ರಾಯಭಾಗ್ ಪೊಲೀಸ್ ಠಾಣೆಗೆ ಶಾಸಕ ರಾಜೀವ್ ಬೆಂಕಿ ಇಡ್ತೀನಿ ಅಂದಿದ್ದೇಕೆ?
ಬೆಳಗಾವಿ ಜಿಲ್ಲೆ ರಾಯಭಾಗ್ ಪೊಲೀಸರು ಜನರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪದಿಂದ ಕೋಪಗೊಂಡಿರುವ ಕುಡಚಿ ಶಾಸಕ ಪಿ.ರಾಜೀವ್, ಹೀಗೆ ಮಾಡಿದರೆ ಪೊಲೀಸ್ ಠಾಣೆಗೆ ಬೆಂಕಿ ಹಾಕ್ತೀನಿ ಎಂದಿದ್ದಾರೆ
ಬೆಳಗಾವಿ, ಜನವರಿ 14: ಬೆಳಗಾವಿ ಜಿಲ್ಲೆ ರಾಯಭಾಗ್ ತಾಲೂಕಿನ ನಿಡಗುಂದಿಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಪ್ರಕರಣದಲ್ಲಿ ಹೆಸರು ಸೇರಿಸಬಾರದು ಅಂದರೆ 45 ಸಾವಿರ ರುಪಾಯಿ ಲಂಚ ಕೊಡುವಂತೆ ಪೊಲೀಸರು ವ್ಯಕ್ತಿಯೊಬ್ಬರಿಗೆ ಬೆದರಿಕೆಯೊಡ್ಡಿದ್ದರು ಎಂದು ಮಾಧ್ಯಮದಲ್ಲಿ ವರದಿಯಾಗಿದೆ.
ಈ ಮಾಹಿತಿ ತಿಳಿದು ಕೋಪಗೊಂಡ ಕುಡಚಿ ಶಾಸಕ ಪಿ.ರಾಜೀವ್, ಅಮಾಯಕ ಜನರನ್ನು ಹೆದರಿಸಿ, ಸುಳ್ಳು ಕೇಸು ದಾಖಲಿಸುವುದಾಗಿ ಹಣಕ್ಕಾಗಿ ಒತ್ತಾಯಿಸಿದರೆ ರಾಯಭಾಗ್ ಸರ್ಕಲ್ ಪೊಲೀಸ್ ಠಾಣೆಗೆ ಬೆಂಕಿ ಹಾಕುವುದಾಗಿ ಹೇಳಿದ್ದಾರೆ. ರಾಜೀವ್ ಕೂಡ ಹಿಂದೆ ಪೊಲೀಸ್ ಅಧಿಕಾರಿಯಾಗಿದ್ದವರು. 2008ರಲ್ಲಿ ಕೆಲಸ ಬಿಟ್ಟು ರಾಜಕೀಯ ಸೇರಿದ್ದರು.
ರಾಯಭಾಗ್ ಸರ್ಕಲ್ ನ ಪೊಲೀಸರು ಮಹಿಳೆಯ ಆತ್ಮಹತ್ಯೆ ಪ್ರಕರಣದಲ್ಲಿ ಸ್ಥಳೀಯರಾದ ಬಸಪ್ಪ ಭಜಂತ್ರಿ ಎಂಬುವರನ್ನು ಸೇರಿಸುವುದಾಗಿ ಹೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರ ಮೇಲೆ ಆಕ್ರೋಶ ವ್ಯಕ್ತಪಡಿಸಿರುವ ರಾಜೀವ್, ಆತ್ಮಹತ್ಯೆ ನಡೆದ ದಿನ ಭಜಂತ್ರಿ ತನ್ನ ಜತೆಯಲ್ಲೇ ಇದ್ದರು ಎಂದು ತಿಳಿಸಿದ್ದಾರೆ.[ಬಿಜೆಪಿ ಶಾಸಕ ರಾಜು ಕಾಗೆ ಬೆಂಬಲಿಗರಿಂದ ಯುವಕನ ಮೇಲೆ ಹಲ್ಲೆ]

ಮೊದಲಿಗೆ ಒಂದು ಲಕ್ಷ ರುಪಾಯಿ ನೀಡುವಂತೆ ಒತ್ತಾಯಿಸಿದ ಪೊಲೀಸರು, ಆ ನಂತರ ಚೌಕಾಶಿ ಮಾಡಿ 45 ಸಾವಿರಕ್ಕೆ ಒಪ್ಪಿದ್ದಾರೆ. ತನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸುವ ಹೆದರಿಕೆಯಿಂದ ಭಜಂತ್ರಿ ಕೆಲ ದಿನ ತಲೆ ತಪ್ಪಿಸಿಕೊಂಡಿದ್ದರು. ಪೊಲೀಸ್ ಠಾಣೆಗಳು ರಾಜಕೀಯ ಡೀಲ್ ಮಾಡುವಂಥ ಅಡ್ಡೆ ಆಗಬಾರದು ಎಂದು ಶಾಸಕ ರಾಜೀವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಚೆಗೆ ಸ್ಥಳೀಯ ಸಂಸ್ಥೆ ಅಧಿಕಾರಿಯೊಬ್ಬರನ್ನು ಶಾಸಕ ರಾಜೀವ್ ಬಯ್ದಾಡುವಂಥ ವಿಡಿಯೋ ಎಲ್ಲೆಡೆ ಹರಿದಾಡಿ ಚರ್ಚೆಗೆ ಕಾರಣವಾಗಿತ್ತು. "ನಿಮಗೆ ಪಗಾರ ಕೊಡೋದು ಸರಕಾರಿ ಭೂಮಿ ಕಾಪಾಡುವುದಕ್ಕೆ. ನಿಮಗೆ ಅದು ಮಾಡುವುದಕ್ಕೆ ಸಾಧ್ಯವಿಲ್ಲ ಅಂದರೆ ವರ್ಗಾವಣೆ ತಗೊಂಡು ಹೋಗಿ" ಎಂದು ಶಾಸಕ ರಾಜೀವ್, ಸರ್ವೇಯರ್ ಒಬ್ಬರಿಗೆ ಹೇಳಿದ್ದ ವಿಡಿಯೋ ಸುದ್ದಿಗೆ ಕಾರಣವಾಗಿತ್ತು.












Click it and Unblock the Notifications