ಕೆ.ಕಲ್ಯಾಣ್ ಕುಟುಂಬ ಕಲಹ ವಿಚಾರ; ಶಿವಾನಂದ ವಾಲಿ ಪೊಲೀಸರ ವಶಕ್ಕೆ
ಬೆಳಗಾವಿ, ಅಕ್ಟೋಬರ್ 5: ಗೀತ ರಚನೆಕಾರ ಕೆ.ಕಲ್ಯಾಣ್ ಅವರ ದೂರಿನ ಮೇರೆಗೆ ಇಂದು ಬೆಳಗಾವಿಯ ಮಾಳಮಾರುತಿ ಠಾಣೆಯ ಪೊಲೀಸರು ಆರೋಪಿ ಶಿವಾನಂದ ವಾಲಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಕೆ. ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡ ವಿಚಾರವಾಗಿ ನಿನ್ನೆ ಪತ್ರಿಕಾ ಗೋಷ್ಠಿ ನಡೆಸಿದ್ದ ಕಲ್ಯಾಣ್, ಸ್ಪಷ್ಟನೆ ನೀಡಿದ್ದರು. ತನ್ನ ಪತ್ನಿಯ ಸಂಬಂಧಿ ಶಿವಾನಂದ ವಾಲಿ ಮಾಟ ಮಂತ್ರದಿಂದ ನನ್ನ ಪತ್ನಿಯ ಮೇಲೆ ಬ್ಲಾಕ್ ಮ್ಯಾಜಿಕ್ ಮಾಡಿದ್ದಾರೆ. ಇದರಿಂದ ಸಂಸಾರದಲ್ಲಿ ಬಿರುಕು ಹುಟ್ಟಿಸಿದ್ದಾರೆ. ನಮ್ಮ ಜೀವನದಲ್ಲಿ ಬಿರುಕು ಇರಲಿಲ್ಲ. ಆದರೆ ಶಿವಾನಂದ ವಾಲಿ ಬಿರುಕು ತಂದಿದ್ದಾರೆ ಎಂದು ಆರೋಪಿಸಿದ್ದರು. ಈ ಕುರಿತು ಬೆಳಗಾವಿಯ ಮಾಳಮಾರುತಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು. ದೂರಿನ ಮೇರೆಗೆ ದಾಖಲಾದ ಪ್ರಕರಣದ ಎ2 ಆರೋಪಿ ಶಿವಾನಂದ ವಾಲಿಯನ್ನು ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿವಾನಂದ ವಾಲಿ ಮೇಲೆ ದೂರು ನೀಡಿದ್ದ ಕಲ್ಯಾಣ್
ಕಲ್ಯಾಣ್ ಪತ್ನಿ ಅಶ್ವಿನಿ, ತಮ್ಮ ಮೇಲೆ ಕಲ್ಯಾಣ್ ದೈಹಿಕ, ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದು, ಇದಕ್ಕೆ ಸ್ಪಷ್ಟನೆಯಾಗಿ ನಿನ್ನೆ ಕಲ್ಯಾಣ್ ಸುದ್ದಿಗೋಷ್ಠಿ ನಡೆಸಿದ್ದರು. ಈ ಸಂದರ್ಭ, ಪತ್ನಿಯನ್ನು ತಮ್ಮೊಂದಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ಪತ್ನಿ ತವರು ಮನೆಯವರಿಗೆ ಆಪ್ತನಾಗಿದ್ದ ಶಿವಾನಂದ ವಾಲಿ, ಪತ್ನಿ, ಅತ್ತೆ, ಮಾವನ ಪುಸಲಾಯಿಸಿ ಹಣ, ಆಸ್ತಿ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ನಮ್ಮಿಬ್ಬರ ಮಧ್ಯೆ ಕಮ್ಯುನಿಕೇಷನ್ ಗ್ಯಾಪ್ ಆಗಿದೆ: ಪತ್ನಿ ಆರೋಪಕ್ಕೆ ಕೆ.ಕಲ್ಯಾಣ್ ಸ್ಪಷ್ಟನೆ
