ಕನ್ನಡ ಧ್ವಜಸ್ತಂಭ ತೆರವಿಗೆ ಗಡುವು ಕೊಟ್ಟ ಎಂಇಎಸ್
ಬೆಳಗಾವಿ, ಡಿಸೆಂಬರ್ 29; ಗಡಿನಾಡು ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಸದಸ್ಯರು ಪುಂಡಾಟಿಕೆ ಮೆರೆದಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆ ಮುಂದಿನ ಕನ್ನಡ ಧ್ವಜಸ್ತಂಭ ತೆರವಿಗೆ ಎರಡು ದಿನಗಳ ಗಡುವನ್ನು ನೀಡಿದ್ದಾರೆ.
ಮಂಗಳವಾರ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿ ಬಳಿ ಎಂಇಎಸ್ ಸದಸ್ಯರು ಹೈಡ್ರಾಮಾ ನಡೆಸಿದರು. ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜಸ್ತಂಭ ಸ್ಥಾಪನೆಯನ್ನು ಖಂಡಿಸಿ, ಆಕ್ರೋಶ ವ್ಯಕ್ತಪಡಿಸಿದರು.
ಎರಡು ದಿನಗಳಲ್ಲಿ ಅನಧಿಕೃತ ಕನ್ನಡ ಧ್ಚಜ ತೆರವುಗೊಳಿಸುವಂತೆ ಗಡುವು ನೀಡಿದರು. ಧ್ವಜಸ್ತಂಭವನ್ನು ತೆರವು ಮಾಡದಿದ್ದರೆ ಜನವರಿ 1ರಂದು ಮರಾಠಿ ಭಾಷಿಕರಿಂದ ಭಗವಾ ಧ್ವಜ ಹಾರಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

"ಏನೇ ಅನಾಹುತವಾದರೇ ಪೊಲೀಸರೇ ಹೊಣೆ" ಎಂದು ಬೆಳಗಾವಿಯಲ್ಲಿ ಎಂಇಎಸ್ ಯುವ ಸಮಿತಿ ಅಧ್ಯಕ್ಷ ಶುಭಂ ಶೆಲ್ಕೆ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಬೆಳಗಾವಿಯಲ್ಲಿ ಮತ್ತೆ ಕನ್ನಡಿಗರು, ಮರಾಠಿಗರ ನಡುವೆ ಜಟಾಪಟಿ ಆರಂಭವಾಗಿದೆ.
ಸೋಮವಾರ ಕನ್ನಡಪರ ಸಂಘಟನೆಗಳ ಸದಸ್ಯರು ಪಾಲಿಕೆ ಕಚೇರಿ ಮುಂದೆ ಕನ್ನಡ ಧ್ವಜಸ್ತಂಭ ಸ್ಥಾಪಿಸಿದ್ದಾರೆ. ಪೊಲೀಸರು ಅದನ್ನು ತೆರವುಗೊಳಿಸಬಾರದು ಎಂದು ಅಹೋರಾತ್ರಿ ಅಲ್ಲಿಯೇ ಉಳಿದಿದ್ದಾರೆ. ಕನ್ನಡ ಸಂಘಟನೆಗಳ ವಿರುದ್ಧ ಬೆಳಗಾವಿ ಪೊಲೀಸ್ ಆಯುಕ್ತರಿಗೆ ಎಂಇಎಸ್ ದೂರು ನೀಡಿದೆ.
ಅನಧಿಕೃತವಾಗಿ ರಾಷ್ಟ್ರಧ್ವಜದ ಎದುರು ಕನ್ನಡ ಧ್ವಜ ಹಾರಿಸಿದ್ದಾರೆ. ಧ್ವಜಸ್ತಂಭ ಸ್ಥಾಪನೆ ವೇಳೆ ರಾಷ್ಟ್ರಗೀತೆ ಹಾಡಿ ಅಪಮಾನ ಮಾಡಿದ್ದಾರೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್ಗೆ ದೂರನ್ನು ನೀಡಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಗೆ ಗುಂಪು ಗುಂಪಾಗಿ ಬಂದ ಎಂಇಎಸ್ ಸದಸ್ಯರು ಕಚೇರಿ ಎದುರು ರಾಷ್ಟ್ರಗೀತೆ ಹಾಡಿದ್ದಾರೆ. ಭಾರತ್ ಮಾತಾ ಕೀ ಜೈ, ಜೈ ಶಿವಾಜಿ, ಜೈ ಭವಾನಿ ಘೋಷಣೆಯನ್ನು ಕೂಗಿದ್ದಾರೆ.












Click it and Unblock the Notifications