"ಎಲ್ಲ ದಾಖಲೆಗಳನ್ನೂ ಬಿಡುಗಡೆ ಮಾಡ್ತೀನಿ"; ಸತೀಶ್ ಜಾರಕಿಹೊಳಿಯಿಂದ ಮತ್ತೊಂದು ಬಾಂಬ್
ಬೆಳಗಾವಿ, ಅಕ್ಟೋಬರ್ 25: "ಗೋಕಾಕ್ ಪಂಚಾಯತಿ, ನಗರ ಸಭೆಯಲ್ಲಿ ಇತಿಮಿತಿ ಮೀರಿ ಭ್ರಷ್ಟಾಚಾರ ನಡೆದಿದೆ. ಜನರ ದುಡ್ಡು ತಿನ್ನಲಾಗಿದೆ. ಈ ಎಲ್ಲಾ ಭ್ರಷ್ಟಾಚಾರದ ದಾಖಲೆಗಳನ್ನು ನಾನು ಮಾಧ್ಯಮಗಳಿಗೆ ಬಿಡುಗಡೆ ಮಾಡ್ತಿನಿ" ಎಂದು ಬಾಂಬ್ ಸಿಡಿಸಿದ್ದಾರೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ.
ಬೆಳಗಾವಿಯಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ ರಮೇಶ್ ಜಾರಕಿಹೊಳಿ ವಿರುದ್ಧ ಹಲವು ಆರೋಪಗಳನ್ನು ಮಾಡಿದರು.

ರಮೇಶ್ ಅಳಿಯನ ಬಗ್ಗೆ ಸತೀಶ್ ವ್ಯಂಗ್ಯ
"ಅಂಬಿರಾವ್ ಹಫ್ತಾ ವಸೂಲಿ ಮಾಡುತ್ತಾರೆ. ಗೋಕಾಕ್ ನಲ್ಲಿ ಪಂಚಾಯಿತಿ ಸದಸ್ಯರೇ ಹೇಳ್ತಾರೆ. ಸದಸ್ಯರು, ಅಧಿಕಾರಿಗಳು ನಾವು ಕಲೆಕ್ಟ್ ಮಾಡಿ ಕೊಡ್ತಿವಿ, ಇದರಲ್ಲಿ ನಮ್ಮ ಪಾತ್ರವಿಲ್ಲ ಅನ್ನುತ್ತಾರೆ. ರಮೇಶ್ ಅಳಿಯ ಅಂಬಿರಾವ್ 500 ಕೋಟಿ ಆಸ್ತಿ ಒಡೆಯ. ಆದರೂ ಮಾವ ರಮೇಶ ಜಾರಕಿಹೊಳಿಯನ್ನು ಸಾಲದಲ್ಲಿ ಇಟ್ಟಿದ್ದಾನೆ" ಎಂದು ವ್ಯಂಗ್ಯ ಮಾಡಿದ್ದಾರೆ.

"ಅಳಿಯನಿಂದ ಅಧಿಕಾರ ಕಳ್ಕೊತ್ತಾರೆ"
ಇತಿಹಾಸದಲ್ಲಿ ಎಷ್ಟೋ ರಾಜರು ಅಧಿಕಾರ ಕಳೆದುಕೊಂಡಿದ್ದಾರೆ. ಅಳಿಯಂದರ ಮೇಲೆ ಪ್ರೀತಿ ತೋರಿಸಿದವರು ಬೇಗ ಅಧಿಕಾರ ಕಳೆದುಕೊಂಡಿದ್ದಾರೆ. ಇಲ್ಲಿಯೂ ರಮೇಶ ಜಾರಕಿಹೊಳಿ ಅಧಿಕಾರ ಕಳೆದುಕೊಳ್ಳುವುದು ಖಚಿತ. ನಾವು ಜನರ ಮೇಲೆ ಪ್ರೀತಿ ತೋರಿಸಬೇಕು. ಕುಟುಂಬದ ಸದಸ್ಯರ ಮೇಲಲ್ಲ ಎಂದು ಬುದ್ಧಿವಾದ ಹೇಳಿದ್ದಾರೆ.

"ನಾನು ರಾಜಕೀಯವಾಗಿ ಕೆಲಸ ಮಾಡಿಲ್ಲ"
ನಾನು ಗೋಕಾಕ್ ನಲ್ಲಿ ಮೊದಲಿನಿಂದಲೂ ಜನರಿಗಾಗಿ ಕೆಲಸ ಮಾಡುತ್ತಿದ್ದೇನೆ. ಆದರೆ ಅವ್ಯಾವುವೂ ರಾಜಕೀಯವಾಗಿ ಅಲ್ಲ. ಜನರಿಗಾಗಿ ಮಾತ್ರ". ಸ್ವಂತ ಉದ್ಧಾರಕ್ಕೆ ರಾಜಕೀಯ ಮಾಡುವವರು ಜನರನ್ನು ಗಮನದಲ್ಲಿಟ್ಟುಕೊಳ್ಳುವುದಿಲ್ಲ ಎಂದಿದ್ದಾರೆ.

ಮೋದಿ ಅಲೆ ಎನ್ನುವುದು ಭ್ರಮೆ ಎಂದ ಸತೀಶ್
ಮಹಾರಾಷ್ಟ್ರ, ಹರಿಯಾಣದಲ್ಲಿ ಬಿಜೆಪಿಗೆ ಜನರು ಪಾಠ ಕಲಿಸಿದ್ದಾರೆ. ಬಿಜೆಪಿಯವರು ಮೋದಿ ಅಲೆ ಮತ್ತು ರಾಷ್ಟ್ರೀಯ ವಿಚಾರದ ಮೇಲೆ ಗೆಲ್ಲುತ್ತೇವೆ ಎಂದುಕೊಂಡಿದ್ದರು.
ಆದರೆ ಎರಡೂ ರಾಜ್ಯದಲ್ಲಿ ಜನರು ಸ್ಥಳೀಯ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಮತ ಹಾಕಿದ್ದಾರೆ. ಈ ಫಲಿತಾಂಶ ಬಿಜೆಪಿಗೆ ಎಚ್ಚರಿಕೆ ಗಂಟೆ ಆಗಿದೆ. ಕೊಲ್ಲಾಪುರ, ಸಾಂಗ್ಲಿಯಲ್ಲಿ ಬಿಜೆಪಿಗೆ ಹಿನ್ನಡೆ ಆಗಿದೆ ಎಂದು ಸತೀಶ್ ಜಾರಕಿಹೊಳಿ ಕಿಡಿಕಾರಿದರು.












Click it and Unblock the Notifications