ಬೆಳಗಾವಿಯಲ್ಲಿ ಆಟೋ ಓಡಿಸಿದ ಕೆಪಿಜೆಪಿ ಸಂಸ್ಥಾಪಕ ಉಪೇಂದ್ರ!
ಬೆಳಗಾವಿ, ಡಿಸೆಂಬರ್. 11 : ಕುಂದಾನಗರಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಪ್ರಜಾಕೀಯ ಪಕ್ಷದ ಮಂತ್ರ ಪಠಿಸಿದರು. ಖಾಕಿ ಶರ್ಟ್ ತೊಟ್ಟು, ಆಟೋ ಓಡಿಸುವ ಮೂಲಕ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷಕ್ಕೆ ಕಾರ್ಮಿಕರೆ ಜೀವಾಳವೆಂಬ ಸಂದೇಶವನ್ನು ರವಾನಿಸಿದರು.
ಸ್ಟಾರ್ ನಟರು ಅಂದರೆ ಹಾಗೆ. ಅವರಿಗೆ ನೂರಾರು ಅಭಿಮಾನಿಗಳು ಇರುತ್ತಾರೆ. ತಮ್ಮ ನೆಚ್ಚಿನ ನಟ ಬಂದರೆ ಸಾಕು ಅವರನ್ನು ನೋಡುವುದಕ್ಕೆ, ಅವರ ಜೊತೆ ಮಾತನಾಡಲು ಅಭಿಮಾನಿಗಳು ಬೆನ್ನಿಗೆ ಬೀಳುತ್ತಾರೆ.

ಸೋಮವಾರ ಬೆಳಗಾವಿಯಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಯಿತು. ತಮ್ಮ ರಾಜಕೀಯ ಪಕ್ಷ ಪ್ರಜಾಕೀಯದ ಪ್ರಚಾರಕ್ಕಾಗಿ ರಿಯಲ್ ಸ್ಟಾರ್ ಉಪೇಂದ್ರ ಬೆಳಗಾವಿಗೆ ಆಗಮಿಸಿದ್ದರು.
ಮೊದಲು ನಗರದ ಚೆನ್ನಮ್ಮ ವೃತ್ತದಲ್ಲಿ ವೀರರಾಣಿ ಚೆನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಉಪೇಂದ್ರ ಅಲ್ಲಿಂದ ತಮ್ಮ ಪಕ್ಷದ ಚಿನ್ಹೆ ಆಟೋದಲ್ಲಿ ತಾವೇ ಖುದ್ದು ಆಟೋ ಓಡಿಸಿಕೊಂಡು ಖಾಸಗಿ ಹೊಟೇಲ್ಗೆ ಆಗಮಿಸಿದರು.

ಖಾಸಗಿ ಹೊಟೇಲ್ನಲ್ಲಿ ಉಪೇಂದ್ರ ಅವರು ಪತ್ರಿಕಾಗೋಷ್ಠಿ ನಡೆಸಿದರು. ಅತ್ತ ಹೋಟೆಲ್ ಹೊರಗೆ ತಮ್ಮ ನೆಚ್ಚಿನ ನಟನನ್ನು ನೋಡಲು ಉಪ್ಪಿ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಪತ್ರಿಕಾಗೋಷ್ಠಿ ಮುಗಿಸಿ ಉಪೇಂದ್ರ ಅವರು ಹೊರಡಬೇಕು ಎನ್ನುವಷ್ಟರಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡುವ ಭರಾಟೆಯಲ್ಲಿ ಹೊಟೇಲ್ ಒಳಗೆ ನುಗ್ಗಿದರು.

ಈ ವೇಳೆ ನೂಕುನುಗ್ಗಲಿಂದಾಗಿ ಹೊಟೇಲ್ ಬಾಗಿಲಿನ ಗಾಜು ಪುಡಿ ಪುಡಿ ಆಯಿತು. ಹೊಟೇಲ್ನಿಂದ ಹೊರ ಬಂದ ಉಪ್ಪಿ ಅಭಿಮಾನಿಗಳತ್ತ ಕೈ ಮಾಡುತ್ತ ನೇರವಾಗಿ ಕಾರು ಹತ್ತಿ ಹೊರಟು ಹೋದರು.
ಉಪೇಂದ್ರ ಆಗಮನದಿಂದ ಅವರ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿತ್ತು. 2018ವಿಧಾನಸಭೆ ಚುನಾವಣೆಯಲ್ಲಿ ಉಪೇಂದ್ರ ದುಡ್ಡಿಲ್ಲದೇ ಪ್ರಜಾಕೀಯ ಮಾಡಲು ಹೊರಟಿದ್ದಾರೆ. ಉಪ್ಪಿ ಪ್ರಜಾಕೀಯಕ್ಕೆ ಪ್ರಜ್ಞಾವಂತರು ಕೈ ಜೋಡಿಸುವರೇ ಕಾದು ನೋಡಬೇಕು.












Click it and Unblock the Notifications