"ಬಿಟ್ಟು ಹೋಗಂಗಿಲ್ಲ"; ಶೋಭಕ್ಕನ ಸಿಟ್ಟು ಪುರಾಣದಲ್ಲಿ ಬಿಎಸ್ ವೈ ಮುಜುಗರ ಕಾಂಡ
ಬೆಳಗಾವಿ, ಮಾರ್ಚ್ 15: ಮುಖ್ಯಮಂತ್ರಿ ಯಡಿಯೂರಪ್ಪ ಅವರದು ಬಹುತೇಕ ಸಂದರ್ಭದಲ್ಲಿ ಘನಘೋರ ಗಂಭೀರ ಫೇಸು. ಆದರೆ ಅವರ ಜತೆಗೆ ಪಕ್ಷದ ಕಾರ್ಯಕ್ರಮಗಳಲ್ಲಿ ಹಾಗೂ ಕೆಲವು ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಸಂಸದೆ ಶೋಭಾ ಕರಂದ್ಲಾಜೆ ಅವರದಂತೂ ಶುದ್ಧಾನಿಶುದ್ಧ ಕ್ಲೋಸ್ ಅಪ್ ಟೂಥ್ ಪೇಸ್ಟ್ ಜಾಹೀರಾತಿನ ನಗುಮೊಗ. ಆದರೆ ಭಾನುವಾರ ಬೆಳಗಾವಿಯಲ್ಲಿ ಶೋಭಾ ಕರಂದ್ಲಾಜೆ ಅವರ ಮುನಿಸಿಗೆ ಸ್ವತಃ ಯಡಿಯೂರಪ್ಪನವರೇ ಮ್ಯಾಕೆ ಕೆಳಕ್ಕೆ ನೋಡುವಂಗಾಗಿದೆ.
ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಅವರ ಮಗಳ ಮದುವೆಯಲ್ಲಿ ಪಾಲ್ಗೊಂಡಿದ್ದ ನಂತರ ಮುಖ್ಯಮಂತ್ರಿಗಳು ವಿಶೇಷ ವಿಮಾನದಲ್ಲಿ ಹುಬ್ಬಳಿಗೆ ತೆರಳಲು ಅನುವಾದರು. ತಮ್ಮ ಜತೆ ಹೋಮ್ ಮಿನಿಸ್ಟರ್ ಬಸವರಾಜ ಬೊಮ್ಮಾಯಿ ಬರಲಿ ಎಂಬುದು ಸಿಎಂ ಅಪೇಕ್ಷೆಯಾಗಿತ್ತು.
ಸ್ವತಃ ಅದ್ಧೂರಿ ಮದುವೆಯಲ್ಲಿ ಭಾಗಿಯಾದ ಸಿಎಂ ಯಡಿಯೂರಪ್ಪ
ಆದರೆ, ಏನು ಮಾಡೋದು? ವಿಮಾನದಲ್ಲಿ ಬೊಮ್ಮಾಯಿ ಹತ್ತಿಕೊಂಡುಬಿಟ್ಟರೆ ಶೋಭಕ್ಕಂಗೆ ಜಾಗವೇ ಇಲ್ಲದಂಗೆ ಆಗುತ್ತೆ. ಆದರೂ ಇದು ಗಮನಕ್ಕೆ ಬಂತೋ ಇಲ್ಲವೋ? ಯಡಿಯೂರಪ್ಪನವರು ಮಾತ್ರ, ವಿಮಾನ ಹತ್ತಪ್ಪ ಬಸೂ ಅಂದಿದ್ದಾರೆ.
ಅದೊಂದು ಮಾತು ಕೇಳಿದ್ದೇ ತಡ, ಶೋಭಕ್ಕನಿಗೆ ಸಟಕ್ಕನೆ ಸಿಟ್ಟು ಬಂದಿದೆ. "ಜೊತೆಯಲ್ಲಿ ಕರೆದುಕೊಂಡು ಬಂದು ಈಗ ಬಿಟ್ಟು ಹೋಗ್ತೀರಾ?" ಅಂತ ಮಕಮಕ ಕೇಳಿಬಿಟ್ಟಿದ್ದಾರೆ. ಪಕ್ಷದ ಮುಖಂಡರು, ಅಧಿಕಾರಿಗಳು ಎಲ್ಲರೆದುರು ಹೀಗೆ ಕೇಳುತ್ತಿದ್ದಂತೆ, ಅಯ್ಯೋ ಇದೇನಾಯಿತು ಅಂತ ಸಾವರಿಸಿಕೊಳ್ಳುವುದಕ್ಕೆ ಸಿಎಂ ಸಾಹೇಬರಿಗೆ ಸ್ವಲ್ಪ ಸಮಯ ಹಿಡಿದಿದೆ.
ಪೊಲೀಸರಿಂದ ಧ್ವಜ ವಂದನೆ ಸ್ವೀಕರಿಸುವಾಗಲೇ ಹೀಗಾಗಿದ್ದಕ್ಕೆ ಯಡಿಯೂರಪ್ಪನವರಿಗೂ ಹೆಂಗೆಂಗೋ ಆಗಿದೆ. ಆಮೇಲೆ ಸ್ವತಃ ಬೊಮ್ಮಾಯಿ ಅವರು ತ್ಯಾಗರಾಜರಾಗಲು ಮುಂದಾಗಿ, ನನ್ನ ಬದಲು ನೀವೇ ವಿಮಾನದಲ್ಲಿ ಹೋಗಿ ಎಂದು ಕರಂದ್ಲಾಜೆ ಅವರ ಸಿಟ್ಟು ತಮಣಿ ಮಾಡಲು ಯತ್ನಿಸಿದ್ದಾರೆ.
ಇಷ್ಟೆಲ್ಲ ಆದ ಮೇಲೆ ಸ್ಟೋರಿಯಲ್ಲೊಂದು ಟ್ವಿಸ್ಟ್ ಸಿಕ್ಕಿ, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರು ತಾವೇ ಬೇರೆ ವಿಮಾನದಲ್ಲಿ ಬೆಂಗಳೂರಿಗೆ 'ರೈಟ್' ಹೇಳಿದ್ದಾರೆ. ಆ ಮೇಲೆ ವಿಶೇಷ ವಿಮಾನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಶೋಭಾ ಕರಂದ್ಲಾಜೆ ಹುಬ್ಬಳಿಗೆ ತೆರಳಿದ್ದಾರೆ.
ಅಲ್ಲಿಗೆ ಶೋಭಾ ಕರಂದ್ಲಾಜೆ ಸಿಟ್ಟು ಪುರಾಣದ ಯಡಿಯೂರಪ್ಪ ಮುಜುಗರ ಕಾಂಡವು ಸುಖಾಂತ್ಯ ಕಂಡಿದೆ.