ಈಶ್ವರಪ್ಪರನ್ನು ಕೂಡಲೇ ಬಂಧಿಸಬೇಕು; ಸಂತೋಷ್ ಮನೆ ಬಳಿ ಸಿದ್ದರಾಮಯ್ಯ ಆಗ್ರಹ
ಬೆಳಗಾವಿ, ಏ. 13: ನಿನ್ನೆ ಉಡುಪಿಯ ಲಾಡ್ಜ್ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಕಾರ್ಯಕರ್ತ ಹಾಗು ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಮನೆಗೆ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಭೇಟಿ ಮಾಡಿದ್ದಾರೆ. ಹಿಂಡಲಗ ಗ್ರಾಮ ಪಂಚಾಯಿತಿಯಲ್ಲಿರುವ ಸಂತೋಷ್ ಪಾಟೀಲ್ ನಿವಾಸಕ್ಕೆ ಇಂದು ಬುಧವಾರ ತೆರಳಿ ಅವರ ಕುಟುಂಬ ಸದಸ್ಯರಿಗೆ ಕೈ ಮುಖಂಡರು ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ತಾನಿಲ್ಲಿ ರಾಜಕಾರಣ ಮಾಡಲು ಬಂದಿಲ್ಲ. ಮೃತರ ಕುಟುಂಬದವರಿಗೆ ನ್ಯಾಯ ಸಿಗಬೇಕು. ಆರೋಪಿ ಈಶ್ವರಪ್ಪ ಅವರನ್ನ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಂತೋಷ್ ಪಾಟೀಲ್ ಅವರ ತಾಯಿ ಮತ್ತು ಪತ್ನಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದೇವೆ. ಈಶ್ವರಪ್ಪ ಅವರನ್ನು ಈ ಕೂಡಲೇ ಬಂಧಿಸಬೇಕು. ಇದೇ ಆರೋಪ ಬೇರೆಯವರ ಮೇಲೆ ಬಂದಿದ್ದರೆ ಇಷ್ಟರೊಳಗೆ ಅವರನ್ನು ಬಂಧಿಸುತ್ತಿರಲಿಲ್ಲವೇ? ಹಾಗೆಯೇ ಈಶ್ವರಪ್ಪ ಅವರನ್ನು ಬಂಧಿಸಬೇಕು. ಕಾನೂನು ಎಲ್ಲರಿಗೂ ಒಂದೇ ಎಂದು ಮಾಜಿ ಮುಖ್ಯಮಂತ್ರಿಗಳೂ ಆದ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಈಶ್ವರಪ್ಪ ಮತ್ತವರ ಪಿಎ ಗಳು 40% ಕಮಿಷನ್ಗೆ ಬೇಡಿಕೆ ಇಟ್ಟಿದ್ದರು ಎಂದು ಸಂತೋಷ್ ಪಾಟೀಲ್ ಸಹೋದರ ನೀಡಿರುವ ದೂರಿನಲ್ಲಿ ಸ್ಪಷ್ಟವಾಗಿದೆ, ಹಾಗಾಗಿ ಆರೋಪಿಗಳ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಮೊಕದ್ದಮೆಯನ್ನು ದಾಖಲಿಸಬೇಕು ಎಂದವರು ಒತ್ತಾಯಿಸಿದ್ದಾರೆ.

ಧೈರ್ಯ ತುಂಬಲು ಬಂದಿದ್ದು:
ನಾವಿಲ್ಲಿ ರಾಜಕಾರಣ ಮಾಡಲು ಬಂದವರಲ್ಲ, ಒಂದು ಅಮಾನವೀಯವಾದ ಸಾವಾಗಿದೆ, ಈ ಸಾವಿಗೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರೇ ನೇರ ಕಾರಣ ಎಂದು ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಮುನ್ನ ವಾಟ್ಸಾಪ್ ನಲ್ಲಿ ಕಳುಹಿಸಿದ ಡೆತ್ ನೋಟ್ನಲ್ಲೂ ಹೇಳಿದ್ದಾರೆ, ಮೃತರ ತಾಯಿ ಮತ್ತು ಹೆಂಡತಿ ಇದನ್ನೇ ಹೇಳಿದ್ದಾರೆ ಹಾಗೂ ತಮಗೆ ನ್ಯಾಯ ಸಿಗಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ. ಮೃತನ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಬೇಕು ಮತ್ತು ನ್ಯಾಯ ಕೊಡಿಸಲು ಹೋರಾಟ ಮಾಡಬೇಕು, ಪಕ್ಷದ ವತಿಯಿಂದ ಸಾಧ್ಯವಾದಷ್ಟು ಸಹಾಯ ಮಾಡಬೇಕು ಎಂದು ನಾವು ಇಲ್ಲಿಗೆ ಬಂದಿದ್ದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಚಿವರು ಹೇಳದೇ ಕಾಮಗಾರಿ ಸಾಧ್ಯವಾ?:
