ಕರ್ನಾಟಕದ ಪ್ರಮುಖ ನದಿಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ-ಯಾವೆಲ್ಲಾ ಜಿಲ್ಲೆಗಳಿಗೆ ಆಪತ್ತು.?
ಬೆಳಗಾವಿ, ಜುಲೈ, 22: ಪಶ್ಚಿಮ ಘಟ್ಟ ತೀರವಾದ ಮಹಾರಾಷ್ಟ್ರ ಗಡಿಯುದ್ದಕ್ಕೂ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಎಡೆಬಿಡದೇ, ಧಾರಾಕಾರ ಮಳೆಯಾಗುತ್ತಿದ್ದು, ನದಿ, ಹಳ್ಳ-ಕೊಳ್ಳ, ಜಲಾಶಯಗಳು ತುಂಬಿ ಹರಿಯುತ್ತಿವೆ. ಪರಿಣಾಮ ಬೆಳಗಾವಿಯಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ 1,00,000 ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಘಟಪ್ರಭಾ ನದಿಗೆ ಜಲಾಶಯದಿಂದ 30,000 ಕ್ಯೂಸೆಕ್ ನೀರು ಬಿಡಲಾಗಿದೆ. ಮಲಪ್ರಭಾ ನದಿಗೆ 15,000 ಕ್ಯೂಸೆಕ್ ನೀರು ಬಿಡಲಾಗಿದೆ.

ಇದರಿಂದಾಗಿ ಬೆಳಗಾವಿ ಸಹಿತ ಬಾಗಲಕೋಟೆ, ಬಿಜಾಪುರ, ಧಾರವಾಡ ಜಿಲ್ಲೆಗಳ ನದಿ ತೀರದ ಗ್ರಾಮಗಳು ಮುಳುಗಡೆಯಾಗುವ ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ 17 ಸೇತುವೆಗಳು ಸಂಪೂರ್ಣ ಮುಳುಗಿದ್ದು, 34 ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ.
ಜಿಲ್ಲೆಯ ಚಿಕ್ಕೋಡಿ, ಖಾನಾಪುರ, ಮೂಡಲಗಿ, ಗೋಕಾಕ್, ನಿಪ್ಪಾಣಿ ತಾಲೂಕಿನ ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿವೆ. ಇದರಿಂದಾಗಿ ಗ್ರಾಮಗಳಿಗೆ ನೀರು ನುಗ್ಗುತ್ತಿದ್ದು, ಪ್ರವಾಹ ಭೀತಿ ಶುರುವಾಗಿದೆ. ಜಿಲ್ಲೆಯಲ್ಲಿ ಇನ್ನೂ ಎರಡು ದಿನ ಭಾರಿ ಮಳೆಯಾಗುವ ಮುನ್ಸೂಚನೆ ಇರುವ ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅಧಿಕಾರಿಗಳು ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಎಸ್ಪಿ ಡಾ.ಭೀಮಾಶಂಕರ ಗುಳೇದ ಜಿಲ್ಲೆಯಲ್ಲಿ ಮಿಂಚಿನ ಸಂಚಾರ ಕೈಗೊಂಡಿದ್ದು, ಮಳೆ ಬಾಧಿತ ಖಾನಾಪುರ, ಚಿಕ್ಕೋಡಿ, ಅಥಣಿ, ರಾಯಭಾಗ ತಾಲೂಕಿನ ನದಿ ತಟಗಳಿಗೆ ಭೇಟಿ ನೀಡಿದರು.
ನೀರಿನಿಂದಾವೃತ ಕಾಡುವಾಸಿಗಳ ಅನುಕೂಲಕ್ಕೆ ತತಕ್ಷಣ ಅಗತ್ಯ ಸೇವೆಗಳಾದ ಮೆಡಿಕಲ್ ಕಿಟ್, ಹಾಲಿನ ಪುಡಿ, ಕ್ಯಾಂಡಲ್, ಮ್ಯಾಚಬಾಕ್ಸ್ ಸಹಿತ ಇನ್ನಿತರ ಅಗತ್ಯ ವಸ್ತಗಳನ್ನು ಒದಗಸಲು ಜಿಲ್ಲಾಡಳಿತ ಕ್ರಮ ವಹಿಸಿದೆ. ಇನ್ನು ಮಳೆ ಪ್ರಮಾಣ ಮುಂದುವರೆದಿದ್ದು, ಇಲ್ಲಿನ ಜನಜೀವನ, ಉದ್ಯೋಗ, ವ್ಯಾಪಾರ ತೀವ್ರ ಕ್ಷೀಣಿಸಿದೆ ಎಂದು ತಿಳಿದುಬಂದಿದೆ.
