ಹಿಂದೂ ವಿವಾದ: ತನಿಖಾ ಸಮಿತಿ ರಚಿಸಲು ಸಿಎಂಗೆ ಸತೀಶ್ ಜಾರಕಿಹೊಳಿ ಪತ್ರ
ಬೆಳಗಾವಿ, ನವೆಂಬರ್ 09: ಹಿಂದೂ ಪದದ ಬಗ್ಗೆ ತಾವು ನೀಡಿರುವ ಹೇಳಿಕೆಯು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಗುರಿಯಾಗಿರುವುದರ ಮಧ್ಯೆಯೇ ಕಾಂಗ್ರೆಸ್ ಹಿರಿಯ ನಾಯಕ ಸತೀಶ್ ಜಾರಕಿಹೊಳಿ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರವೊಂದನ್ನು ಬರೆದಿದ್ದಾರೆ.
ಹಿಂದೂ ಪದದ ಕುರಿತು ತೀವ್ರ ಚರ್ಚೆಗಳು ಹಾಗೂ ಸತೀಶ್ ಜಾರಕಿಹೊಳಿ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದರ ಬಗ್ಗೆ ಸಿಎಂಗೆ ಬರೆದಿರುವ ಪತ್ರವು ಸಾಕಷ್ಟು ಗಮನ ಸೆಳೆದಿದೆ.
ಹಿಂದೂಗಳ ಭಾವನೆಗೆ ಧಕ್ಕೆ: ಸತೀಶ್ ಜಾರಕಿಹೊಳಿ ವಿರುದ್ಧ ಮಂಡ್ಯದಲ್ಲಿ ಪ್ರತಿಭಟನೆ
ಈ ಮೊದಲೇ ತಾವು ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಬರೆದಿರುವ ಪತ್ರದಲ್ಲಿ ತನಿಖಾ ಸಮಿತಿಯನ್ನು ರಚಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅವರು ಬರೆದಿರುವ ಪತ್ರದಲ್ಲಿ ಏನೆಲ್ಲ ಅಂಶಗಳನ್ನು ಉಲ್ಲೇಖಿಸಲಾಗಿದೆ. ಈ ಮೊದಲು ಅವರು ನೀಡಿದ್ದ ಹೇಳಿಕೆ ಹೇಗಿತ್ತು ಮತ್ತು ಅದಕ್ಕೆ ಸತೀಶ್ ಜಾರಕಿಹೊಳಿ ನೀಡಿರುವ ಸಮರ್ಥನೆ ಯಾವ ರೀತಿಯಲ್ಲಿತ್ತು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
ಸಿಎಂಗೆ ಸತೀಶ್ ಜಾರಕಿಹೊಳಿ ಬರೆದ ಪತ್ರದಲ್ಲಿ ಏನಿದೆ?
ದಿನಾಂಕ ನವೆಂಬರ್ 6ರಂದು ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ನಡೆದ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಇದರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಕೆಳಕಂಡ ವಿಷಯವನ್ನು ಪ್ರಸ್ತಾಪಿಸಿದ್ದೇನೆ.
ಹಿಂದೂ ಶಬ್ದ ಪರ್ಷಿಯನ್ ಭಾಷೆಯಿಂದ ಬಂದಿದೆ. ಇದು ಭಾರತ ದೇಶಕ್ಕೆ ಹೇಗೆ ಬಂತು? ಹಲವಾರು ಲೇಖನಗಳಲ್ಲಿ ಹಿಂದೂ ಎಂಬ ಪದದ ಅರ್ಥವು ಕೆಟ್ಟದಾಗಿದೆ ಎಂದು ಬರೆಯುತ್ತಾರೆ ಅಂತಾ ಹೇಳಿರುತ್ತೇನೆ ಮತ್ತು ಇದು ಸಾರ್ವಜನಿಕವಾಗಿ ಚರ್ಚೆ ಆಗಬೇಕಾಗಿರುವುದು ಬಹಳ ಅವಶ್ಯಕವಿದೆ ಎಂದು ಸಹ ಹೇಳಿರುತ್ತೇನೆ.
ಇದನ್ನು ನಾನು ವಿಕಿಪೀಡಿಯಾ, ಪುಸ್ತಕಗಳು, ಶಬ್ದಕೋಶಗಳು ಮತ್ತು ಇತಿಹಾಸಕಾರರ ಬರಹಗಳ ಉಲ್ಲೇಖದ ಮೇಲೆ ಈ ನನ್ನ ಭಾಷಣ ಆಧಾರಿತವಾಗಿರುತ್ತದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೊರಟಿರುತ್ತಾರೆ. ಜೊತೆಗೆ ನನಗೆ ತೇಜೋವಧೆ ಹಾಗೂ ಹಾನಿಯುಂಟು ಮಾಡುವ ವ್ಯವಸ್ಥಿತ ಪಿತೂರಿ ನಡೆದಿರುತ್ತದೆ. ಮೇಲಿನ ಎಲ್ಲಾ ಅಂಶಗಳನ್ನು ಪರಿಶೀಲಿಸಲು ಮತ್ತು ನೈಜ ಸ್ಥಿತಿಯನ್ನು ವಿವರಿಸದೇ ಈ ಅವಾಂತರ ಸೃಷ್ಟಿಸಿದವರ ಮೇಲೆ ತನಿಖೆ ಮಾಡುವಂತೆ ವಿನಂತಿಸಿಕೊಳ್ಳುತ್ತೇನೆ.