"ಸಂತೋಷ್ ಪಾಟೀಲ್ ಶ್ರೀಮಂತನಲ್ಲ, ಒಂದು ಸಾಮಾನ್ಯ ಕುಟುಂಬದವನು. ಸಣ್ಣ ಪುಟ್ಟ ಗುತ್ತಿಗೆ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ, ಈಗ ಸಾಲ ಮಾಡಿ ರೂ. 4 ಕೋಟಿ ವೆಚ್ಚದ ಕಾಮಗಾರಿಗಳನ್ನು ಮಾಡಿದ್ದಾರೆ. ಸಚಿವರು ಹೇಳದೆ ಯಾರು ಬೇಕಾದರೂ ಸುಮ್ಮನೆ ಕೆಲಸ ಮಾಡಲು ಆಗಲ್ಲ, ಹಾಗೆ ಕೆಲಸ ಮಾಡಲು ಹೊರಟರೆ ಅಧಿಕಾರಿಗಳು ಸುಮ್ಮನೆ ಬಿಡುತ್ತಾರ? ಕೆಲಸ ಮಾಡೋಕೆ ಹೇಳಿ, ವರ್ಕ್ ಆರ್ಡರ್ ಮತ್ತು ಬಿಲ್ ಪಾವತಿ ಮಾಡೋಕೆ 40% ಕಮಿಷನ್ ಗೆ ಬೇಡಿಕೆ ಇಟ್ಟಿದ್ದಾರೆ. ಇಷ್ಟು ಹಣವನ್ನು ಸಂತೋಷ್ ಪಾಟೀಲ್ ಇಂದ ಹೊಂದಿಸಲು ಸಾಧ್ಯವಾಗದ ಕಾರಣಕ್ಕೆ ಬಿಲ್ ಪಾವತಿ ಮಾಡಿಲ್ಲ.
"ಗ್ರಾಮ ಪಂಚಾಯತಿ ಅಧ್ಯಕ್ಷ ನಾಗೇಶ್ ಅವರಿಗೂ ಈಶ್ವರಪ್ಪ ಅವರು ಕಾಮಗಾರಿ ಮಾಡುವಂತೆ ಸಂತೋಷ್ ಪಾಟೀಲ್ ಅವರಿಗೆ ಹೇಳಿರುವುದು ಗೊತ್ತಿದೆ. ನಾಗೇಶ್ ಅವರು ಈ ಬಗ್ಗೆ ಮಾತನಾಡಿದ್ದು ' ನಾನೇ ಸಂತೋಷ್ ಪಾಟೀಲರನ್ನು ಈಶ್ವರಪ್ಪ ಬಳಿ ಕರೆದುಕೊಂಡು ಹೋಗಿದ್ದೆ, ಅವರೇ ಕಾಮಗಾರಿ ಮಾಡಲು ಹೇಳಿದ್ದರು' ಎಂದಿದ್ದಾರೆ. ಸಚಿವರೇ ಹೇಳಿದ್ದರಿಂದ ಕಾಮಗಾರಿಗೆ ಪಂಚಾಯತಿ ಅವರು ಅವಕಾಶ ನೀಡಿದ್ದಾರೆ.

"ಸಚಿವರಿಗೆ 40% ಕಮಿಷನ್ ಕೊಡಲಿಲ್ಲ ಎಂಬ ಕಾರಣಕ್ಕೆ ಬಿಲ್ ಹಣ ಕೇಳಲು ಹೋದರೆ ಇವತ್ತು, ನಾಳೆ ಎಂದು ಸತಾಯಿಸುತ್ತಿದ್ದರು. ಇದರಿಂದ ನೊಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾವು ಕೂಡ ಸಂತೋಷ್ ಪಾಟೀಲ್ ಸಾವಿನಿಂದ ನೊಂದಿದ್ದೇವೆ. ಮೃತನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಮೃತನ ಕುಟುಂಬದವರಿಗೆ 1 ಕೋಟಿ ರೂ ಪರಿಹಾರಕ್ಕೆ ಸಿದ್ದರಾಮಯ್ಯ ಆಗ್ರಹ:
ರಾಜ್ಯ ಸರ್ಕಾರ ಸಂತೋಷ್ ಪಾಟೀಲ್ ಪೂರ್ಣಗೊಳಿಸಿದ್ದ ರೂ. 4 ಕೋಟಿ ವೆಚ್ಚದ ಎಲ್ಲಾ ಕಾಮಗಾರಿಯ ಬಿಲ್ ಅನ್ನು ಕೂಡಲೇ ಸಂದಾಯ ಮಾಡಬೇಕು. ಸಾಲ ಮಾಡಿ, ಹೆಂಡತಿಯ ಒಡವೆ ಅಡವಿಟ್ಟು ಬಡ್ಡಿಗೆ ಹಣ ತಂದು ಕೆಲಸ ಮಾಡಿದ್ದಾರೆ, ಸಾಲ ಕೊಟ್ಟವರಿಗೆ ಈಗ ವಾಪಾಸು ಕೊಡಬೇಕು. ಯಾವುದೇ ಜೀವಕ್ಕೆ ಬೆಲೆ ಕಟ್ಟಲಾಗಲ್ಲ, ಆದರೂ ಮೃತ ಸಂತೋಷ್ ಪಾಟೀಲ್ ಅವರಿಗಿನ್ನೂ ಚಿಕ್ಕ ವಯಸ್ಸು, ಮದುವೆ ಆಗಿ ಮೂರು ವರ್ಷ ಆಗಿತ್ತು. ಚಿಕ್ಕ ಮಕ್ಕಳು ಇದ್ದಾರೆ. ಹೀಗಾಗಿ ಕೂಡಲೇ ರಾಜ್ಯ ಸರ್ಕಾರ ಮೃತನ ಕುಟುಂಬದವರಿಗೆ ರೂ. 1 ಕೋಟಿ ಪರಿಹಾರ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಮೃತನ ಪತ್ನಿಗೆ ಸರಕಾರಿ ಉದ್ಯೋಗ ಕೊಡಿ:
