ಉತ್ತರ ಕರ್ನಾಟಕದ ಧರ್ಮಸ್ಥಳ ವೀರಭದ್ರೇಶ್ವರ ಜಾತ್ರೆಗೆ ಬನ್ನಿ
ರಾಮದುರ್ಗ, ಡಿಸೆಂಬರ್ 03: ಉತ್ತರ ಕರ್ನಾಟಕದ ಧರ್ಮಸ್ಥಳವೆಂದೆ ಖ್ಯಾತಿ ಪಡೆದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೊಡಚಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಡಿಸೆಂಬರ್ 3ರಿಂದ 7ರ ವರೆಗೆ ಅತ್ಯಂತ ವೈಭವದಿಂದ ಜರುಗಲಿದೆ.
ರಾಮದುರ್ಗ ತಾಲೂಕಿನಲ್ಲಿರುವ ಈ ವೀರಭದ್ರೇಶ್ವರ ದೇವಸ್ಥಾನವು ಉತ್ತರ ಕರ್ನಾಟಕದ ಧರ್ಮಸ್ಥಳವೆಂದು ಖ್ಯಾತಿ ಪಡೆದಿದೆ. ರಾಮದುರ್ಗದಿಂದ ಸುಮಾರು 15 ಕಿ.ಮಿ. ದೂರವಿರುವ ಗೊಡಚಿ ವೀರಭದ್ರೇಶ್ವರ ಖ್ಯಾತಿ ನಾಡಿನ ತುಂಬೆಲ್ಲಾ ಹರಡಿದ್ದು ರಾಜ್ಯ ಹಾಗೂ ಅಂತರಾಜ್ಯಗಳಿಂದ ಲಕ್ಷಾಂತರ ಭಕ್ತ ಸಮೂಹವೇ ಜಾತ್ರೆಗೆ ಹರಿದು ಬರುತ್ತದೆ.
ವರ್ಷಕ್ಕೊಮ್ಮೆ ಜರಗುವ ಈ ಜಾತ್ರೆಯಲ್ಲಿ ಬಳುವಳಿಕಾಯಿ ಹಾಗೂ ಬಾರೆಹಣ್ಣಿನ ಮಾರಾಟ ಜೋರಾಗಿರುವ ಕಾರಣದಿಂದ, ಈ ಜಾತ್ರೆಯನ್ನು ಬಳುವಳಿಕಾಯಿ ಜಾತ್ರೆ ಎಂದು ಕರೆಯುತ್ತಾರೆ.

ಮತ್ತೊಂದು ವಿಶೇಷ ಅಂದ್ರೆ ಸುಮಾರು 40 - 50 ಕಿಮೀ ದೂರದಿಂದ ಭಕ್ತರು ಎತ್ತಿನ ಗಾಡಿಯಲ್ಲಿ ಬರುತ್ತಾರೆ.
ಬಂದ ಭಕ್ತರು ಒಂದು ದಿನಗಳಲ್ಲಿ ಹಿಂತಿರುಗುವುದಿಲ್ಲ. 5 ದಿನಗಳ ಕಾಲ ಇಲ್ಲಿಯೇ ಬಿಡಾರ ಹೂಡುತ್ತಾರೆ. ಹೀಗಾಗಿ ಈ ಜಾತ್ರೆ ಮುಗಿಯುವರೆಗೆ ರಸ್ತೆಯ ತುಂಬೆಲ್ಲಾ ಎತ್ತಿನ ಗಾಡಿ, ಟ್ರ್ಯಾಕ್ಟರ್ ಸಾಲು ಸಾಲು ಕಾಣ ಸಿಗುತ್ತದೆ.
ಜೊತೆಗೆ ಬಂದ ಭಕ್ತರಿಗೆ ಮನರಂಜನೆ ನೀಡಲು ವಿವಿಧ ನಾಟಕ ಕಂಪನಿಗಳು ನಾಟಕ ಪ್ರದರ್ಶಿಸುತ್ತಾರೆ.ಒಂದು ತಿಂಗಳ ಕಾಲ ಈ ನಾಟಕ ಕಂಪನಿಗಳು ಇಲ್ಲಿ ನೆಲೆಯೂರುತ್ತಾರೆ.
ದೇವಸ್ಥಾನದ ಹಿನ್ನಲೆ: ರಾಮದುರ್ಗ ಈ ಹಿಂದೆ ಒಂದು ಸಂಸ್ಥಾನವಾಗಿತ್ತು. ಈ ಸಂಸ್ಥಾನವನ್ನು ಶಿಂಧೆ ವಂಶಸ್ಥರು ಆಳುತ್ತಿದ್ದರು. ಗೊಡಚಿ ವೀರಭದ್ರಶ್ವೇರ ರಾಮದುರ್ಗ ಸಂಸ್ಥಾನದ ಕುಲದೈವವಾಗಿತ್ತು. ಪ್ರತಿ ವರ್ಷವೂ ಅತ್ಯಂತ ವೈಭವದಿಂದ ಸಂಸ್ಥಾನದ ಮಂದಿ ಜಾತ್ರೆಯನ್ನು ಆಚರಿಸುತ್ತಾ ಬಂದಿದ್ದಾರೆ.
ಈಗಲೂ ಈ ಜಾತ್ರೆ ಸಂಸ್ಥಾನಿಕರ ವಂಶಸ್ಥರಾದ ಶಿಂಧೆ ಮನೆತನದವರ ಮುಂದಾಳ್ವತದಲ್ಲಿ ನಡೆಯುತ್ತದೆ. ದಕ್ಷ ಬ್ರಹ್ಮನ ಸಂಹಾರ ಮಾಡಲೆಂದು ಪರಶಿವನ ಅನುಗ್ರಹದಿಂದ ಅವತರಿಸಿದ ವೀರಭದ್ರೇಶ್ವರ ದಕ್ಷಬ್ರಹ್ಮ ಸಂಹಾರಕ್ಕಾಗಿ ರೌದ್ರಾವತಾರ ತಾಳಿ ಹೋರಾಡಿದ ವೀರ ಎಂಬುದನ್ನು ಇತಿಹಾಸ ಹೇಳುತ್ತದೆ.

ಡಿಸೆಂಬರ್ 3 ರಂದು ಸಂಜೆ 5 ಗಂಟೆಗೆ ವೀರಗಾಸೆ, ವೀರ ಪುರವಂತರು, ಸಂಬಾಳ, ನಂದಿಕೋಲು ಹಾಗೂ ಸಕಲ ವಾದ್ಯ ಮೇಳಗಳೊಂದಿಗೆ ವೀರಭದ್ರೇಶ್ವರ ಮಹಾರಥೋತ್ಸವಕ್ಕೆ ಚಾಲನೆ ಸಿಗಲಿದೆ.
ಅದೇ ದಿನ ಮಧ್ಯರಾತ್ರಿ ವೀರಭದ್ರೇಶ್ವರ ಹಾಗೂ ಭದ್ರಕಾಳಿ ಮಾತೆಗೆ 11 ಜನ ಶಾಸ್ತ್ರಿಗಳಿಂದ ಮಹಾಮಸ್ತಕಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಕುಂಕುಮಾರ್ಚನೆ ನಡೆಯಲಿದೆ. ಡಿಸೆಂಬರ್ 7 ರಂದು ಸಂಜೆ ರಥದ ಕಳಸ ಇಳಿಸಿದ ನಂತರ 6 ಗಂಟೆಗೆ ಲಕ್ಷ ದೀಪೋತ್ಸವ ಜರುಗಲಿದೆ.












Click it and Unblock the Notifications