ರಮೇಶ ಜಾರಕಿಹೊಳಿ ಟ್ರ್ಯಾಕ್ಟರ್ ಬಾಡಿಗೆ ಹಗರಣದ ಬಗ್ಗೆ ಬಾಯಿ ಬಿಡಲಿ: ಸತೀಶ
ಬೆಳಗಾವಿ, ಅಕ್ಟೋಬರ್ 29: "ರಮೇಶ ನನ್ನ ಬಂಡವಾಳ ಬಯಲು ಮಾಡುವ ಮುನ್ನ ಗೋಕಾಕ ನಗರ ಪಾಲಿಕೆಗೆ 1200 ರುಪಾಯಿಯಂತೆ ಟ್ಯಾಕ್ಟರ್ ಬಾಡಿಗೆ ನೀಡಿರುವುದರ ಬಗ್ಗೆ ಮೊದಲು ಹೇಳಲಿ. ಒಂದು ಟ್ರಿಪ್ ಟ್ರ್ಯಾಕ್ಟರ್ ಬಾಡಿಗೆ ನಾನೂರು ರುಪಾಯಿ ಇದೆ. ಆದರೆ 1200 ರುಪಾಯಿಯಂತೆ ಟ್ಯಾಕ್ಟರ್ ಬಾಡಿಗೆಗೆ ನೀಡಿದ್ದಾರೆ" ಎಂದು ಸಹೋದರನ ವಿರುದ್ಧ ಮಾಜಿ ಸಚಿವ ಸತೀಶ ಜಾರಕಿಹೊಳಿ ಹೊಸ ಬಾಂಬ್ ಹಾಕಿದ್ದಾರೆ.
ಬೆಳಗಾವಿಯಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ನಾಲಗೆ ಉದ್ದ ಇರುತ್ತದೆ. ಅದು ಒಳಗೆ ಇರುವುದಿಲ್ಲ, ಹೊರಗೆ ಇರುತ್ತದೆ. ಇದು ನಮಗೆ ಹೊಸದಲ್ಲ. ಅವನ ಮಾತಿಗೆ ಬೆಲೆ ನೀಡುವ ವ್ಯಕ್ತಿ ನಾನಲ್ಲ. ಅದಕ್ಕಿಂತ ಬಂಡವಾಳ ಮತ್ಯಾವುದಾದರೂ ಇದೆಯಾ ಎಂದು ಪ್ರಶ್ನಿಸಿದರು. ಟ್ರ್ಯಾಕ್ಟರ್ ಬಂಡವಾಳ ಮೊದಲು ರಮೇಶ ಬಯಲು ಮಾಡಲಿ. ನಮ್ಮ ಬಂಡವಾಳ ಏನೂ ಇಲ್ಲ. ಇದ್ದರೆ ಅದಕ್ಕೆ ನಾವು ಉತ್ತರ ಕೊಡುತ್ತೇವೆ ಎಂದರು.
ಬೇರೆ ಬೇರೆ ನಿಟ್ಟಿನಲ್ಲಿ ಗೋಕಾಕ ಜನ ಅಸಮಾಧಾನದಿಂದ ಇದ್ದಾರೆ. ಎಲ್ಲರನ್ನೂ ಒಟ್ಟಿಗೆ ಸೇರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಗೋಕಾಕ ಉಪಚುನಾವಣೆ ಸಹೋದರರ ನಡುವೆಯಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಅಷ್ಟೇ. ವೈಯಕ್ತಿಕ ಚುನಾವಣೆ ಎನ್ನಲು ಸಾಧ್ಯವಿಲ್ಲ ಎಂದು ಹೇಳಿದರು.
"ಖಾಲಿ ಕೈ ಸಾಹುಕಾರ ರಮೇಶ್ ಜಾರಕಿಹೊಳಿಗೆ ಎಂಥ ಐಟಿ ಭಯ?"
ಅಂಬಿರಾವ್ ಮೊದಲಿನಿಂದಲೂ ಎಲ್ಲದರಲ್ಲೂ ಹಸ್ತ ಕ್ಷೇಪ ಮಾಡುತ್ತಾನೆ ಎಂಬ ಆರೋಪ ಇದೆ. ಈ ಉಪಚುನಾವಣೆ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎನ್ನುವುದನ್ನು ಕಾದು ನೋಡಬೇಕಷ್ಟೆ. ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಮ್ಮ ಪಕ್ಷದಿಂದ ಪ್ರಚಾರ ಮಾಡಲು ಬರುತ್ತಾರೆ. ಜತೆಗೆ ಸಿಎಂ ಸೇರಿದಂತೆ ಮಂತ್ರಿ ಮಂಡಲವೇ ಪ್ರಚಾರಕ್ಕೆ ಬರುತ್ತದೆ. ಅದು ಸ್ವಾಭಾವಿಕ. ಕಾಂಗ್ರೆಸ್ ಕಡೆಯಿಂದಲೂ ಪ್ರಮುಖ ನಾಯಕರು ಬರುತ್ತಾರೆ ಎಂದರು.
ಗೋಕಾಕದ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಅವನು ಬದ್ಧತೆ ಇಲ್ಲದ ರಾಜಕಾರಣಿ. ಅವನ ಹೇಳಿಕೆಗೆ ಪ್ರತಿ ಸಾರಿ ಉತ್ತರ ಕೊಡಲು ಸಾಧ್ಯವಿಲ್ಲ. ನಮ್ಮ ಮಿತಿಯಲ್ಲಿ ಹೇಳಿಕೆ ನೀಡಬೇಕು ಎಂದು ಸತೀಶ ಹೇಳಿದರು.
ಒಂದ ಲಕ್ಷ ಜನರನ್ನು ಸೇರಿಸಲು ಯಾವುದೇ ವ್ಯಕ್ತಿ ಹಾಗೂ ಪಕ್ಷಕ್ಕೆ ನಾಲ್ಕು ಜಿಲ್ಲೆಯಿಂದ ಜನ ಸೇರಿಸಬೇಕು. ನಿಜವಾದ ರಾಜಕಾರಣಿ ಹತ್ತು ಸಾವಿರ ಜನ ಸೇರಿಸಬಹುದು. ರಮೇಶ ಜಾರಕಿಹೊಳಿ ಮಾಧ್ಯಮಕ್ಕೆ, ರಾಜ್ಯಕ್ಕೆ ಹೀರೋ ಇರಬಹುದು. ಆದರೆ ನಮ್ಮ ಮುಂದೆ ಅವನು ಬಿಗ್ ಜೀರೋ ಎಂದು ಯಾವಾಗಲೋ ಹೇಳಿದ್ದೇನೆ ಎಂದರು.
ನ್ಯಾಯಾಲಯದ ಆದೇಶ ಬೇಗ ಇತ್ಯರ್ಥವಾಗುವುದನ್ನೇ ಕಾಯುತ್ತಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗಿತ್ತು. ಆದರೆ ಈಗ ಒಂದು ಹಂತದಲ್ಲಿ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇವೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಸತೀಶ ಜಾರಕಿಹೊಳಿ ಹೇಳಿದರು.