ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬೆನ್ನಿಗೆ ನಿಂತ ವೀರಶೈವ ಮಹಾಸಭಾ!
ಬೆಂಗಳೂರು, ಸೆಪ್ಟೆಂಬರ್ 1: ಅಖಿಲ ಭಾರತ ವೀರಶೈವ ಮಹಾಸಭಾವು ಬೆಳಗಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆನ್ನಿಗೆ ನಿಂತಿದೆ.
ಲಕ್ಷ್ಮೀ ಬಗ್ಗೆ ಸಚಿವ ರಮೇಶ್ ಜಾರಕಿಹೊಳಿ ಅವರು ಮಾತನಾಡಿರುವುದನ್ನು ನೋಡಿದರೆ ಸಚಿವ ಸ್ಥಾನದಲ್ಲಿ ಮುಂದುವರೆಯುವ ಯಾವ ನೈತಿಕತೆಯೂ ಇದ್ದಂತೆ ಕಾಣುತ್ತಿಲ್ಲ ಎಂದು ಹೇಳಿದೆ.
ಶಾಸಕಿ ಆಗಿದ್ದೀನಿ ಅನ್ನೋ ಕಾರಣಕ್ಕೆ ಮೆರೆಯಬಾರದು. ನಾನು ಕೂಡ ಮೊದಲ ಬಾರಿಗೆ 50 ಸಾವಿರ ಮತಗಳ ಅಂತರದಿಂದ ಗೆದ್ದು, ಮೊನ್ನೆ ನಡೆದ ಚುನಾವಣೆಯಲ್ಲಿ 14 ಸಾವಿರ ಅಂತರಕ್ಕೆ ತಲುಪಿದ್ದೇನೆ. ಆದ್ದರಿಂದ ಮೆರೆಯುವುದು ಒಳ್ಳೆಯದಲ್ಲ ಎಂದು ರಮೇಶ್ ಜಾರಕಿಹೊಳ ಹೇಳಿದ್ದರು.

ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆ ಮುಂದೂಡಿದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಬೆಳಗಾವಿ ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ನನ್ನ ಹಸ್ತಕ್ಷೇಪವಿಲ್ಲ. ಅಧಿಕಾರಾರೂಢ ಪಕ್ಷದ ಶಾಸಕಿಯಾಗಿ ಧರಣಿ ಮಾಡುವುದು ಸರಿಯಲ್ಲ ಎಂದಿದ್ದರು.ಅಷ್ಟೇ ಅಲ್ಲದೆ ಲಕ್ಷ್ಮೀ ಸತೀಶ್ ಜಾರಕಿಹೊಳಿ ಕಾಲುಕಸಕ್ಕೂ ಸಮ ಅಲ್ಲ ಎಂದು ಅವರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆದಿದ್ದರು.
ಇವರು ಒಬ್ಬ ಜನಪ್ರತಿನಿಧಿಯ ಬಗ್ಗೆ ಮಾತನಾಡುವುದು ಆ ಕ್ಷೇತ್ರದ ಜನರಿಗೆ ಮಾಡಿದ ಅವಮಾನ, ಹೆಣ್ಣುಮಕ್ಕಳ ಏಳೆಗೆಯನ್ನು ಸಹಿಸಲಾರದೆ ಈ ರೀತಿ ನಡೆದುಕೊಂಡಿದ್ದಾರೆ ಇಂತಹ ನಾಯಕರು ಸಂಪುಟದಲ್ಲಿ ಇರಬೇಕೆ ಎಂದು ಸಂಘದ ಸದಸ್ಯರು ಪ್ರಶ್ನೆ ಮಾಡಿದ್ದಾರೆ.

ಇಂಥವರಿಂದ ಮಹಿಳಾ ಸಮುದಾಯ ಯಾವ ನಿರೀಕ್ಷೆಯನ್ನು ಇಟ್ಟುಕೊಳ್ಳಲು ಸಾಧ್ಯ, ಇವರ ನಡವಳಿಕೆ ಮಹಿಳಾ ಸಮುದಾಯಕ್ಕೆ ಮಾಡಿದ ಅವಮಾನ ಹಾಗಾಗಿ ರಮೇಶ್ ಜಾರಕಿಹೊಳಿಯವರು ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ವೀರಶೈವ ಮಹಾಸಭಾ ಒತ್ತಾಯಿಸಿದೆ.












Click it and Unblock the Notifications