ಯೋಗಿಯ ಬಿಟ್ಟಿ ಉಪದೇಶ ಬೇಕಾಗಿಲ್ಲ : ಸಿದ್ದು ಕೆಂಡಾಮಂಡಲ
Recommended Video

ಬೆಳಗಾವಿ, ಡಿಸೆಂಬರ್ 22 : "ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಹದಗೆಟ್ಟಿರುವಷ್ಟು ಕಾನೂನು ಮತ್ತು ಸುವ್ಯವಸ್ಥೆ ಬೇರೆ ಯಾವ ರಾಜ್ಯದಲ್ಲಿಯೂ ಹದಗೆಟ್ಟಿಲ್ಲ. ನಾವು ಉತ್ತರ ಪ್ರದೇಶ ಮುಖ್ಯಮಂತ್ರಿಯಿಂದ ಕಾನೂನು ಮತ್ತು ಸುವ್ಯವಸ್ಥೆಯ ಪಾಠ ಕಲಿಯಬೇಕೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಂಡಾಮಂಡಲವಾಗಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಭಾರತೀಯ ಜನತಾ ಪಕ್ಷದ 50ನೇ ದಿನದ ಪರಿವರ್ತನಾ ಯಾತ್ರೆಯ ಬೃಹತ್ ಸಮಾವೇಶ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಕರ್ನಾಟಕದಲ್ಲಿ ಹಿಂದೂಗಳ ಕೊಲೆಗಳಾಗುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆ ಎಕ್ಕುಟ್ಟಿ ಹೋಗಿದೆ ಎಂದು ಕಿಚ್ಚು ಹಚ್ಚಿದ್ದರು.
ಬಿಜೆಪಿಯ ಪರಿವರ್ತನಾ ಯಾತ್ರೆಗೆ ಪ್ರತಿಯಾಗಿ, ಕರ್ನಾಟಕದಲ್ಲಿ ಸರಕಾರ ಮಾಡಿರುವ ಅಭಿವೃದ್ಧಿ ಕಾರ್ಯವನ್ನು ಜನರೆದಿರು ಸಾರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ನವ ಕರ್ನಾಟಕ ನಿರ್ಮಾಣ' ಆಯೋಜಿಸಿ ಕರ್ನಾಟಕದ ಉದ್ದಗಲಕ್ಕೂ ಸುತ್ತುತ್ತಿದ್ದಾರೆ.

ಹುಬ್ಬಳ್ಳಿಯಲ್ಲಿ ಮೂರು ಸಾವಿರ ಮಠಕ್ಕೆ ಭೇಟಿ ನೀಡಿದ ನಂತರ, ಬೃಹತ್ ಸಮಾವೇಶವನ್ನು ಉದ್ದೇಶಿಸಿ ಉತ್ತೇಜನಕಾರಿ ಭಾಷಣ ಮಾಡಿದ್ದ ಯೋಗಿ ಆದಿತ್ಯನಾಥ್ ಅವರು, ಜಾತಿ, ಧರ್ಮದ ಹೆಸರಿನಲ್ಲಿ ಕರ್ನಾಟಕದ ಜನರನ್ನು ಸಿದ್ದರಾಮಯ್ಯ ಒಡೆಯುತ್ತಿದ್ದಾರೆ ಎಂದು ಕೂಡ ಆರೋಪಿಸಿದ್ದರು.
ಬಿಜೆಪಿ ಋಣಾತ್ಮಕ ಮತ್ತು ಕೋಮುವಾದಿ ರಾಜಕಾರಣ ಮಾಡುತ್ತಿದೆ. ರಾಜ್ಯದಲ್ಲಿ ಅಸ್ಥಿರತೆ ಸೃಷ್ಟಿಸಲು ಉಗ್ರವಾದಕ್ಕೆ ದಾರಿ ಮಾಡಿಕೊಡುತ್ತಿದೆ. ಕರ್ನಾಟಕದ ವಿರುದ್ಧ ಆದಿತ್ಯನಾಥ್ ಮಾಡಿರುವ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಚಾಟಿ ಬೀಸಿದ್ದಾರೆ.
