ಸಿಎಂ ಇಬ್ರಾಹಿಂ ಸಾಹೇಬರ ರಾಜಕೀಯ ನಡೆ ನಿಗೂಢ!
ಬೆಳಗಾವಿ, ಡಿಸೆಂಬರ್ 08 : ಬೆಳಗಾವಿ ಉತ್ತರ ಮತ್ತು ದಕ್ಷಿಣ ವಿಧಾನಸಭೆ ಕ್ಷೇತ್ರಗಳು ವಾರಾಸದಾರರಿಲ್ಲದ ಕ್ಷೇತ್ರಗಳೆಂದು ಬೆಂಗಳೂರಿನ ರಾಜಕಾರಣಿಗಳು ತಿಳಿದುಕೊಂಡಿದ್ದಾರೆ ಎಂದೆನಿಸುತ್ತಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ಸಿನ ಎಂ.ಡಿ.ಲಕ್ಷ್ಮೀ ನಾರಾಯಣ ಸ್ಪರ್ದಿಸಲು ತಯಾರಿ ನಡೆಸಿದರೆ ಬೆಳಗಾವಿ ಉತ್ತರದ ಮೇಲೆ ವಾಕ್ ಪಟು ವಿಕಟ ರಾಜಕಾರಣಿ ಸಿ.ಎಂ.ಇಬ್ರಾಹಿಂ ಕಣ್ಣಿಟ್ಟಿದ್ದಾರೆ.
ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಅವರು ಈಗಾಲೇ ಬೆಳಗಾವಿಗೆ ಹತ್ತು ಹಲವು ಬಾರಿ ಬೆಳಗಾವಿಗೆ ಭೇಟಿ ನೀಡಿ ಬೆಳಗಾವಿ ಉತ್ತರದ ಸ್ಥಿತಿ ಗತಿ ಏನು?, ಇಲ್ಲಿಂದ ಸ್ಪರ್ದೆ ಮಾಡಿದರೆ ಜನ ಬೆಂಬಲ ಮಾಡ್ತಾರೆಯೇ ಎನ್ನುವದನ್ನು ಇಬ್ರಾಹಿಂ ರಹಸ್ಯವಾಗಿ ಅಧ್ಯಯನ ಮಾಡಿದ್ದಾರೆ.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆದ ಸಂಧರ್ಭದಲ್ಲಿ ಸಿ.ಎಂ.ಇಬ್ರಾಹಿಂ ಬೆಳಗಾವಿ ನಗರದಲ್ಲಿ ಓಡಾಡಿಕೊಂಡಿದ್ದರು ತಮ್ಮ ಆಪ್ತ ಬೆಂಬಲಿಗರ ಜೊತೆ ಸುತ್ತಾಡಿ ಬೆಳಗಾವಿ ಉತ್ತರ ಮತಕ್ಷೇತ್ರದ ಹಕೀಕತ್ತು ತಿಳಿದುಕೊಂಡು ಅಧಿವೇಶನ ಮುಗಿದ ಬಳಿಕ ಮತ್ತೆ ಎರಡು ಬಾರಿ ಬೆಳಗಾವಿಗೆ ಭೇಟಿ ನೀಡಿ ಗಾಂಧೀ ನಗರದಲ್ಲಿ ಮಾಜಿ ನಗರ ಸೇವಕರ ಮನೆಯಲ್ಲಿ ಬಿರಿಯಾನಿ ತಿಂದು ಅಲ್ಲಿ ಕೂಡಿದ್ದ ಮುಸ್ಲಿಂ ಮುಖಂಡರು ಹಾಗು ಕೆಲವು ಮಾಜಿ ನಗರ ಸೇವಕರು ಹೇಳಿದ ಮಾತುಗಳನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡಿರುವ ಸಿಎಂ ಇಬ್ರಾಹಿಂ ತಾವು ಬೆಳಗಾವಿಯಿಂದಲೇ ವಿಧಾನಸಭೆ ಪ್ರವೇಶಿಸುವ ಬಗ್ಗೆ ನಿರ್ಧಾರ ತಳೆದಿದ್ದಾರೆ ಎಂದು ಅವರ ಆಪ್ತ ಬೆಂಬಲಿಗರು ಹೇಳಿಕೊಂಡಿದ್ದಾರೆ.

ಬೆಳಗಾವಿ ಮುಸ್ಲಿಂರ ಬೆಂಬಲದ ಭರವಸೆ
ಬೆಳಗಾವಿಯಲ್ಲಿ ಸಿ ಎಂ ಇಬ್ರಾಹಿಂ ಅವರಿಗೆ ಭೋಜನ ಕೂಟ ಏರ್ಪಡಿಸಿ ಅವರಿಗೆ ಗೌರವ ಆತಿಥ್ಯ ನೀಡಿದವರು ಶಾಸಕ ಫಿರೋಜ್ ಸೇಠ ಅವರ ರಾಜಕೀಯ ವಿರೋಧಿಗಳು ಎನ್ನುವುದು ಮಹತ್ವದ ವಿಷಯ. ಅವರೆಲ್ಲರೂ ಸಿಎಂ ಇಬ್ರಾಹಿಂ ಅವರಿಗೆ ಭೋಜನ ಕೂಟ ಏರ್ಪಡಿಸಿ ಬೆಳಗಾವಿಯಲ್ಲಿ ಮುಗ್ದ ಮುಸ್ಲೀಂ ಹುಡುಗರ ಮೇಲೆ ಕೇಸ್ ಹಾಕಿ ಜೈಲಿಗೆ ತಳ್ಳಲಾಗುತ್ತಿದೆ ಈ ಬಗ್ಗೆ ಮುಸ್ಲೀಂ ರ ಪರವಾಗಿ ಧನಿ ಎತ್ತುವರರು ಯಾರೂ ಇಲ್ಲ ದಯವಿಟ್ಟು ನಮಗೆ ನ್ಯಾಯ ಕೊಡಿಸಿ ಎಂದು ಬೆಳಗಾವಿಯ ಮುಸ್ಲಿಂ ಮುಖಂಡರು ಇಬ್ರಾಹಿಂ ಎದುರು ತಮ್ಮ ಅಳಲು ತೋಡಿಕೊಂಡು ಬೆಳಗಾವಿ ಉತ್ತರದಿಂದ ನಿವೇ ಸ್ಪರ್ಧಿಸಿ ನಾವೆಲ್ಲ ಬೆಂಬಲ ನೀಡುತ್ತೇವೆ ಎಂದಿದ್ದಾರೆ.

ಕಾಂಗ್ರೆಸ್ ಜೊತೆ ಸಂಬಂಧ ಕಡಿಕೊಳ್ಳುತ್ತಿರುವ ಸತೀಶ್
ಸತೀಶ ಜಾರಕಿಹೊಳಿ ಅವರು ಇತ್ತೀಚಿಗೆ ಬೆಳಗಾವಿಯ ಸ್ಮಶಾನದಲ್ಲಿ ನಡೆದ ಮೌಡ್ಯ ವಿರೋಧಿ ಸಂಕಲ್ಪ ದಿನಾಚರಣೆ ಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ನಡುವಳಿಕೆ ಕುರಿತು ನೊಂದು ಮಾತಾಡಿದ್ದಾರೆ ತಮಗೆ ಟಿಕೆಟ್ ಕೊಡಲಿ ಅಥವಾ ಬಿಡಲಿ, ಏಐಸಿಸಿ ಸಕ್ರೇಟರಿ ಸ್ಥಾನ ಕಿತ್ತುಕೊಂಡರೂ ನಾನು ಸ್ಮಶಾನದಲ್ಲಿ ನಡೆಸುತ್ತಿರುವ ಮೌಡ್ಯ ವಿರೋಧಿ ಸಂಕಲ್ಪ ದಿನ ಆಚರಿಸುವ ಕಾರ್ಯಕ್ರಮ ನಿಲ್ಲಿಸುವುದಿಲ್ಲ ಎಂದು ಹೇಳುವ ಮೂಲಕ ಸತೀಶ ಜಾರಕಿಹೊಳಿ ಕಾಂಗ್ರೆಸ್ ಜೊತೆಗಿನ ತಮ್ಮ ಸಂಬಂಧ ಸರಿಯಾಗಿಲ್ಲ ಎನ್ನುವ ಸಂಕೇತ ನೀಡಿದ್ದಾರೆ. ಹಾಗಾಗಿ ಅವರ ಸ್ಥಾನಕ್ಕೆ ಇಬ್ರಾಹಿಂ ಅವರು ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಸತೀಶ್ ಬೆಂಬಲ ಇಬ್ರಾಹಿಂಗೆ
ಸಿ ಎಂ ಇಬ್ರಾಹಿಂ ಮತ್ತು ಸತೀಶ ಜಾರಕಿಜೊಳಿ ಅವರು ಆಪ್ತರು ಇವರಿಬ್ಬರ ನಡುವಿನ ದೋಸ್ತಿ ಹಳೆಯದು ಹೀಗಾಗಿ ಸಿಎಂ ಇಬ್ರಾಹಿಂ ಬೆಳಗಾವಿ ಉತ್ತರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರೆ ಅದಕ್ಕೆ ಸತೀಶ್ ಜಾರಕಿಹೊಳಿ ಬೆಂಬಲ ಕೊಡಬಹುದಾ ಎನ್ನುವ ಅನುಮಾನವೂ ಕ್ಷೇತ್ರದಲ್ಲಿ ಹರಿದಾಡುತ್ತಿದೆ.

ಸತೀಶ್ ಕೂಡ ಜೆಡಿಎಸ್ಗೆ
ಸಿಎಂ ಇಬ್ರಾಹಿಂ ಅವರು ರಾಜ್ಯ ಯೋಜನಾ ಆಯೋಗದ ಅಧ್ಯಕ್ಷರಾಗಿದ್ದರೆ ತಾವು ಹಿರಿಯರಾದರೂ ತಮಗೆ ಆ ಸಿದ್ರಾಮಣ್ಣ ಮಂತ್ರಿ ಮಾಡಲಿಲ್ಲ ಅಂತಾ ಸಿಎಂ ಇಬ್ರಾಹಿಂ ಅಸಮಾಧಾನ ಹೊರಹಾಕಿದ್ದರು. ಇತ್ತ ಸತೀಶ ಜಾರಕಿಹೊಳಿ ಅವರು ಕಾಂಗ್ರೆಸ್ ಜೊತೆಗಿನ ತಮ್ಮ ಸಮಂಧ ಸರಿಯಾಗಿಲ್ಲ ಎಂದು ಸೂಕ್ಷ್ಮವಾಗಿ ಹೇಳಿಕೊಂಡಿದ್ದಾರೆ ಇದನ್ನೆಲ್ಲಾ ಗಮನಿಸಿದರೆ ಸತೀಶ ಜಾರಕಿಹೊಳಿ ಮತ್ತು ಸಿಎಂ ಇಬ್ರಾಹಿಂ ಇಬ್ಬರೂ ಸೇರಿಕೊಂಡು ಜೆಡಿಎಸ್ ಪಕ್ಷಕ್ಕೆ ಜಂಪ್ ಮಾಡಬಹುದಾ ಎನ್ನುವ ಸುದ್ಧಿ ಈಗ ಬೆಳಗಾವಿ ಜಿಲ್ಲೆಯಲ್ಲಿ ಹರಿದಾಡುತ್ತಿದೆ.

ಬೆಳಗಾವಿಗೆ ರಾಜಕಾರಣಿಗಳ ವಲಸೆ
ಚುನಾವಣೆ ಸಮೀಪ ಬಂದಂತೆ ಬೆಳಗಾವಿ ಉತ್ತರ ಮತ್ತು ದಕ್ಷಿಣಕ್ಕೆ ರಾಜಕೀಯ ವಲಸಿಗರ ಸಂಖ್ಯೆ ಹೆಚ್ಚಾಗುತ್ತದೆ ದಕ್ಷಿಣಕ್ಕೆ ಎಂ.ಡಿ.ಲಕ್ಷ್ಮೀ ನಾರಾಯಣ ವಲಸೆ ಬರುತ್ತಿರುವುದಕ್ಕೆ ಸತೀಶ ಜಾರಕಿಹೊಳಿ ಮತ್ತು ದಕ್ಷಿಣ ಕ್ಷೇತ್ರದ ನೇಕಾರ ಸಮಾಜದ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.











Click it and Unblock the Notifications