ರಮೇಶ್ ಜಾರಕಿಹೊಳಿ ರಾಜೀನಾಮೆಯಲ್ಲಿ ಆಶ್ಚರ್ಯವೇನಿಲ್ಲ!
ಬೆಳಗಾವಿ, ಜುಲೈ 01 : 'ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಅನಿರೀಕ್ಷಿತವೇನಲ್ಲ, ಅದರಲ್ಲಿ ಅಚ್ಚರಿಯೂ ಇಲ್ಲ' ಎಂದು ಅರಣ್ಯ ಸಚಿವ, ರಮೇಶ್ ಜಾರಕಿಹೊಳಿ ಸಹೋದರ ಸತೀಶ್ ಜಾರಕಿಹೊಳಿ ಹೇಳಿದರು.
ಇಬ್ಬರು ಕಾಂಗ್ರೆಸ್ ಶಾಸಕರ ರಾಜೀನಾಮೆ ಬಳಿಕ ಬೆಳಗಾವಿಯಲ್ಲಿ ಸೋಮವಾರ ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ನಾಯಕರ ಜೊತೆ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, 'ಈ ಇಬ್ಬರು ಶಾಸಕರ ಮಾತ್ರವಲ್ಲ, ಇನ್ನೂ ಕೆಲವು ಶಾಸಕರು ರಾಜೀನಾಮೆ ನೀಡಿದರೂ ನಮ್ಮ ಪಕ್ಷಕ್ಕೇನು ತೊಂದರೆ ಇಲ್ಲ' ಎಂದರು.
'ರಮೇಶ್ ಜಾರಕಿಹೊಳಿ ರಾಜೀನಾಮೆ ಅನಿರೀಕ್ಷಿತವಲ್ಲ, ಅಚ್ಚರಿಯೂ ಅಲ್ಲ. ರಾಜೀನಾಮೆ ವಿಚಾರ ಹೊಸದೂ ಅಲ್ಲ. ಕಳೆದ 6 ತಿಂಗಳಿನಿಂದ ರಾಜೀನಾಮೆ ಸುದ್ದಿ ಕೇಳಿ ಬರುತ್ತಲೇ ಇತ್ತು. ಅಲ್ಲದೇ ಸುಮಾರು ಗಡುವು ಸಹ ನೀಡಿದ್ದರು' ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

'ರಾಜೀನಾಮೆ ಬಗ್ಗೆ ರಮೇಶ್ ಜಾರಕಿಹೊಳಿ ಅವರು ತೆಗೆದುಕೊಂಡಿರುವ ತೀರ್ಮಾನ ವೈಯಕ್ತಿಕವಾದದ್ದು. ಅವರ ಮನವೊಲಿಕೆ ಮಾಡುವ ಪ್ರಶ್ನೆಯೇ ಇಲ್ಲ' ಎಂದು ಸತೀಶ್ ಜಾರಕಿಹೊಳಿ ಅವರು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಚಟುವಟಿಕೆಗಳಿಂದ ದೂರವಾಗಿದ್ದ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಅವರು ಸೋಮವಾರ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಆದರೆ, ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ.












Click it and Unblock the Notifications