ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ 'ಮಳ್ಳ' ಅಂದಿದ್ದು ಯಾರಿಗೆ..?
Recommended Video
ಬೆಳಗಾವಿ, ನವೆಂಬರ್ 24: ಉಪ ಚುನಾವಣೆಯ ಮತದಾನ ದಿನಾಂಕ ಸಮೀಪಿಸುತ್ತಿದ್ದಂತೆಯೇ ರಾಜಕೀಯ ನಾಯಕರ ಮಾತಿನ ಭರಾಟೆ ಜೋರಾಗಿದೆ. ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ಮತ್ತಷ್ಟು ಕಾವು ಪಡೆದುಕೊಂಡಿದೆ. ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಉಪ ಚುನಾವಣಾ ಪ್ರಚಾರದಲ್ಲಿ ತಮ್ಮ ಮಾತಿನ ಮೂಲಕ ಮತ್ತೊಮ್ಮೆ ಸುದ್ಧಿಯಲ್ಲಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ವಿಧಾನಸಭಾ ಕ್ಷೇತ್ರದ ಕಕಮರಿ ಎಂಬಲ್ಲಿ ಕಾಂಗ್ರೆಸ್ ಪರ ಪ್ರಚಾರ ಭಾಷಣದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡುತ್ತಾ, "ನಾನು ಬೆಳಗಾವಿ ರಾಜಕಾರಣ ಬದಲು ಮಾಡಬಲ್ಲೆ, ಕೊಟ್ಟ ಕುದುರೆ ಏರದವನು, ವೀರನೂ ಅಲ್ಲ, ಶೂರನೂ ಅಲ್ಲ" ಎಂದು ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಹಾಲಕ್ಷ್ಮಿಗೆ ಡೈಮಂಡ್ ಮಿಶ್ರಿತ ಚಿನ್ನದ ಹಾರ ಸಮರ್ಪಿಸಿದ ಲಕ್ಷ್ಮಿ!
ಅಷ್ಟೇ ಅಲ್ಲದೇ "ಮಹೇಶ್ ಕುಮಠಳ್ಳಿ ಮಳ್ಳ ಮಳ್ಳ ಮಂಚಕ್ಕೆ ಎಷ್ಟು ಕಾಲು ಎಂದರೆ, ಮೂರು ಮತ್ತೊಂದು ಅನ್ನುವಂತಹ 'ಮಳ್ಳ' ಎಂದು ಜರಿದಿದ್ದಾರೆ. 2013 ಮತ್ತು 2018 ರ ಚುನಾವಣೆಯಲ್ಲಿ ಮಹೇಶ ಕುಮಠಳ್ಳಿಗೆ ಟಿಕೆಟ್ ಕೊಡಿಸಲು ನಾನು ಕೂಡಾ ಸಹಾಯ ಮಾಡಿದ್ದೆ. ಅವರು ಒಳ್ಳೆಯವರು, ಸುಸಂಸ್ಕೃತರು ಎಮದು ತಿಳಿದಿದ್ದೆ, ಆದರೆ ಹೆತ್ತ ತಾಯಿಗೆ ದ್ರೋಹ ಮಾಡಿ ಹೋಗಿದ್ದಾರೆ" ಎಂದು ಟೀಕಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಜಿ.ಬಿ.ಮಂಗ್ಸೂಳಿ ಪರವಾಗಿ ಮಾತನಾಡುತ್ತಾ, "ಮಹೇಶ್ ಕುಮಟಳ್ಳಿ ಸೋಗು ಹಾಕೋ ನಾಯಕ, ಅವರದು ಅತೀ ವಿನಯಂ ಚೋರ ಲಕ್ಷಣಂ" ಎಂದು ನೇರವಾಗಿ ವಾಕ್ ಪ್ರಹಾರ ನಡೆಸಿದ್ದಾರೆ. ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕು, ಅಂತವರು ರಾಜಕಾರಣದಲ್ಲಿ ಇರಲು ಅರ್ಹರಲ್ಲ ಎಂದು ಗುಡುಗಿದರು.
ಮುಖ್ಯಮಂತ್ರಿ ಮನೆ ಬಾಗಿಲು ಹುಡುಕಿಕೊಂಡು ಬಂದ 'ಲಕ್ಷ್ಮಿ'
ಮೈತ್ರಿ ಸರ್ಕಾರದಲ್ಲಿ ಅನುದಾನ ಕೊಡಲಿಲ್ಲ ಎಂದು ಈಗ ಹೇಳುತ್ತಿದ್ದಾರೆ, ಆಗ ಕೇಳಿ ಪಡೆಯಲು ಬಾಯಲ್ಲಿ ಕಡುಬು ಇಟ್ಕೊಂಡಿದ್ದರಾ? ಎಂದು ಪ್ರಶ್ನಿಸಿದರು. ನಾನು ಮಹಿಳೆಯಾದರೂ ಕೂಡಾ ಸಚಿವರ ಕೈಕಾಲು ಹಿಡಿದು ಅನುದಾನ ತೆಗೆದುಕೊಂಡು ಬಂದಿದ್ದೇನೆ, ಇವರು ಗಂಡಸರಾದರೂ ಅನುದಾನ ಕೇಳಿ ಪಡೆಯಲಾಗಲಿಲ್ಲ ಎಂದು ಮಹೇಶ್ ಕುಮಟಳ್ಳಿ ವಿರುದ್ಧ ಕಿಡಿಕಾರಿದ್ದಾರೆ.