ಮತ್ತೊಮ್ಮೆ ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ, ಈ ಕುರಿತು ತಕ್ಷಣ ತನಿಖಾ ಸಮಿತಿ ರಚಿಸಬೇಕು ಎಂದು ವಿನಂತಿಸಿಕೊಳ್ಳುತ್ತೇನೆ. ಹಾಗೂ ನಿಪ್ಪಾಣಿಯಲ್ಲಿ ಜರುಗಿನ ಮಾನವ ಬಂಧುತ್ವ ವೇದಿಕೆಯಲ್ಲಿ ಮನೆ ಮನೆಗೆ ಬುದ್ಧ, ಬಸವ, ಅಂಬೇಡ್ಕರ್ ಕಾರ್ಯಕ್ರಮದಲ್ಲಿ ನಾನು ಮಾತನಾಡಿದ ಆ ಒಂದು ಮಾತು ವಿವಾದಕ್ಕೀಡಾಗಿದೆ. ಅಲ್ಲದೇ ಅದನ್ನು ತಿರುಚಿ ಅಪಪ್ರಚಾರಗೊಳಿಸುತ್ತಿರುವುದರಿಂದ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಬಾರದು ಎಂಬ ಸದುದ್ದೇಶದಿಂದ ಅಂದು ನಾನು ಹೇಳಿದ ಆ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆ. ಆ ಹೇಳಿಕೆಯಿಂದ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದಲ್ಲಿ ವಿಷಾದಿಸುತ್ತೇನೆ," ಎಂದು ಸತೀಶ್ ಜಾರಕಿಹೊಳಿ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ತಮ್ಮ ಹೇಳಿಕೆಯಲ್ಲಿ ತಪ್ಪಿಲ್ಲ ಎಂದಿದ್ದ ಸತೀಶ್ ಜಾರಕಿಹೊಳಿ
ನಾನು ಹಿಂದೂ ಪದದ ಬಗ್ಗೆ ನೀಡಿರುವ ಹೇಳಿಕೆ ಕುರಿತು ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ವಿಮರ್ಶೆ, ಟೀಕೆ-ಟಿಪ್ಪಣಿಗಳನ್ನು ಮಾಡಲಾಗುತ್ತಿದೆ. ಆದರೆ ನಿನ್ನೆಯ ಭಾಷಣದಲ್ಲಿ ನಾನು ಹೇಳಿದ್ದು ಬೇರೆ ರೀತಿಯಾಗಿದೆ. ಹಿಂದೂ ಶಬ್ದವು ಪರ್ಷಿಯನ್ ಭಾಗದಿಂದ ಬಂದಿರುವ ಬಗ್ಗೆ ಉಲ್ಲೇಖಿಸಿದ್ದು ನಿಜ. ಆನಂತರದಲ್ಲಿ ಇದರ ಬಗ್ಗೆ ಸಂಪೂರ್ಣ ಚರ್ಚೆಯಾಗಬೇಕು ಎಂದು ಹೇಳಿದೆ. ಈ ರೀತಿ ದೇಶಾದ್ಯಂತ ಸಾವಿರಾರು ಭಾಷಣಗಳು ನಡೆದಿವೆ. ಆದರೆ ನನ್ನ ಭಾಷಣವನ್ನು ಹೆಚ್ಚಾಗಿ ತೋರಿಸುತ್ತಿರುವುದು, ಈ ಕುರಿತು ಸ್ಪಷ್ಟನೆ ನೀಡುವುದು ನನ್ನ ಕರ್ತವ್ಯವಾಗಿದೆ.
ಯಾವುದೇ ಹಿಂದೂ ಧರ್ಮವಿರಲಿ, ಪಾರ್ಸಿಯಿರಲಿ, ಇಸ್ಲಾಂ ಇರಲಿ, ಬೌದ್ಧ ಇರಲಿ, ಜೈನ ಇರಲಿ ಅದನ್ನು ಮೀರಿ ಬೆಳೆಯಬೇಕಾದ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಹೀಗಾಗಿ ನಾನು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಪರ್ಷಿಯನ್ ಶಬ್ದದಿಂದ ಬಂದಿರುವುದಕ್ಕೆ ನೂರಾರು ಸಾಕ್ಷ್ಯಗಳಿವೆ. ಅದರಲ್ಲಿ ಮುಖ್ಯವಾಗಿ ಆರ್ಯ ಸಮಾಜದ ಸಂಸ್ಥಾಪಕರಾದ ದಯಾನಂದ ಸರಸ್ವತಿ ರಚಿಸಿರುವ ಸತ್ಯಾರ್ಥ ಪ್ರಕಾಶ ಪುಸ್ತಕದಲ್ಲಿ ಉಲ್ಲೇಖವಿದೆ. ಅದೇ ರೀತಿ ಡಾ. ಜಿಎಸ್ ಪಾಟೀಲ್ ಬರೆದಿರುವ ಬಸವ ಭಾರತ ಪುಸ್ತಕದಲ್ಲಿಯೂ ಇದೆ. ಬಾಲಗಂಗಾಧರ ತಿಲಕ ಅವರ ಕೇಸರಿ ಪತ್ರಿಕೆಯಲ್ಲೂ ಉಲ್ಲೇಖವಿದೆ. ಇದು ಕೇವಲ ಉದಾಹರಣೆಯಷ್ಟೇ, ಇಂಥ ನೂರಾರು ಸಾವಿರಾರು ಉದಾಹರಣೆಗಳು ನಿಮಗೆ ಸಿಗುತ್ತವೆ ಎಂದಿದ್ದರು.
ವಿಕಿಪೀಡಿಯಾ ನೋಡಿಕೊಳ್ಳಿ ಎಂದಿದ್ದ ಸತೀಶ್ ಜಾರಕಿಹೊಳಿ
ನನ್ನ ಭಾಷಣವನ್ನು ಸರಿಯಾಗಿ ಒಮ್ಮೆ ಕೇಳಿ ಅದರಲ್ಲಿ ತಪ್ಪಿದ್ದರೆ ನಿಮ್ಮ ವಿದ್ವಾಂಸರನ್ನು ಇಟ್ಟುಕೊಂಡು ಚರ್ಚೆಯನ್ನು ಮುಂದುವರಿಸಿ. ಇಲ್ಲದಿದ್ದರೆ ಇದನ್ನು ಇಲ್ಲಿಗೆ ನಿಲ್ಲಿಸಿ ಬಿಡಿ. ಹಾಗೆ ಮಾಡದಿದ್ದರೆ, ನಾವು ಕೂಡ ಮಾಧ್ಯಮಗಳ ವಿರುದ್ಧ ಮಾನಹಾನಿ ಮೊಕದ್ದಮೆ ಹಾಗೂ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಸತೀಶ್ ಜಾರಕಿಹೊಳಿ ತಮ್ಮ ಸ್ಪಷ್ಟನೆ ಸಂದರ್ಭದಲ್ಲಿ ಉಲ್ಲೇಖಿಸಿದರು.
ನಾನು ಯಾವುದೇ ಧರ್ಮ ಅಥವಾ ಭಾಷೆಗೆ ಅವಮಾನ ಮಾಡಿರುವ ಬಗ್ಗೆ ಪ್ರಶ್ನೆಯೇ ಇಲ್ಲ. ಅದು ಪದವು ಪರ್ಷಿಯನ್ ಎಂದು ಹೇಳಿದ್ದೇನೆ. ವಿಕಿಪೀಡಿಯಾ ಎಂಬ ಸಂಸ್ಥೆಯಲ್ಲೂ ಈ ಅಂಶವಿದ್ದು, ಅದರ ಕುರಿತು ಚರ್ಚೆಯಾಗಲಿ ಎಂದು ಹೇಳಿದ್ದೇನೆ. ಇದರ ಹೊರತಾಗಿ ಅದು ಸತೀಶ್ ಜಾರಕಿಹೊಳಿಯ ಮಾತಾಗಿರಲಿಲ್ಲ. ಅದನ್ನು ನೀವು ಎಲ್ಲೆಲ್ಲಿಗೋ ಕಲ್ಪನೆ ಕೊಡುತ್ತಿದ್ದೀರಾ ಎಂದು ಸತೀಶ್ ಜಾರಕಿಹೊಳಿ ಆರೋಪಿಸಿದರು.
ನಿಪ್ಪಾಣಿಯಲ್ಲಿ ನೀಡಿದ್ದ ಹೇಳಿಕೆಯು ಹೇಗಿತ್ತು?
ಹಿಂದೂ ಪದದ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆಯು ವಿವಾದವಾಗಿ ಚರ್ಚೆ ಆಗುತ್ತಿತ್ತು. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ ಪದಕ್ಕೆ ಅಸಭ್ಯವಾದ ಅರ್ಥವಿದೆ ಎಂದಿದ್ದರು. "ಹಿಂದೂ ಎಂಬ ಪದವು ಎಲ್ಲಿಂದ ಹುಟ್ಟಿತು? ಅದು ನಮ್ಮದೇ? ಇದು ಪರ್ಷಿಯನ್, ಇರಾನ್, ಇರಾಕ್, ಉಜ್ಬೇಕಿಸ್ತಾನ್, ಕಜಕಿಸ್ತಾನ್ ಪ್ರದೇಶದಿಂದ ಬಂದಿದೆ. ಹಿಂದೂ ಪದಕ್ಕೂ ಭಾರತಕ್ಕೂ ಏನು ಸಂಬಂಧ? ಹಾಗಾದರೆ ನೀವು ಅದನ್ನು ಹೇಗೆ ಒಪ್ಪಿಕೊಳ್ಳುತ್ತೀರಿ? ಇದರ ಬಗ್ಗೆ ಚರ್ಚೆಯಾಗಬೇಕು,'' ಎಂದು ಹೇಳಿದ್ದರು.