ಶಿವರಾತ್ರಿಯಂದು ನಾಗಾ ಸಾಧುಗಳಿಂದ ಕರ್ನಾಟಕ ಚುನಾವಣೆಯ ಭವಿಷ್ಯ
Recommended Video
ಹುಕ್ಕೇರಿ (ಬೆಳಗಾವಿ ಜಿಲ್ಲೆ), ಫೆಬ್ರವರಿ 13: ಒಂದು ಕಡೆ ಮಾಧ್ಯಮಗಳು ಮತ್ತಿತರ ಸಂಸ್ಥೆಗಳ ಸಮೀಕ್ಷೆ, ಮತ್ತೊಂದು ಕಡೆಯಿಂದ ನಾಗಾ ಸಾಧುಗಳ ಭವಿಷ್ಯ ರಾಜ್ಯ ವಿಧಾನಸಭಾ ಚುನಾವಣೆ ಬಗ್ಗೆ ಕುತೂಹಲ ಹೆಚ್ಚಾಗುವಂತೆ ಮಾಡುತ್ತಿದೆ. ಇದೀಗ ಚುನಾವಣೆ ಭವಿಷ್ಯಕ್ಕೆ ಮಂಗಳವಾರ ಮತ್ತೊಂದು ಸೇರ್ಪಡೆಯಾಗಿದೆ.
ಯಡಿಯೂರಪ್ಪ ಮನೆಗೆ ಬಂದು 18 ನಾಗಸಾಧುಗಳು ಹರಸಿದ್ದು ಹೀಗೆ
ಹೌದು, ಶಿವರಾತ್ರಿಯ ಪವಿತ್ರ ದಿನವಾದ ಮಂಗಳವಾರ ಇಲ್ಲಿನ ಹಿರೇಮಠಕ್ಕೆ ಭೇಟಿ ನೀಡಿದ ನಾಗಾ ಸಾಧುಗಳು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಬಳಿ, ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕೇಸರಿ ಪಕ್ಷ ಹೇಗೆ ಅದ್ಭುತವಾದ ಜಯ ಸಾಧಿಸಿತೋ ಅದೇ ರೀತಿ ಕರ್ನಾಟಕದಲ್ಲೂ ಸಾಧನೆ ಮಾಡುವುದು ನಿಶ್ಚಿತ ಎಂದು ಹೇಳಿದ್ದಾರಂತೆ.
ಹೇಳಿ ಕೇಳಿ ಶಿವರಾತ್ರಿ. ಇನ್ನು ನಾಗಾಸಾಧುಗಳ ಬಗ್ಗೆ ಉತ್ತರ ಭಾರತದಲ್ಲಿ ವಿಪರೀತ ಶ್ರದ್ಧೆ ಹಾಗೂ ಭಕ್ತಿ. ಅಂಥವರು ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಗೆಲುವು ಸಾಧಿಸಲಿದೆ ಎನ್ನುವ ಮೂಲಕ ಮತ್ತೂ ಕುತೂಹಲ ಹೆಚ್ಚು ಮಾಡಿದ್ದಾರೆ. ಎಂಥ ಮಹಾ ಮಹಿಮಾನ್ವಿತರಾದರೂ ಮತದಾರ ಪ್ರಭುಗಳ ಅಪ್ಪಣೆಯೇ ಅಂತಿಮ ಅಲ್ಲವೆ! ಅದಕ್ಕೋಸ್ಕರ ಉತ್ತರ ಗೊತ್ತಾಗಲು ಇನ್ನೂ ಕೆಲ ತಿಂಗಳು ಕಾಯಲೇಬೇಕು.
ಯಡಿಯೂರಪ್ಪ ಮನೆಗೆ ಹದಿನೆಂಟು ನಾಗಾ ಸಾಧುಗಳು
ಕಳೆದ ಅಕ್ಟೋಬರ್ ನಲ್ಲಿ ವಾರಣಾಸಿಯಿಂದ ದೇಶ ಸಂಚಾರ ಮಾಡಿಕೊಂಡು ಬಂದಿದ್ದ ಹದಿನೆಂಟು ನಾಗಾ ಸಾಧುಗಳು ಬೆಂಗಳೂರಿನಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಮನೆ ಭೇಟಿ ನೀಡಿ, ಆಶೀರ್ವಾದ ಮಾಡಿ ಹೋಗಿದ್ದರು. ಈ ವಿಚಾರವನ್ನು ಸ್ವತಃ ಯಡಿಯೂರಪ್ಪನವರು ಮಾಧ್ಯಮಗಳಿಗೆ ತಿಳಿಸಿದ್ದರು.
ನಾಲ್ವರು ನಾಗಾ ಸಾಧುಗಳು ಭವಿಷ್ಯ ನುಡಿದಿದ್ದರು
ಇನ್ನು ಡಿಸೆಂಬರ್ ನಲ್ಲಿ ಚಿತ್ರದುರ್ಗ ಜಿಲ್ಲೆ, ಭರಮಸಾಗರದ ಬಿಜೆಪಿ ಕಾರ್ಯಕರ್ತ ಕಿರಣ್ ಎನ್ನುವವರ ಮನೆಗೆ ಅಚಾನಕ್ ಆಗಿ ನಾಲ್ವರು ನಾಗಸಾಧುಗಳು ಆಗಮಿಸಿದ್ದರು. ದೇಶ ಸಂಚಾರ ಮಾಡುತ್ತಾ ಈ ಸಾಧುಗಳು ಹರಿದ್ವಾರದಿಂದ ರಾಮೇಶ್ವರಕ್ಕೆ ತೆರಳುವ ಮಾರ್ಗ ಮಧ್ಯೆ ಕಿರಣ್ ಅನ್ನುವವರ ಮನೆಗೆ ಬಂದಿದ್ದಾರೆ. 2018ರ ಚುನಾವಣೆಯಲ್ಲಿ ಬಿಜೆಪಿ ನಿಚ್ಚಳ ಬಹುಮತಗಳಿಸಲಿದೆ. ಹಿಂದುತ್ವದ ಅಲೆಯುಳ್ಳ ಪಕ್ಷ ಚುನಾವಣೆಯಲ್ಲಿ ಪ್ರಚಂಡ ಜಯಭೇರಿ ಬಾರಿಸಲಿದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವುದು ಖಚಿತ ಎನ್ನುವ ಭವಿಷ್ಯವನ್ನು ಈ ಸಾಧುಗಳು ನುಡಿದಿದ್ದರು.
ಕೈ ಮುಷ್ಟಿಕಟ್ಟಿ, ಕಮಲ ಮುದುಡುವುದು, ಹೊಸ ತೆನೆಗೆ ದಾರಿಯಾಗುವುದು
ತುಮಕೂರಿಗೆ ಕೇದಾರನಾಥ್ ನಿಂದ ಆಗಮಿಸಿದ್ದ ನಾಗಾ ಸಾಧುಗಳನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಮತ್ತು ಎಚ್ ಡಿ ರೇವಣ್ಣ ಜೊತೆಯಾಗಿ ಹೋಗಿ ಭೇಟಿ ಮಾಡಿ, ಆಶೀರ್ವಾದ ಪಡೆದುಕೊಂಡಿದ್ದರು. ತಮ್ಮ ಭವಿಷ್ಯದ ಬಗ್ಗೆ ಸಹೋದರದ್ವಯರು ಕೇಳಿದಾಗ, ಹಿಮಾಲಯಕ್ಕೆ ಹೋಗಿ ಧ್ಯಾನ ಮಾಡಿ ನಂತರ ತಿಳಿಸುತ್ತೇನೆಂದು, ಕುಮಾರಸ್ವಾಮಿಯ ಆಪ್ತರ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡು ಹೋಗಿದ್ದರು. ಆ ನಂತರ ದೂರವಾಣಿ ಕರೆ ಮಾಡಿ, "ಕೈ ಮುಷ್ಟಿಕಟ್ಟಿ, ಕಮಲ ಮುದುಡುವುದು, ಹೊಸ ತೆನೆಗೆ ದಾರಿಯಾಗುವುದು" ಎಂದು ಹೇಳಿದ್ದರು.
ಸಿ.ಟಿ.ರವಿ ಮನೆಗೆ ಭೇಟಿ
ಕಳೆದ ವರ್ಷದ ಡಿಸೆಂಬರ್ ನಲ್ಲಿ ಚಿಕ್ಕಮಗಳೂರಿನ ಬಿಜೆಪಿ ಶಾಸಕ ಸಿ.ಟಿ.ರವಿ ಅವರ ಮನೆಗೆ ನಾಗಾ ಸಾಧುಗಳು ಭೇಟಿ ನೀಡಿ, ಹರಸಿ ಹೋಗಿದ್ದರು. ನಾಗಾ ಸಾಧುಗಳು ನನ್ನ ಮನೆಗೆ ಬಂದು ಹರಸಿ ಹೋಗಿದ್ದು ನನ್ನ ಪುಣ್ಯ ಎಂದು ರವಿ ಪ್ರತಿಕ್ರಿಯೆ ನೀಡಿದ್ದರು.