"BJP is pursuing only Negative & Communal Politics. Their only focus is #BJPUgraAgenda to create instability in the state. We condemn Adityanath's statements against Karnataka": @dineshgrao #YogiInsultsKarnataka pic.twitter.com/4ySTaiKEar
— Karnataka Congress (@INCKarnataka) December 22, 2017
ಯೋಗಿ ವಿರುದ್ಧ ಟ್ವಿಟ್ಟರ್ ಅಭಿಯಾನ : ಇದಕ್ಕೆ ಪ್ರತಿಯಾಗಿ #YogiInsultsKarnataka ಎಂಬ ಹ್ಯಾಶ್ ಟ್ಯಾಗ್ ನಿಂದ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ತಂಡ ಭಾರತೀಯ ಜನತಾ ಪಕ್ಷ ಮತ್ತು ಯೋಗಿ ಆದಿತ್ಯನಾಥ್ ಮೇಲೆ ಟ್ವಿಟ್ಟರಿನಲ್ಲಿ ಅಭಿಯಾನ ಆರಂಭಿಸಿತ್ತು.
"ನನ್ನ ಹೆಸರಿನಲ್ಲಿಯೇ ರಾಮ ಎಂದಿದೆ. ನಾವು ಟಿಪ್ಪು ಜಯಂತಿ ಮಾತ್ರವಲ್ಲ, ಹನುಮಾನ್, ವಾಲ್ಮಿಕಿ, ಬಸವ, ಕನಕದಾಸ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನೂ ಮಾಡಿದ್ದೇವೆ. ಕೋಮು ಸೌಹಾರ್ದವನ್ನು ಕದಡುವ ಬಿಜೆಪಿಯಿಂದ ಬಿಟ್ಟಿ ಸಲಹೆ ಪಡೆಯುವ ಅಗತ್ಯವಿಲ್ಲ" ಎಂದು ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಯಡಿಯೂರಪ್ಪ ವಿರುದ್ಧ ಎಚ್ಡಿಕೆ ವಾಗ್ದಾಳಿ : ಬೆಳಗಾವಿ ಜಿಲ್ಲೆಯಲ್ಲಿ ಹುಟ್ಟಿದರೂ ಹೆಚ್ಚಾಗಿ ಗೋವಾದಲ್ಲಿ ಹರಿಯುವ ಮಹದಾಯಿ ನೀರನ್ನು ಉತ್ತರ ಕರ್ನಾಟಕಕ್ಕೆ ಹರಿಸುವುದಾಗಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ 'ಭಗೀರಥ' ಶಪಥ ಮಾಡಿರುವುದು ಕೂಡ ವಿರೋಧ ಪಕ್ಷಗಳಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಕುಡಿಯುವ ನೀರಿಗಾಗಿ ಕರ್ನಾಟಕದೊಡನೆ ಮಾತುಕತೆಗೆ ಸಿದ್ಧವಿರುವುದಾಗಿ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು ಪತ್ರ ಬರೆದಿರುವುದನ್ನು ಪ್ರಸ್ತಾಪಿಸಿದ್ದ ಯಡಿಯೂರಪ್ಪನವರು, ಮಹದಾಯಿ ನದಿಯ ನೀರನ್ನು ಉತ್ತರ ಕರ್ನಾಟಕಕ್ಕೆ ಹರಿಸಿಯೇ ಹರಿಸುತ್ತೇನೆ ಎಂದು ಅಬ್ಬರಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು, ಇಷ್ಟು ವರ್ಷ ಏನೂ ಮಾಡದೆ ಸುಮ್ಮನಿದ್ದು, ಚುನಾವಣೆ ಹತ್ತಿರ ಬಂದಾಗ, ಮಹದಾಯಿ ನೀರು ಹರಿಸುವುದಾಗಿ ಹೇಳಿ ರಾಜಕೀಯ ಮೈಲೇಜ್ ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications