ಬೆಳಗಾವಿ ರಾಯಣ್ಣ ಪುತ್ಥಳಿ ಪ್ರತಿಷ್ಠಾಪನೆ ವಿವಾದಕ್ಕೆ ತೆರೆ
ಬೆಳಗಾವಿ, ಆಗಸ್ಟ್ 29: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಪ್ರತಿಷ್ಠಾಪನೆ ವಿವಾದಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಎಡಿಜಿಪಿ ಅಮರಕುಮಾರ್ ಪಾಂಡೆ ಅವರು ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ.
ಎಡಿಜಿಪಿ ಅಮರಕುಮಾರ ಪಾಂಡೆ ಕನ್ನಡಿಗ- ಮರಾಠಿಗ ಭಾಷಿಕ ಮುಖಂಡರ ಜೊತೆ ನಿನ್ನೆ ಸಂಜೆ ನಡೆಸಿದ ಸಭೆಯು ಸಫಲವಾಗಿದೆ. ಪೀರನವಾಡಿಯ ಲಕ್ಷ್ಮೀ ಮಹಲ್ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರ ನಾಯಕರ ಸಭೆಯಲ್ಲಿ ಸೌಹಾರ್ದಯುತ ಸಲಹೆಗಳು ಪ್ರಸ್ತಾಪವಾಗಿ ವಿವಾದಕ್ಕೆ ಬಹುತೇಕ ತೆರೆಬಿದ್ದಿದೆ.
ರಾಯಣ್ಣ ಅಭಿಮಾನಿಗಳು ಪ್ರತಿಷ್ಠಾಪಿಸಿದ ಸ್ಥಳದಲ್ಲೇ ರಾಯಣ್ಣ ಪ್ರತಿಮೆ ಇರಲು ಮರಾಠಿ ಭಾಷಿಕರು ಒಪ್ಪಿಗೆ ಕೊಟ್ಟಿದ್ದಾರೆ. ಮೂರ್ತಿ ಪ್ರತಿಷ್ಠಾಪಿಸಿದ ವೃತ್ತಕ್ಕೆ 'ಶಿವಾಜಿ ವೃತ್ತ' ಎಂದು ನಾಮಕರಣ ಮಾಡಲು ಕನ್ನಡಪರ ಮುಖಂಡರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಡಿಸಿ ಎಂ.ಜಿ.ಹಿರೇಮಠ, ಎಡಿಜಿಪಿ ಅಮರಕುಮಾರ್ ಪಾಂಡೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪೀರನವಾಡಿ ವಿವಾದಕ್ಕೆ ಸೌಹಾರ್ದತೆಯ ತೆರೆ ಬಿದ್ದಿದೆ.

ಪೀರನವಾಡಿಯಲ್ಲಿ ಗುರುವಾರ ಮಧ್ಯರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದು, ಎಂಇಎಸ್ ಕಾರ್ಯಕರ್ತರು ಹಾಗೂ ಕನ್ನಡ ಪರ ಸಂಘಟನೆ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿತ್ತು. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಲಾಠಿ ಚಾರ್ಜ್ ಕೂಡ ನಡೆಸಿದ್ದರು. ಇದೀಗ ಈ ಎರಡೂ ಸಂಘಟನೆಗಳ ನಡುವೆ ಸಂಧಾನ ಮಾತುಕತೆ ನಡೆಸಿದ್ದು, ಸಂಧಾನ ಯಶಸ್ವಿಯಾಗಿದೆ.












Click it and Unblock the Notifications