ಜಗದೀಶ್ ಶೆಟ್ಟರ್ಗೆ ಬೆಳಗಾವಿ ಸ್ಪರ್ಧೆ ಮತ್ತಷ್ಟು ಜಟೀಲ: ಗೋಬ್ಯಾಕ್ ಅಭಿಯಾನ ಯಶಸ್ವಿ ಆಯ್ತಾ?
ಹುಬ್ಬಳ್ಳಿ, ಮಾರ್ಚ್ 19: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪರ್ಧೆಗೆ ವ್ಯಾಪಕ ವಿರೋಧ ಕೇಳಿ ಬರುತ್ತಿದೆ. ಈ ಮಧ್ಯೆ ಗೋಬ್ಯಾಕ್ ಎಂಬ ಅಭಿಯಾನ ನಡೆಸಿರುವ ಬೆಳಗಾವಿ ಸ್ಥಳೀಯ ಕೆಲ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ರಾಜಧಾನಿಗೆ ಆಗಮಿಸಿದ್ದಾರೆ. ಇದರಿಂದ ಬೆಳಗಾವಿ ಸ್ಪರ್ಧೆ ಜಗದೀಶ್ ಶೆಟ್ಟರ್ ಅವರಿಗೆ ಮತ್ತಷ್ಟು ಜಟಿಲವಾಗುತ್ತಿದೆ.
ಬೆಳಗಾವಿಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪರ್ಧೆ ಮಾಡಲಿದ್ದಾರೆ ಎಂಬುದು ಬಿಜೆಪಿಯೊಳಗೆ ತಿಳಿಯುತ್ತಿದ್ದಂತೆ ಬೆಳಗಾವಿ ನಾಯಕರು ಇದಕ್ಕೆ ಆಕ್ಷೇಪ ಎತ್ತಿದ್ದಾರೆ. ಕ್ಷೇತ್ರದ ಸ್ಥಳೀಯ ಆಕಾಂಕ್ಷಿಗಳಿಗೆ ಟಿಕೆಟ್ ನೀಡುವಂತೆ ಒತ್ತಡ ಹೇರಲು ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಮಧ್ಯೆ 'ಶೆಟ್ಟರ್ ಗೋ ಬ್ಯಾಕ್ ಚಳುವಳಿ' ಯಶಸ್ವಿ ಆಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಬೆಳಗಾವಿ ಲೋಕಸಭಾ ಚುನಾವಣೆಯ ಭಾರತೀಯ ಜನತಾ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ 'ಗೋ ಬ್ಯಾಕ್ ಅಭಿಯಾನ' ನಡೆಸಲಾಗಿತ್ತು. ಸ್ಥಳೀಯ ನಾಯಕರು ಸಭೆ ನಡೆಸಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ಬೆಳಗಾವಿ ಟಿಕೆಟ್ ಕುರಿತು ಮನವರಿಕೆ ಮಾಡಿಕೊಡಲು ನಿರ್ಧರಿಸಿದ್ದಾರೆ.
ಇಂದು ರಾಜ್ಯ ನಾಯಕರ ಭೇಟಿ ಸಾಧ್ಯತೆ
ರಾಜ್ಯ ಬಿಜೆಪಿ ನಾಯಕರನ್ನು ಭೇಟಿಯಾಗಲು ಬೆಳಗಾವಿಯ ಬಿಜೆಪಿಯ ಕೆಲವು ನಾಯಕರು ಮಂಗಳವಾರ ಬೆಂಗಳೂರಿಗೆ ಆಗಮಿಸಿದ್ದಾರೆ. ಇಲ್ಲಿ ರಾಜ್ಯ ನಾಯಕರಿಗೆ ಒತ್ತಡ ಹೇರಿ ಶೆಟ್ಟರ್ ಬದಲಾಗಿ ಕ್ಷೇತ್ರದ ಸ್ಥಳೀಯ ಆಕಾಂಕ್ಷಿಗಳಿಗೆ ನೀಡುವಂತೆ ಆಗ್ರಹಿಸಲಿದ್ದಾರೆ.
ಬೆಳಗಾವಿಯಿಂದಲೇ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸ್ಪರ್ಧೆ ಮಾಡುತ್ತಾರೆ ಎಂಬುದು ಗೊತ್ತಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಾಲು ಸಾಲು ಪ್ರಶ್ನೆಗಳನ್ನು ಕೇಳಿಲಾಗಿತ್ತು. ಕೆಲವರು ವ್ಯಂಗ್ಯಭರಿತ ಹಾಡು ಮಾಡಿ ಹರಿಬಿಟ್ಟಿದ್ದರು. ಜಗದೀಶ್ ಶೆಟ್ಟರ್ ಸ್ಪರ್ಧೆಗೆ ಸ್ಥಳೀಯ ಬಿಜೆಪಿಯ ಹಿರಿ-ಕಿರಿಯ ನಾಯಕರೂ ಸಹ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಶೆಟ್ಟರ್ ಅವರಿಗೆ ತಲೆನೋವಾಗಿ ಪರಿಣಮಿಸಿದೆ.
