ಸಿದ್ದರಾಮಯ್ಯ ಹಿಂದೂ ವಿರೋಧಿ : ಮುರಳೀಧರ ರಾವ್ ವಾಗ್ದಾಳಿ
ಬೆಳಗಾವಿ, ಡಿಸೆಂಬರ್ 09 : ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರುಳೀಧರ ರಾವ್ ಆರೋಪಿಸಿದ್ದಾರೆ.
ಅವರು ಶನಿವಾರ (ಡಿಸೆಂಬರ್ 09) ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಣೆ ಮಾಡುತ್ತಾರೆ. ಇವರೊಬ್ಬ ಹಿಂದೂ ವಿರೋಧಿ ಎಂದು ಕಟಕಿಯಾಡಿದರು.
ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ನಿರಂತರವಾಗಿ ನಡೆಯುತ್ತಿದ್ದರೂ ಕೃಷಿ ಹಾಗೂ ರೈತರ ಬಗ್ಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಕಾಳಜಿ ಇಲ್ಲ. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ರಾಜ್ಯದ ಸಚಿವರನ್ನು ಸಂಪುಟದಿಂದ ಕಿತ್ತು ಹಾಕುವ ಬದಲು ರಕ್ಷಣೆಗೆ ನಿಂತಿರುವುದು ರಾಜ್ಯದ ವಿಪರ್ಯಾಸದ ಸಂಗತಿ ಎಂದು ಕಾಂಗ್ರೆಸ್ ಆಡಳಿತವನ್ನು ದೂರಿದರು.

ದೇಶದಲ್ಲಿ ಉತ್ತಮ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಿಟ್ಲರ್, ನರಹಂತಕ ಎಂದು ಹೇಳುತ್ತಿರುವ ಮುಖ್ಯಮಂತ್ರಿಗಳಿಗೆ ಮುಂಬರುವ ಕರ್ನಾಟದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿ ಕಾರಿದರು.
ಅಸಭ್ಯ ಭಾಷೆ ಬಳಸುವ ಬಿಜೆಪಿ ಪಕ್ಷದ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಅವರು, ಅಸಭ್ಯ ಭಾಷೆ ಬಳಕೆಯನ್ನು ಬಿಜೆಪಿ ಹೈಕಮಾಂಡ್ ಸಹಿಸದು. ಅಂತಹವರ ವಿರುದ್ಧ ನಮ್ಮ ಪಕ್ಷದ ನಡವಳಿ ಮತ್ತು ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಶಿಸ್ತು ನಮ್ಮ ಪಕ್ಷದ ಧ್ಯೇಯ ಎಂದರು.
ಲಿಂಗಾಯತ ಧರ್ಮ ವಿಚಾರ ನಮ್ಮದಲ್ಲ
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಬಿಜೆಪಿಯದ್ದಲ್ಲ. ಉಮೇಶ ಕತ್ತಿ ಅವರು ಪಕ್ಷದ ವಿಷಯ ಹೇಳಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲುವ ಭೀತಿಯಿಂದ ಲಿಂಗಾಯತ ಪ್ರತ್ಯೇಕ ಧರ್ಮದ ಪರವಾಗಿ ನಿಂತಿದ್ದಾರೆ ಎಂದರು.
ಡಿಸೆಂಬರ್ 18ರ ನಂತರ ರಾಜ್ಯಕ್ಕೆ ಮೋದಿ
ನರೇಂದ್ರ ಮೋದಿ ಅವರು ಡಿಸೆಂಬರ್ 18ರ ನಂತರ ರಾಜ್ಯಕ್ಕೆ ಆಗಮಿಸಿ ಬಿಜೆಪಿ ಯಾತ್ರೆಯ ಸಮಾರೋಪದಲ್ಲಿ ಐತಿಹಾಸಿಕ ಭಾಷಣ ಮಾಡಲಿದ್ದಾರೆ ಎಂದರು ಮುರಳೀಧರ ರಾವ್.












Click it and Unblock the Notifications