ವಾಮಾಚಾರಕ್ಕೆ ಬಳಸಿದ ಲಿಂಬೆಹಣ್ಣಿನಲ್ಲಿ ಶರಬತ್ ಮಾಡಿ ಕುಡಿದ ಶಾಸಕ
ಬೆಳಗಾವಿ, ನ 6: ಸ್ಮಶಾನದಲ್ಲಿ ಊಟ, ಭಜನೆ, ವಾಸ್ತವ್ಯ ಮುಂತಾದ ಹೆಜ್ಜೆಗಳನ್ನು ಇಟ್ಟು, ಮೂಢನಂಬಿಕೆಯ ವಿರುದ್ದ ಜನಜಾಗೃತಿ ಮಾಡಿಸುವ ಕೆಲಸವನ್ನು ಮಾಡುತ್ತಿರುವ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ, ದೀಪಾವಳಿ ಹಬ್ಬದ ಮುನ್ನಾದಿನ ಇನ್ನೊಂದು ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ.
ತನ್ನ ಒಡೆತನದ ಹೊಲದಲ್ಲಿ ಕಿಡಿಗೇಡಿಗಳು ಮಾಡಿದ ವಾಮಾಚಾರ ಪ್ರಯೋಗಕ್ಕೆ ತಿರುಗೇಟು ನೀಡಲು ಶಾಸಕ ಜಾರಕಿಹೊಳಿ, ಮಾಟಮಂತ್ರಕ್ಕೆ ಪ್ರಯೋಗಿಸಿದ ಲಿಂಬೆಹಣ್ಣಿನಲ್ಲೇ ಶರಬತ್ತು ಮಾಡಿ ಕುಡಿದು, ತಾನು ಇದಕ್ಕೆಲ್ಲಾ ಕ್ಯಾರೇ ಮಾಡುವುದಿಲ್ಲ ಎಂದು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ.
ಗೋಕಾಕ ಸಮೀಪದ ಸತೀಶ್ ಅವರ ಹೊಲದಲ್ಲಿ ಲಿಂಬೆಹಣ್ಣು, ತೆಂಗಿನಕಾಯಿ, ಅರಸಿಣ, ಕುಂಕುಮ, ಬ್ಲೌಸ್ ಪೀಸ್ ಮುಂತಾದವುಗಳನ್ನು ಇಟ್ಟು, ವಾಮಾಚಾರ ಮಾಡಲಾಗಿತ್ತು. ವಾಮಾಚರಕ್ಕೆ ಬಳಸಿದ್ದ ಲಿಂಬೆಹಣ್ಣಿನಿಂದ ಶರಬತ್, ತೆಂಗಿನಕಾಯಿಯನ್ನು ಬಳಸಿ, ಸಾಂಬಾರ್ ಮಾಡಿ ಊಟ ಮಾಡಲಾಗಿದೆ ಎಂದು ಜಾರಕಿಹೊಳಿ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸತೀಶ್ ಜಾರಕಿಹೊಳಿ, ನಾನು ಹಿಂದಿನಿಂದಲೂ ಇದನ್ನೆಲ್ಲಾ ನಂಬುವವನಲ್ಲ. ಮಾಟಮಂತ್ರ ಪ್ರಯೋಗ ಮಾಡಿ ನನ್ನನ್ನು ಹೆದರಿಸಬಹುದು, ಮೂಲೆತಳ್ಳಬಹುದು ಎನ್ನುವ ಭ್ರಮೆಯಲ್ಲಿ ಯಾರಾದರೂ ಇದ್ದರೆ, ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂದು ಹೇಳಿದ್ದಾರೆ.
ಊರಿನ ಬೇರೆ ಜಾಗದಂತೆ ಸ್ಮಶಾನ ಕೂಡಾ ಒಂದು. ಸ್ಮಶಾನಕ್ಕೂ ಒಂದು ಇತಿಹಾಸವಿರುತ್ತದೆ ಎಂದು ಈ ಹಿಂದೆ ಅಬಕಾರಿ ಸಚಿವರಾಗಿದ್ದ ಸತೀಶ್ ಜಾರಕಿಹೊಳಿ ಸ್ಮಶಾನದಲ್ಲಿ ಸಹಭೋಜನ ನಡೆಸಿದ ಉದಾಹರಣೆಗಳಿವೆ.
ಜಿಲ್ಲೆಯ ಪ್ರಭಾವಿ ಕುಟುಂಬವಾಗಿರುವ ಜಾರಕಿಹೊಳಿ ಒಡೆತನದ ಹೊಲದಲ್ಲೇ ವಾಮಾಚಾರ ಮಾಡಿದವರು ಯಾರು ಎನ್ನುವ ಕುತೂಹಲ ತಾಲೂಕಿನಲ್ಲಿ ಮನೆಮಾಡಿದೆ.












Click it and Unblock the Notifications