ಬೆಳಗಾವಿ: ಎಂಇಎಸ್ ಮಹಾ ಮೇಳಕ್ಕೆ ಅನುಮತಿ ನಿರಾಕರಣೆ, ಸೆಕ್ಷನ್ 144 ಜಾರಿ
ಬೆಳಗಾವಿ, ಡಿ. 19: ಚಳಿಗಾಲದ ಅಧಿವೇಶನದ ದಿನದಂದೇ ಮಹಾರಾಷ್ಟ್ರ ಏಕೀಕರಣ ಸಮಿತಿ ಆಯೋಜಿಸಿದ್ದ ಮಹಾ ಮೇಳವಾಕ್ಕೆ ಬೆಳಗಾವಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಈ ಹಿನ್ನೆಲೆ ಸಮಾವೇಶ ರದ್ದುಗೊಂಡಿದೆ.
ಮಹಾರಾಷ್ಟ್ರ ಏಕೀಕರಣ ಸಮಿತಿಗೆ (ಎಂಇಎಸ್) ತನ್ನ ಮಹಾ ಮೇಳವಾ ಸಮಾವೇಶವನ್ನು ವ್ಯಾಕ್ಸಿನ್ ಡಿಪೋ ಮೈದಾನ ಟಿಳಕವಾಡಿಯಲ್ಲಿ ನಡೆಸಲು ಆಯೋಜಿಸಿತ್ತು. ಇದಕ್ಕೆ ಬೆಳಗಾವಿ ಪೊಲೀಸರು ಅನುಮತಿ ನೀಡಿಲ್ಲ.
ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು, ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಡಸುವಂತಿಲ್ಲ ಎಂದು ನಿಷೇಧದ ಆದೇಶ ಹೊರಡಿಸಿದ್ದಾರೆ.

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನವನ್ನು ವಿರೋಧಿಸಿ ಎಂಇಎಸ್ ಈ ಹಿಂದೆಯೂ ಕಾರ್ಯಕ್ರಮ ಮಾಡಲು ಹೊರಟ್ಟಿತ್ತು. ಆದರೆ ಕಾರ್ಯಕ್ರಮವನ್ನು ನಡೆಸಲು ಎರಡನೇ ಬಾರಿಯೂ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಸಾಧ್ಯವಾಗಿಲ್ಲ.
ಕಳೆದ ವರ್ಷವೂ ಎಂಇಎಸ್ ಸಮಾವೇಶಕ್ಕೆ ಅನುಮತಿ ನಿರಾಕರಿಸಲಾಗಿತ್ತು, ಆದರೆ ಕನ್ನಡ ಹೋರಾಟಗಾರರೊಬ್ಬರು ಎಂಇಎಸ್ ಅಧ್ಯಕ್ಷ ದೀಪಕ್ ದಳವಿ ಅವರ ಮೇಲೆ ಕಪ್ಪು ಮಸಿ ಎಸೆದ ನಂತರ ಕಾರ್ಯಕ್ರಮ ನಡೆಸಲಾಗಿತ್ತು.
ಇನ್ನು, ಮಹಾಮೇಳ ನಡೆಯುವ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಇದೇ ವೇಳೆ ಎಂಇಎಸ್ ಸಮಾವೇಶಕ್ಕೆ ಅನುಮತಿ ನೀಡಿಲ್ಲ ಎಂದು ಮಾಹಿತಿ ನೀಡಿದ್ದು, ಮಹಾರಾಷ್ಟ್ರದ ರಾಜಕೀಯ ನಾಯಕರ ಪ್ರವೇಶವನ್ನೂ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಮಾವೇಶದ ಸ್ಥಳದ ಬಳಿ ಬಂದಿದ್ದ ಎಂಇಎಸ್ ಕಾರ್ಯಕರ್ತ ಬೆಳಗಾವಿ ಮಹಾನಗರ ಪಾಲಿಕೆ ಕಾರ್ಪೊರೇಟರ್ ಚುನಾಯಿತ ರವಿ ಸಾಳುಂಕೆ ಹಾಗೂ ನೇತಾಜಿ ಜಾಧವ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೋಮವಾರದಿಂದ ನಡೆಯುತ್ತಿರುವ ವಿಧಾನಸಭೆ ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.












Click it and Unblock the Notifications