ಈ ಸಲವಾದರೂ ರಾಮದುರ್ಗ ಸಂತ್ರಸ್ತರಿಗೆ ಪರಿಹಾರ ಕೊಡಿ; ಶಾಸಕ ಯಾದವಾಡ
ಬೆಳಗಾವಿ, ಆಗಸ್ಟ್ 24: ಬೆಳಗಾವಿ ಜಿಲ್ಲೆ ಪ್ರವಾಹಪೀಡಿತ ಪ್ರದೇಶಗಳಲ್ಲಿ ನಾಳೆ ಸಿಎಂ ಬಿಎಸ್ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸಲಿರುವ ಹಿನ್ನೆಲೆಯಲ್ಲಿ ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಅವರು ಇಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರನ್ನು ಭೇಟಿ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲಪ್ರಭಾ ನದಿ ಪ್ರವಾಹದಿಂದ ರಾಮದುರ್ಗ ತಾಲೂಕಿನಲ್ಲಿ ಅಪಾರ ಬೆಳೆಹಾನಿಯಾಗಿದೆ. ಕಬ್ಬು, ಬಾಳೆ, ಹತ್ತಿ, ಗೋವಿನಜೋಳ ಸೇರಿ ಅಪಾರ ಬೆಳೆಗಳು ನಷ್ಟವಾಗಿವೆ. ಸಾಕಷ್ಟು ಮನೆಗಳು ಜಲಾವೃತಗೊಂಡಿವೆ. ಕಳೆದ ಬಾರಿ ಪ್ರವಾಹದ ಪರಿಹಾರ ವಿತರಣೆಯಲ್ಲಿ ರಾಮದುರ್ಗ ರೈತರಿಗೆ ಅನ್ಯಾಯವಾಗಿದೆ. ಹೀಗಾಗಿ ಈ ಬಾರಿ ಸರಿಯಾಗಿ ಬೆಳೆ ಹಾನಿ ಸಮೀಕ್ಷೆಗೆ ಸೂಚಿಸುವಂತೆ ಡಿಸಿಗೆ ಮನವಿ ಮಾಡಿದ್ದೇನೆ. ಕಳೆದ ಬಾರಿ ಆದ ತಪ್ಪುಗಳು ಮರುಕಳಿಸಬಾರದೆಂದು ಮನವರಿಕೆ ಮಾಡಿದ್ದೇನೆ ಎಂದರು.

ನಾಳೆ ಸಿಎಂ ಬಿಎಸ್ ವೈ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ರೈತರಿಗೆ ಅನ್ಯಾಯ ಆಗದಂತೆ ಪರಿಹಾರ ಕೊಡಿಸುವ ಯತ್ನ ಮಾಡಬೇಕಾಗಿದೆ. ರಾಮದುರ್ಗ ತಾಲೂಕಿನಲ್ಲಿ 9 ಗ್ರಾಮ ಸ್ಥಳಾಂತರ ಮಾಡುವ ಅನಿವಾರ್ಯತೆ ಇದೆ. ಈ ಸಂಬಂಧ ಸಿಎಂ, ಕಂದಾಯ ಸಚಿವರಿಗೆ ಮನವಿ ಸಲ್ಲಿಸುತ್ತೇವೆ. ಅವರಾದಿ, ಹಂಪಿಹೊಳಿ, ಕಿಲಬನೂರು ಸೇರಿ 9 ಗ್ರಾಮ ಸ್ಥಳಾಂತರ ಆಗಬೇಕಿದೆ. ಕಳೆದ ಬಾರಿಯ ಪ್ರವಾಹದ ಪರಿಹಾರ ಇನ್ನೂ ಬಂದಿಲ್ಲ. ನಾಳೆ ಸಿಎಂ ಬೆಳಗಾವಿ, ಧಾರವಾಡ ಜಿಲ್ಲೆಯ ಶಾಸಕರ ಸಭೆ ಮಾಡುತ್ತಿದ್ದಾರೆ. ಸಭೆಯಲ್ಲಿ ಸಿಎಂಗೆ ಮನವಿ ಮಾಡಿ ಸೂಕ್ತ ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.












Click it and Unblock the Notifications