ಬೆಳಗಾವಿಯ ಈ ದೇಗುಲಗಳು ಮತ್ತೆ ಒಂದು ತಿಂಗಳ ಕಾಲ ಬಂದ್
ಬೆಳಗಾವಿ, ಅಕ್ಟೋಬರ್ 1: ಕೊರೊನಾ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ, ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಬೆಳಗಾವಿಯ ಪ್ರಸಿದ್ಧ ದೇಗುಲಗಳಾದ ಸವದತ್ತಿಯ ರೇಣುಕಾ ಯಲ್ಲಮ್ಮ ಹಾಗೂ ಚಿಂಚಲಿಯ ಮಾಯಕ್ಕಾ ದೇವಸ್ಥಾನಕ್ಕೆ ಅ.31ರವರೆಗೆ ಭಕ್ತರ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಆದೇಶ ಹೊರಡಿಸಿದ್ದಾರೆ.
ಸವದತ್ತಿಯ ಯಲ್ಲಮ್ಮ ದೇವಸ್ಥಾನ, ಚಿಂಚಲಿಯ ಮಾಯಕ್ಕಾ ದೇವಸ್ಥಾನ ಹಾಗೂ ಜೋಗುಳಬಾವಿ ಸತ್ಯೆವ್ವ ದೇವಸ್ಥಾನಕ್ಕೆ ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ದರ್ಶನ ವೇಳೆ ಸೋಂಕು ಹರಡುವ ಮೂಲಕ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಾರದೆಂಬ ಉದ್ದೇಶದಿಂದ ಜಿಲ್ಲಾಧಿಕಾರಿಗಳು ಸಾರ್ವಜನಿಕ ದರ್ಶನ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ದೇವಸ್ಥಾನ ಆಡಳಿತ ಮಂಡಳಿಯವರು ಈ ದೇವಸ್ಥಾನಗಳಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡು ದಿನನಿತ್ಯದ ಧಾರ್ಮಿಕ ವಿಧಿ ವಿಧಾನಗಳನ್ನು ಕೈಗೊಂಡಿದ್ದಾರೆ. ಸಾಮಾನ್ಯವಾಗಿ ಪ್ರತಿ ವರ್ಷ ದಸರಾ ಹಬ್ಬದಲ್ಲಿ ದೇವಸ್ಥಾನಗಳಿಗೆ ಲಕ್ಷಾಂತರ ಭಕ್ತರು ದೀಪ ಹಚ್ಚಲು ಆಗಮಿಸುತ್ತಾರೆ. ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವುದು ಸಾಮಾನ್ಯ. ಆದರೆ ಈ ವರ್ಷ ಕೊರೊನಾದಿಂದಾಗಿ ಸಾರ್ವಜನಿಕರಿಗೆ ದರ್ಶನ ಇಲ್ಲದೇ ಭಕ್ತರಿಗೆ ನಿರಾಸೆಯಾಗಿದೆ.

ಕೋಟಿ ಕೋಟಿ ನಷ್ಟ: ಸವದತ್ತಿಯ ರೇಣುಕಾದೇವಿ ದೇಗುಲದಲ್ಲಿ ವರ್ಷದಲ್ಲಿ ನಾಲ್ಕು ಜಾತ್ರೆ ನಡೆಯುತ್ತದೆ. ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಗೋವಾ, ತೆಲಂಗಾಣ, ತಮಿಳುನಾಡು ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಭಕ್ತರ ಪ್ರವೇಶ ನಿರಾಕರಣೆ ಕಾರಣ ಭಕ್ತರಿಂದ ಸಂಗ್ರಹವಾಗುತ್ತಿದ್ದ ಕೋಟ್ಯಂತರ ರೂಪಾಯಿ ಆದಾಯಕ್ಕೂ ಹೊಡೆತ ಬಿದ್ದಿದೆ.












Click it and Unblock the Notifications