ಮೃತನ ಪತ್ನಿಗೆ ತಾತ್ಕಾಲಿಕವಾಗಿ ಉದ್ಯೋಗ ಕೊಡಿಸುವ ಕೆಲಸವನ್ನು ನಾವು ಮಾಡುತ್ತೇವೆ. ಆಕೆ ಬಿ.ಎ ಪದವೀಧರೆ ಹಾಗಾಗಿ ಸರ್ಕಾರಿ ಉದ್ಯೋಗ ಕೊಡಬೇಕು ಎಂದು ಹೇಳಿದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ವತಿಯಿಂದ ರೂ. 11 ಲಕ್ಷದ ಚೆಕ್ ಅನ್ನು ಮೃತನ ಕುಟುಂಬದವರಿಗೆ ನೀಡುತ್ತೇವೆ ಎಂದಿದ್ದಾರೆ.
ಈಶ್ವರಪ್ಪ ನೀಡಿರುವ ಸ್ಪಷ್ಟನೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಆರೋಪಿ ಈಶ್ವರಪ್ಪ ಅವರ ಎಲ್ಲಾ ಹೇಳಿಕೆಗಳಿಗೂ ಉತ್ತರ ಕೊಡಬೇಕಾದ ಅಗತ್ಯ ಇಲ್ಲ. ಕೊಲೆ ಮಾಡಿದವನು ತಾನು ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳಲ್ಲ. ಈಶ್ವರಪ್ಪ ಅವರು ಇದನ್ನೇ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ನಿನ್ನೆ ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಬಿಜೆಪಿ ಕಾರ್ಯಕರ್ತ ಮಾತ್ರವಲ್ಲದೆ ಹಿಂದೂ ಸಂಘಟನೆಯೊಂದರಲ್ಲಿ ಸಕ್ರಿಯನಾಗಿದ್ದ. ವೃತ್ತಿಯಲ್ಲಿ ಗುತ್ತಿಗೆದಾರನಾಗಿದ್ದ ಅವರು ಕೆಲ ವಾರಗಳ ಹಿಂದೆ ಈಶ್ವರಪ್ಪ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಈಶ್ವರಪ್ಪನ ಕಡೆಯವರು ಶೇ. 40ರಷ್ಟು ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಅದಾದ ಬಳಿಕ ನಿನ್ನೆ ಬೆಳಗಾವಿಯಿಂದ ಉಡುಪಿಗೆ ಬಂದು ಅಲ್ಲಿ ಶಾಂಭವಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರ ಮೊಬೈಲ್ನಿಂದ ಮಾಧ್ಯಮದವರಿಗೆ ವಾಟ್ಸಾಪ್ ಸಂದೇಶ ರವಾನೆಯಾಗಿದೆ. ಅದರಲ್ಲಿ ಅವರು ತಮ್ಮ ಸಾವಿಗೆ ಈಶ್ವರಪ್ಪ ಅವರೇ ಕಾರಣರಾಗುತ್ತಾರೆ ಎಂದು ಬರೆದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ, ಇದು ತನ್ನ ವಿರುದ್ಧ ವಿಪಕ್ಷದವರು ಮಾಡಿರುವ ಸಂಚಾಗಿದೆ. ಆತ್ಮಹತ್ಯೆ ಮಾಡಿಕೊಂಡ ಸಂತೋಷ್ನನ್ನು ನಾನು ಎಂದೂ ನೋಡಿಯೇ ಇಲ್ಲ. ಈತನಿಗೆ ಯಾವ ಕಾಮಗಾರಿಯನ್ನೂ ನೀಡಿಲ್ಲ. ವಾಟ್ಸಾಪ್ನಲ್ಲಿ ಸಾಯುವ ಮುನ್ನ ಈತನೇ ಮೆಸೇಜ್ ಕಳುಹಿಸಿದ್ದನೆನ್ನುವುದಕ್ಕೆ ಪುರಾವೆ ಇಲ್ಲ ಎಂದು ಹೇಳಿದ್ದಾರೆ.












Click it and Unblock the Notifications