45 ಲಕ್ಷ ಹಣ ವರ್ಗಾವಣೆ ಸಾಬೀತು
19 ಲಕ್ಷ 80 ಸಾವಿರ ಹಣ ವರ್ಗಾವಣೆಯಾಗಿರುವುದಾಗಿ ಕೆ.ಕಲ್ಯಾಣ್ ದೂರು ನೀಡಿದ್ದರು. ಆದರೆ ಪೊಲೀಸರ ತನಿಖೆಯಲ್ಲಿ 45 ಲಕ್ಷ ಹಣ ವರ್ಗಾವಣೆ ಮಾಡಿಕೊಂಡಿದ್ದು ಪತ್ತೆಯಾಗಿದೆ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಡಗಿ ಗ್ರಾಮದ ಶಿವಾನಂದ ವಾಲಿ ಹಲವು ವರ್ಷಗಳಿಂದ ಕೆ.ಕಲ್ಯಾಣ್ ಪತ್ನಿ ಅಶ್ವಿನಿ ಕುಟುಂಬಕ್ಕೆ ಆಪ್ತನಾಗಿದ್ದ ಎಂದು ತಿಳಿದುಬಂದಿದೆ. ಕೆ.ಕಲ್ಯಾಣ್ ಮನೆಕೆಲಸದಾಕೆ ಗಂಗಾ ಕುಲಕರ್ಣಿ ಜೊತೆಗೂಡಿ ಪತ್ನಿ ಅಶ್ವಿನಿ ಅವರನ್ನು ಕಿಡ್ನಾಪ್ ಮಾಡಿದ್ದರು ಎಂದೂ ಕಲ್ಯಾಣ್ ದೂರು ನೀಡಿದ್ದರು.
ಮಾಟ ಮಂತ್ರದ ವಸ್ತುಗಳು ಜಪ್ತಿ
ಈ ದೂರಿನ ಆಧಾರ ಮೇಲೆ ಪೊಲೀಸರು ಶಿವಾನಂದ ವಾಲಿಯನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಮಾಟ ಮಂತ್ರದ ವಸ್ತುಗಳು ಜಪ್ತಿಯಾಗಿವೆ. ಶಿವಾನಂದ ವಾಲಿ ಊದಿನಕಡ್ಡಿ ಶಿವಾನಂದ ಅಂತಾನೇ ಫೇಮಸ್ ಆಗಿದ್ದು, ಮಾಟ ಮಂತ್ರ ಮಾಡಿ ಹಲವರಿಗೆ ವಂಚನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಶಿವಾನಂದನನ್ನು ವಶಕ್ಕೆ ಪಡೆಯಲಾಗಿದೆ.
ಬೆಳಗಾವಿ: ಆನ್ಲೈನ್ ಮೂಲಕ ಕೆ.ಕಲ್ಯಾಣ್ ಪತ್ನಿ ಅಶ್ವಿನಿಗೆ ಕೌನ್ಸಿಲಿಂಗ್
ಬೆಳಗಾವಿಯ ಹೋಟೆಲ್ ನಲ್ಲಿ ಮಾತುಕತೆ
ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ನಿನ್ನೆ ಇಬ್ಬರ ಕುಟುಂಬಸ್ಥರು ಮಾತುಕತೆ ನಡೆಸಿದ್ದಾರೆ. ಈಗಾಗಲೇ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಕೆ.ಕಲ್ಯಾಣ್ ದಾಂಪತ್ಯದ ಕಲಹಕ್ಕೆ ಅಂತ್ಯ ಹಾಡಲು ಉಭಯ ಕುಟುಂಬಸ್ಥರಿಂದ ಮಾತುಕತೆ ನಡೆದಿದೆ. ಈ ಮಾತುಕತೆಯಲ್ಲಿ ಚಿತ್ರ ಸಾಹಿತಿ ಕೆ.ಕಲ್ಯಾಣ್ ಸಹ ಉಪಸ್ಥಿತರಿದ್ದರು.