಮಿಕೊಂಡಿರುವ 'ಯುವ ಚೈತನ್ಯ ಯಾತ್ರೆ'ಗೆ ಚಾಲನೆ ಸಿಕ್ಕಿದೆ. ಸುಮಾರು 1,200 ಕಿ.ಮೀ. ದೂರು ಈ ಯಾತ್ರೆ ಸಾಗಲಿದೆ.
ಬೆಳಗಾವಿಯ ಸಂಭಾಜಿ ಉದ್ಯಾನದಲ್ಲಿ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಅನುರಾಗ್ ಸಿಂಗ್ ಠಾಕೂರ್ ಮಂಗಳವಾರ ಯುವ ಚೈತನ್ಯ ಯಾತ್ರೆಗೆ ಚಾಲನೆ ನೀಡಿದರು. ಜನವರಿ 12ರವರೆಗೆ ಯಾತ್ರೆ ನಡೆಯಲಿದ್ದು, ಧಾರವಾಡ, ಗದಗ, ಉತ್ತರ ಕನ್ನಡ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಮಡಿಕೇರಿ ಜಿಲ್ಲೆಗಳ ಮೂಲಕ ಯಾತ್ರೆ ಮೈಸೂರು ತಲುಪಲಿದೆ.

ಸ್ವಾಮಿ ವಿವೇಕಾನಂದರು 1892ರ ಅಕ್ಟೋಬರ್ 15ರಿಂದ 27ರ ವರೆಗೆ ಬೆಳಗಾವಿಯಲ್ಲಿ 13 ದಿನ ಉಳಿದುಕೊಂಡಿದ್ದರು. ನಂತರ ಬೆಂಗಳೂರಿಗೆ ತೆರಳಿ ಮೈಸೂರಿನಲ್ಲಿ ಕೆಲವು ದಿನಗಳ ಕಾಲ ತಂಗಿದ್ದರು. ಆದ್ದರಿಂದ ಬೆಳಗಾವಿಯಿಂದ ಮೈಸೂರಿನವರೆಗೆ ಯಾತ್ರೆ ಹಮ್ಮಿಕೊಳ್ಳಲಾಗಿದೆ. [ಬೆಳಗಾವಿಯಲ್ಲಿ ಪಾಕ್ ಪರ ಘೋಷಣೆ]
ಸುಮಾರು 1,200 ಕಿ.ಮೀ. ದೂರ ಕ್ರಮಿಸಲಿರುವ ಈ ಯಾತ್ರೆಯ ಸಂದರ್ಭದಲ್ಲಿ 25 ಶೋಭಾಯಾತ್ರೆ, 14 ಸಾರ್ವಜನಿಕ ಕಾರ್ಯಕ್ರಮ ಹಾಗೂ ಬೈಕ್ ರ್ಯಾಲಿ, 7 ಕಡೆ ಪಂಜಿನ ಮೆರವಣಿಗೆ ನಡೆಯಲಿದೆ. ವಿವೇಕಾನಂದರ ಸಂದೇಶ ಸಾರುವ ಪುಸ್ತಕಗಳ ಪ್ರದರ್ಶನ ವಾಹನವೂ ಯಾತ್ರೆಯ ಜೊತೆ ಸಾಗಲಿದೆ.

ಜ. 12ರಂದು ಮೈಸೂರಿನಲ್ಲಿ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದ್ದು, 'ಯುವ ಮೋರ್ಚಾ ವತಿಯಿಂದ ಒಂದು ಲಕ್ಷ ಯುವಕರಿಗೆ 'ವಿವೇಕ ಬ್ಯಾಂಡ್' ವಿತರಿಸಲಾಗುತ್ತದೆ. ಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷ ಮುನಿರಾಜು ಗೌಡ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications