ಬೆಳಗಾವಿ; ತವರಿಗೆ ಹೋದ ಪತ್ನಿ; ಇಬ್ಬರು ಮಕ್ಕಳೊಂದಿಗೆ ಪತಿ ಆತ್ಮಹತ್ಯೆ
ಬೆಳಗಾವಿ, ಜುಲೈ 28: ಪತ್ನಿ ತಮ್ಮನ್ನು ಬಿಟ್ಟು ತವರಿಗೆ ಹೋಗಿದ್ದರಿಂದ ಮನನೊಂದು ಇಬ್ಬರು ಮಕ್ಕಳ ಜೊತೆಗೆ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಾದಗೂಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಮ್ಮಣ್ಣ ಗಿಡ್ಡಾಳೆ (35) ಎಂಬುವರು ತಮ್ಮ ಮಕ್ಕಳಾದ ಚಿನ್ನು (2), ನಿರಂಜನ್ (10) ಅವರಿಗೆ ವಿಷ ಉಣಿಸಿ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೆಂಡತಿ ಜೊತೆ ಜಗಳ ನಡೆದಿದ್ದು, ಪತ್ನಿ ತವರು ಮನೆಗೆ ಹೋಗಿದ್ದರು. ಪತ್ನಿಯನ್ನು ಕರೆದುಕೊಂಡು ಬರಲು ತಮ್ಮಣ್ಣ ನಿನ್ನೆ ಹೆಂಡತಿಯ ತವರು ಮನೆ ಹುಕ್ಕೇರಿ ತಾಲೂಕಿನ ಕೇಸ್ತಿ ಗ್ರಾಮಕ್ಕೆ ಹೋಗಿದ್ದರು. ಆದರೆ ಪತ್ನಿಯ ಮನೆಯವರು ತಮ್ಮಣ್ಣನನ್ನು ಅವಮಾನಿಸಿ ವಾಪಸ್ ಕಳಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾತ್ರಿ ತಾನೂ ವಿಷ ಕುಡಿದು ಮಕ್ಕಳಿಗೂ ಉಣಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಹುಕ್ಕೇರಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications