ಉಮೇಶ್ ಕತ್ತಿ ಕುಟುಂಬಕ್ಕೆ ಸಾಂತ್ವನ ಹೇಳಿದ ಪ್ರಹ್ಲಾದ್ ಜೋಶಿ
ಬೆಳಗಾವಿ ಸೆಪ್ಟಂಬರ್ 08: ದಿ. ಉಮೇಶ ಕತ್ತಿಯವರ ಮನೆಗೆ ಗುರುವಾರ ಭೇಟಿ ನೀಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಕತ್ತಿಯವರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದರು.
ಮಂಗಳವಾರ ಹೃದಯಾಘಾತದಿಂದ ನಿಧನರಾದ ಉಮೇಶ್ ಕತ್ತಿಯವರ ಅಂತ್ಯ ಸಂಸ್ಕಾರ ಬುಧವಾರ ಅವರ ಹುಟ್ಟೂರಾದ ಬೆಲ್ಲದ ಬಾಗೇವಾಡಿಯ ತೋಟದಲ್ಲಿ ಜರುಗಿತು. ಈ ವೇಳೆ ದೆಹಲಿಯಲ್ಲಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿಗೆ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿರಲಿಲ್ಲ.
ಹೀಗಾಗಿ ಗುರವಾರ ಬೆಲ್ಲದ ಬಾಗೇವಾಡಿಯಲ್ಲಿನ ಉಮೇಶ್ ಕತ್ತಿಯವರ ಮನೆಗೆ ಪ್ರಹ್ಲಾದ್ ಜೋಶಿ ಭೇಟಿ ನೀಡಿದರು. ಉಮೇಶ್ ಕತ್ತಿಯವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಕತ್ತಿಯವರ ಕುಟುಂಬದ ಸದಸ್ಯರಿಗೆ ಮತ್ತವರ ಅವರ ಬೆಂಬಲಿಗರಿಗೆ, ಸ್ಥಳೀಯ ಕಾರ್ಯಕರ್ತರಿಗೆ ಸಾಂತ್ವಾನ ಹೇಳಿದರು.

ರಾಜ್ಯ ಸರ್ಕಾರದಲ್ಲಿ ಹಿರಿಯ ಸಚಿವರಾಗಿದ್ದ ಉಮೇಶ್ ಕತ್ತಿಯವರು 8 ಬಾರಿ ಶಾಸಕರಾದವರು. ಕತ್ತಿಯವರಿಗೆ ಕ್ಷೇತ್ರದ ಜನರಿಂದ ಹೆಚ್ಚಿನ ಬೆಂಬಲವಿತ್ತು. ವಿಶೇಷವಾಗಿ ಉತ್ತರ ಕರ್ನಾಟಕದ ಅಭಿವೃದ್ದಿ ಕುರಿತು ಉಮೇಶ್ ಕತ್ತಿಯವರು ಅತೀವ ಕಾಳಜಿ ವ್ಯಕ್ತಪಡಿಸುತ್ತಿದ್ದರು. ಆ ಬಗ್ಗೆ ಸಾಕಷ್ಟು ಭಾರಿ ಮಾತನಾಡಿದ್ದರು ಎಂದು ಉಮೇಶ್ ಕತ್ತಿ ಹಾಗೂ ತಮ್ಮ ನಡುವಿನ ಆತ್ಮೀಯತೆಯ ಹಲವು ನೆನಪುಗಳನ್ನು ಈ ವೇಳೆ ಅವರು ಹಂಚಿಕೊಂಡರು.
ಉತ್ತರ ಕರ್ನಾಟಕವು ಒಂದು ಧ್ವನಿ ಕಳೆದುಕೊಂಡಿದೆ
ಕೇವಲ ಹಳೇ ಮೈಸೂರು ಭಾಗ ಮಾತ್ರವೇ ಕರ್ನಾಟಕವಲ್ಲ ಎಂದು ಉಮೇಶ ಕತ್ತಿಯವರು ಯಾವಾಗಲು ಹೇಳುತ್ತಿದ್ದರು. ಉಮೇಶ್ ಕತ್ತಿಯವರ ನಿಧನದಿಂದ ಉತ್ತರ ಕರ್ನಾಟಕ ಭಾಗದ ಒಂದು ಧ್ವನಿಯನ್ನ ಕಳೆದುಕೊಂಡಂತಾಗಿದೆ ಎಂದು ಪ್ರಹ್ಲಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕೇವಲ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತ್ರವಲ್ಲದೇ, ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಹಲವು ಬಿಜೆಪಿ ನಾಯಕರು ಗುರುವಾರ ಉಮೇಶ್ ಕತ್ತಿಯವರ ಸ್ವಗ್ರಾಮ ಬೆಲ್ಲದ ಬಾಗೇವಾಡಿಯ ಮನೆಗೆ ಭೇಟಿ ನೀಡಿದ್ದಾರೆ. ಕತ್ತಿಯವರ ಕುಟುಂಬಸ್ಥರಿಗೆ ನಾಯಕರು ಸಾಂತ್ವನ ಹೇಳಿದ್ದಾರೆ.












Click it and Unblock the Notifications