ಕ್ಷೇತ್ರದ ಸ್ಪರ್ಧೆ ಕುರಿತು ನಾಯಕರಿಗೆ ಮನವರಿಕೆ
ಬೆಳಗಾವಿ ಸ್ಪರ್ಧೆ ವಿಚಾರವಾಗಿ ಸ್ಥಳೀಯ ನಾಯಕರು ಈಗಾಗಲೇ ರಾಜ್ಯ ನಾಯಕರಿಂದ ಸಮಯಾವಕಾಶ ಪಡೆದಿದ್ದಾರೆ. ಮಾಜಿ ಸಿಎಂ ಬಿ.ಎಸ್ .ಯಡಿಯೂರಪ್ಪ, ರಾಜ್ಯ ಚುನಾವಣೆ ಉಸ್ತುವಾರಿ ರಾಧಾ ಮೋಹನದಾಸ್ ಅಗರವಾಲ್ , ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಸಂಘಟನಾ ಕಾರ್ಯದರ್ಶಿ ಜೆ.ವಿ. ರಾಜೇಶ ಭೇಟಿ ಮಾಡಲು ಸಜ್ಜಾಗಿದೆ. ಅವರಿಗೆ ಕ್ಷೇತ್ರ, ಟಿಕೆಟ್ ಮತ್ತು ಸ್ಪರ್ಧೆ ಕುರಿತು ಮನವರಿಕೆ ಮಾಡಲಿದ್ದಾರೆ.

ಬೆಳಗಾವಿಯ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಮಾಜಿ ಶಾಸಕ ಅನಿಲ ಬೆನಕೆ, ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ ಸೇರಿ 8ಕ್ಕೂ ಅಧಿಕ ನಾಯಕರಿಂದ ರಾಜ್ಯಮಟ್ಟದ ಬಿಜೆಪಿ ನಾಯಕರ ಭೇಟಿ ಆಗಲಿದ್ದಾರೆ. ಇತ್ತೀಚೆಗೆ ತಾವು ಜಿಲ್ಲೆಯಲ್ಲಿ ನಡೆಸಿದ್ದ ತುರ್ತು ಸಭೆಯ ಅಂಶಗಳನ್ನು ನಾಯಕರ ಗಮನಕ್ಕೆ ತರಲಿದ್ದಾರೆ.
ಸಕಾರಾತ್ಮಕ ಸ್ಪಂದಿಸದಿದ್ದರೆ ದೆಹಲಿ ಭೇಟಿಗೆ ನಿರ್ಧಾರ
ಬೆಳಗಾವಿಯಿಂದ ಜಗದೀಶ್ ಶೆಟ್ಟರ್ ಸ್ಪರ್ಧೆ ವಿಚಾರವಾಗಿ ರಾಜ್ಯ ನಾಯಕರು ಏನು ಹೇಳುತ್ತಾರೆ, ಅವರ ನಿರ್ಧಾರವೇನು ಎಂದು ಆಲಿಸಲಿದ್ದಾರೆ. ಬಳಿಕ ತಮ್ಮ ಮುಂದಿನ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಒಂದು ವೇಳೆ ಇಲ್ಲಿ ಸಕಾರಾತ್ಕವಾಗಿ ಸ್ಪಂದನೆ ವ್ಯಕ್ತವಾಗದಿದ್ದಲ್ಲಿ ಅಲ್ಲಿಂದ ನೇರ ದೆಹಲಿಗೆ ತೆರಳಿ ಅಲ್ಲಿ ಬಿಜೆಪಿ ವರಿಷ್ಠರನ್ನು ಕಂಡು ಬೆಳಗಾವಿ ಟಿಕೆಟ್ ಅನ್ನು ಪಕ್ಷದ ಸ್ಥಳಿಯ ನಾಯಕರಿಗೆ ಕೊಡಬೇಕು. ಜಗದೀಶ್ ಶೆಟ್ಟರ್ ಅವರಿಗೆ ಕೊಡದಂತೆ ಮನವಿ ಮಾಡಲಿದ್ದಾರೆ.
ದೆಹಲಿಗೆ ತೆರಳುವ ಸಂದರ್ಭ ಬಂದರೆ ಅಲ್ಲಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೆ.ಪಿ. ನಡ್ಡಾ ಇಲ್ಲವೇ ಬಿ. ಎಲ್. ಸಂತೋಷ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications