ಸರ್ಕಾರ ಟೇಕ್ ಆಫ್ ಆಗಿಲ್ಲ ಅಂದಿದ್ದು ಆ ಅರ್ಥದಲ್ಲಿ ಅಲ್ಲ: ಸತೀಶ್ ಜಾರಕಿಹೊಳಿ
ಬೆಳಗಾವಿ, ನವೆಂಬರ್ 28: ಸರ್ಕಾರ ಇನ್ನೂ ಟೇಕ್ ಆಫ್ ಆಗಿಲ್ಲ ಎಂಬ ಹೇಳಿಕೆ ನೀಡಿದ್ದ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ, ಅದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ.
ಸರ್ಕಾರ ಟೇಕ್ ಆಫ್ ಆಗಿಲ್ಲ ಎಂದಿರುವುದು ಅದು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಅರ್ಥದಲ್ಲಿ ಅಲ್ಲ ಎಂದು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ವೇಳೆ ಅವರು ವಿವರಣೆ ನೀಡಿದ್ದಾರೆ.
'ನಾನು ಆ ಅರ್ಥದಲ್ಲಿ ಹೇಳಿಲ್ಲ. ಯಾವುದೇ ಸರ್ಕಾರ ಟೇಕ್ ಆಫ್ ಆಗಲು ಕನಿಷ್ಠ ಆರು ತಿಂಗಳ ಸಮಯ ಬೇಕು. ಅದು ಇನ್ನು ಮುಂದೆ ಟೇಕ್ ಆಫ್ ಆಗಲಿದೆ' ಎಂದು ಸತೀಶ್ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರದಿಂದ ಅನುದಾನವೇ ಬರುತ್ತಿಲ್ಲ: ಸತೀಶ್ ಜಾರಕಿಹೊಳಿ
ಮೈತ್ರಿ ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಆಗದೆ ಇರುವುದರ ಬಗ್ಗೆ ಶಾಸಕರಲ್ಲಿ ಅಸಮಾಧಾನವಿದೆ. ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ. ಅದು ನಿಧಾನವಾಗಿ ಟೇಕಾಫ್ ಆಗಲಿದೆ. ಅದಕ್ಕೆ ಸ್ವಲ್ಪ ಕಾಲಾವಕಾಶ ಬೇಕು. ಸಂಪುಟ ವಿಸ್ತರಣೆ ಬೇಗ ಆದರೆ ಒಳ್ಳೆಯದು ಎಂದು ಸತೀಶ್ ಕಳೆದ ಶುಕ್ರವಾರ ಹೇಳಿಕೆ ನೀಡಿದ್ದರು.
ಅನುದಾನ ಇಲ್ಲದಿದ್ದರೂ ಕೆಲಸ ನಿಂತಿಲ್ಲ
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂಬ ತಮ್ಮ ಹಿಂದಿನ ಆರೋಪಕ್ಕೂ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಹೆಚ್ಚಿನ ಅನುದಾನ ಬರುತ್ತಿತ್ತು. ಈಗ ಅನುದಾನ ಕಡಿಮೆಯಾಗಿದ್ದರೂ ಯಾವುದೇ ಕೆಲಸ ನಿಂತಿಲ್ಲ. ಸಾಲಮನ್ನಾಕ್ಕೆ ಅನುದಾನದ ನಮ್ಮ ಹಣವನ್ನೇ ನೀಡಿದ್ದೇವೆ. ಹೀಗಾಗಿ ಸ್ವಲ್ಪ ತೊಂದರೆಯಾಗಿದೆ ಎಂದು ಅವರು ವಿವರಿಸಿದ್ದಾರೆ.
ಸಿದ್ದರಾಮಯ್ಯ ಆಡಳಿತದಲ್ಲಿ 40 ಕೋಟಿ ರೂ. ಅನುದಾನ ಬರುತ್ತಿತ್ತು. ಈಗ 10 ಕೋಟಿ ರೂ. ಮಾತ್ರ ಸಿಗುತ್ತಿದೆ ಎಂದು ಅವರು ಹೇಳಿದ್ದರು.
ಜಾರಕಿಹೊಳಿ ಸಹೋದರರ ವಿರುದ್ಧ ರಾಜಕೀಯ ದಾಳ ಉರುಳಿಸಿದ ಡಿ.ಕೆ.ಶಿ
ಎಂಇಎಸ್ಗೆ ಮಹತ್ವ ಬೇಡ
ಮಹಾರಾಷ್ಟ್ರ ಏಕೀಕರಣ ಸಮಿತಿ ಡಿ.10ರಂದು ಮಹಾಮೇಳ ಆಯೋಜನೆ ಮಾಡಿದೆ. ಈ ಕುರಿತು ಮಾತನಾಡಿದ ಸತೀಶ್, ಎಂಇಎಸ್ನವರು ಪ್ರತಿ ವರ್ಷ ಮಹಾಮೇಳ ಆಯೋಜಿಸುತ್ತಾರೆ. ನಾವು ಅದಕ್ಕೆ ಮಹತ್ವ ಕೊಡುವ ಅಗತ್ಯವಿಲ್ಲ. ಸ್ಥಳೀಯ ಜನಪ್ರತಿನಿಧಿಗಳ ಬೆಂಬಲವೂ ಅದಕ್ಕೆ ಇಲ್ಲ. ಅದೊಂದು ಸಂಘಟನೆಯಷ್ಟೇ. ನಾವು ಅದನ್ನು ದೊಡ್ಡದಾಗಿ ಬಿಂಬಿಸುವುದು ಬೇಕಿಲ್ಲ ಎಂದಿದ್ದಾರೆ.
ವಾಮಾಚಾರಕ್ಕೆ ಬಳಸಿದ ಲಿಂಬೆಹಣ್ಣಿನಲ್ಲಿ ಶರಬತ್ ಮಾಡಿ ಕುಡಿದ ಶಾಸಕ
ಕಾಂಗ್ರೆಸ್ ತೊರೆಯುವುದಿಲ್ಲ
ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ವರದಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಯಾರೂ ಎಲ್ಲಿಗೂ ಹೋಗುವುದಿಲ್ಲ. ಬಿಜೆಪಿಯವರು ಕಳೆದ ಆರು ತಿಂಗಳಿನಿಂದ ಕಾಂಗ್ರೆಸ್ನವರು ತಮ್ಮ ಪಕ್ಷಕ್ಕೆ ಬರಲು ಸಿದ್ಧರಾಗಿದ್ದಾರೆ ಎಂದು ಹೇಳುತ್ತಲೇ ಇದ್ದಾರೆ. ಆದರೆ ಇದುವರೆಗೂ ಆಗಿಲ್ಲ ಎಂದು ಹೇಳಿದ್ದಾರೆ.
ಸಂಪುಟ ವಿಸ್ತರಣೆ ಮೇಲೆ ಕಣ್ಣು
ಸಮ್ಮಿಶ್ರ ಸರ್ಕಾರದ ವಿರುದ್ಧ ಸಹೋದರ ರಮೇಶ್ ಜಾರಕಿಹೊಳಿ ಜತೆಗೂಡಿ ಬಂಡಾಯ ಎದ್ದಿದ್ದ ಸತೀಶ್, ಈ ಭಾರಿಯ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ತಮ್ಮನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಈ ಹಿಂದೆಯೇ ಅವರು ಬೇಡಿಕೆ ಇರಿಸಿದ್ದರು. ಶುಕ್ರವಾರ ಕೂಡ ಅವರು ತಾವು ಸಚಿವ ಸ್ಥಾನದ ಆಕಾಂಕ್ಷಿಯಾಗಿರುವುದಾಗಿ ಹೇಳಿಕೊಂಡಿದ್ದರು. ಅಲ್ಲದೆ ಸಂಪುಟ ವಿಸ್ತರಣೆ ವೇಳೆ ತಮ್ಮನ್ನು ಪರಿಗಣಿಸಿ ಸ್ಥಾನ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದಿದ್ದರು.