ಈ ಡ್ಯಾಂಗಳು ಬಹುತೇಕ ಭರ್ತಿ: ಬಹುತೇಕ ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು, ಪರಿಣಾಮ ನದಿ, ಕೆರೆ-ಕಟ್ಟೆಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಹಾಗೆಯೇ ಹಲವು ಜಲಾಶಯಗಳು ಕೂಡ ಭರ್ತಿಯಾಗುವ ಹಂತ ತಲುಪಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಹಾಗಾದರೆ ಇಂದು (ಜುಲೈ 22) ಕಬಿನಿ & ಕೆಆರ್ಎಸ್ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.
ರಾಜ್ಯದ ರಾಜಧಾನಿ ಬೆಂಗಳೂರು, ಸಕ್ಕರೆ ನಾಡು ಮಂಡ್ಯ, ಸಾಂಸ್ಕೃತಿಕ ನಗರಿ ಮಂಡ್ಯ ಜಿಲ್ಲೆಗಳ ಜೀವನಾಡಿಯಾದ ಕೆಆರ್ಎಸ್ ಜಲಾಶಯ ಬಹುತೇಕ ಭರ್ತಿಯಾಗಿದೆ. ಗರಿಷ್ಠ 124.80 ಅಡಿ ನೀರಿನ ಸಂಗ್ರಹ ಸಾಮರ್ಥ್ಯವುಳ್ಳ ಕೃಷ್ಣರಾಜ ಸಾಗರ (ಕೆಆರ್ಎಸ್) ಜಲಾಶಯದ ಇಂದಿನ ನೀರಿನ ಮಟ್ಟ 123.20 ಅಡಿ ಆಗಿದೆ. ಅಂದರೆ ಜಲಾಶಯ ಭರ್ತಿಯಾಗಲು ಇನ್ನೂ ಕೇವಲ ಒಂದು ಅಡಿಯಷ್ಟೇ ಬಾಕಿಯಿದ್ದು, ಯಾವ ಕ್ಷಣದಲ್ಲಾದರೂ ತುಂಬಬಹುದು ಎನ್ನುವ ಮಾಹಿತಿ ಇದೆ.
ಇನ್ನು ಇಂದು ಜಲಾಶಯದ ಒಳಹರಿವು 60,016 ಕ್ಯೂಸೆಕ್ ಇದ್ದರೆ, ಹೊರಹರಿವಿನ ಪ್ರಮಾಣ 52,020 ಕ್ಯೂಸೆಕ್ ಆಗಿದೆ. ಯಾವುದೇ ಕ್ಷಣದಲ್ಲಾದರೂ ತುಂಬುವ ಹಂತದಲ್ಲಿರುವ ಹಿನ್ನೆಲೆ ನದಿ ತೀರದ ಜನರನ್ನು ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.
ಹಾಗೆಯೇ 2284 ಅಡಿ ನೀರಿನ ಸಂಗ್ರಹ ಸಾಮರ್ಥ್ಯವುಳ್ಳ ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ 2282.40 ಅಡಿಗೆ ಬಂದು ತಲುಪಿದೆ. ತುಂಬಲು ಇನ್ನೂ ಕೆಲವೇ ಅಡಿಗಳಷ್ಟೇ ಬಾಕಿಯಿದ್ದು, ಮುಂಜಾಗ್ರತಾ ಕ್ರಮವಾಗಿ ಇಲ್ಲಿನ ನದಿ ತೀರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ. ಇನ್ನು ಇಂದು ಜಲಾಶಯದ ಒಳಹರಿವಿನ ಪ್ರಮಾಣ 25,885 ಕ್ಯೂಸೆಕ್ ಇದ್ದರೆ, ಹೊರಹರಿವಿನ ಪ್ರಮಾಣ 17491 ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications