ಬೆಳಗಾವಿಯಲ್ಲಿಂದು ರಾಹುಲ್ ಕಾಂಗ್ರೆಸ್ ಸಮಾವೇಶ
ಬೆಳಗಾವಿಯಲ್ಲಿ ಇಂದು(ಡಿ.17) ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಲಿದ್ದು, ಮೋದಿ ಭ್ರಷ್ಟಾಚಾರದ ವಿರುದ್ಧ ತಮ್ಮ ಬಳಿ ಸಾಕ್ಷ್ಯವಿದೆ ಎಂಬ ರಾಹುಲ್ ಹೇಳಿಕೆ ಹಿನ್ನೆಲೆಯಲ್ಲೂ ಈ ಸಮಾವೇಶ ಮಹತ್ವದ್ದಾಗಿದೆ.
ಬೆಳಗಾವಿ ಡಿಸೆಂಬರ್ 17: ನೋಟ್ ಬ್ಯಾನ್ ಅದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಕಪ್ಪುಹಣದ ವಿರುದ್ಧ ಅಪನಗದೀಕರಣವನ್ನು ಬೆಳಗಾವಿಯಲ್ಲಿ ಸಮರ್ಥಿಸಿಕೊಂಡಿದ್ದರು. ಇದೇ ಸ್ಥಳದಲ್ಲಿಂದು (ಶನಿವಾರ) ಕಾಂಗ್ರೆಸ್ ಸಮಾವೇಶ ಹಮ್ಮಿಕೊಂಡಿದ್ದು ಬಿಜೆಪಿ ವಿರುದ್ಧ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾತನಾಡಲಿದ್ದಾರೆ.
ಸಮಾವೇಶದ ಸಿದ್ಧತೆ ಮತ್ತು ಭದ್ರತೆ ಕುರಿತು ಪರಿಶೀಲಿಸಿದ ಗೃಹಸಚಿವ ಡಾ. ಜಿ ಪರಮೇಶ್ವರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಧ್ಯಾಹ್ನ 2.30ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುವ ರಾಹುಲ್ ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಕ್ರೀಡಾಂಗಣ ತಲುಪಲಿದ್ದಾರೆ. ನಂತರ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದರು.[ವೈಯಕ್ತಿಕ ಟೀಕೆಯ ಮಧ್ಯೆ ಪ್ರಧಾನಿ ಮೋದಿಯನ್ನು ಭೇಟಿಯಾದ ರಾಹುಲ್]

ಅಪನಗದೀಕರಣ, ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ರಾಹುಲ್ ಮಾತನಾಡಲಿದ್ದು, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ಎದುರಿಸುವ ಕುರಿತು ಈ ಸಮಾವೇಶ ಹೊಸ ದಿಕ್ಕು ತೋರಲಿದೆ ಎಂದು ಅವರು ತಿಳಿಸಿದರು. ಮೋದಿ ಭ್ರಷ್ಟಾಚಾರದ ವಿರುದ್ಧ ತಮ್ಮ ಬಳಿ ಸಾಕ್ಷ್ಯವಿದೆ ಎಂಬ ರಾಹುಲ್ ಹೇಳಿಕೆ ಹಿನ್ನೆಲೆಯಲ್ಲೂ ಈ ಸಮಾವೇಶ ಮಹತ್ವ ಪಡೆದಿದೆ.
ಪ್ರತಿ ರಾಜ್ಯದಲ್ಲೂ ಇಂತಹ ಸಮಾವೇಶ ನಡೆಸಲು ನಿರ್ಧರಿಸಿದ್ದು, ಬೆಳಗಾವಿಯಲ್ಲಿ ಮೊದಲ ಸಮಾವೇಶವಾಗಿದೆ. ಸಮಾವೇಶದಲ್ಲಿ ರಾಜ್ಯ ಪ್ರಧಾನ ಉಸ್ತುವಾರಿ ದಿಗ್ವಿಜಯ ಸಿಂಗ್, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್, ಆಸ್ಕರ್ ಫರ್ನಾಂಡಿಸ್, ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡರಾದ ವೀರಪ್ಪ ಮೊಯ್ಲಿ ಸೇರಿದಂತೆ ಪಕ್ಷದ ಮುಖಂಡರು, ಸದಸ್ಯರು ಭಾಗವಹಿಸುವರು ಎಂದು ಪರಮೇಶ್ವರ್ ತಿಳಿಸಿದರು.












Click it and Unblock the Notifications